ಬಾರ್ ನಲ್ಲಿ ಸಚಿವ ಸಾ.ರಾ. ಮಹೇಶ್ ಬೆಂಬಲಿಗರ ಪುಂಡಾಟ: ದೂರು ದಾಖಲು
ಮೈಸೂರು, ಜೂನ್ 11 : ಕೆ.ಆರ್. ನಗರದಲ್ಲಿರುವ ಸಚಿವ ಸಾ.ರಾ. ಮಹೇಶ್ ಸಹೋದರನ ಒಡೆತನಕ್ಕೆ ಸೇರಿದೆ ಎನ್ನಲಾದ ಬಾರ್ ನಲ್ಲಿ ನಿನ್ನೆ ತಡ ರಾತ್ರಿ ಸಚಿವರ ಬೆಂಬಲಿಗರು ದಾಂಧಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಎಸ್.ಜಿ.ಆರ್. ರೆಸಿಡೆನ್ಸಿಯಲ್ಲಿರುವ ಬಾರ್ ನಲ್ಲಿ ಘಟನೆ ನಡೆದಿದ್ದು, ಶನಿವಾರ ಮಧ್ಯಾಹ್ನದಿಂದಲೇ ಕುಡಿದು ರಾತ್ರಿ ತನಕ ಪುಂಡರ ಗುಂಪೊಂದು ರಂಪಾಟ ಮಾಡಿದೆ. ಈ ಗಲಾಟೆ ಬಿಡಿಸಲು ಬಂದ ಮಹೇಶ್ ನಾಯಕ್ ಎಂಬಾತನ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಈ ಗುಂಪಿನಲ್ಲಿದ್ದ ಮಿರ್ಲೆ ಗ್ರಾಮದ ಚೇತನ್, ತೇಜಸ್, ಅರುಣ್ ಕುಮಾರ್ ಸೇರಿ ಇತರೆ 10 ಮಂದಿ ಪುಂಡಾಟ ನಡೆಸಿದ್ದು, ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಕ್ಕಸಿಕ್ಕವರ ಮೇಲೆ ಮಾರಂಣಾತಿಕವಾಗಿ ಹಲ್ಲೆ ಮಾಡಿ ದಾಂಧಲೆ ನಡೆಸಿದರೂ ಬಾರ್ ಮ್ಯಾನೇಜರ್ ನಿಯಂತ್ರಿಸಲು ಮುಂದಾಗದಿರುವುದು ಆಶ್ಚರ್ಯಕ್ಕೆ ಎಡೆ ಮಾಡಿದೆ. ಪುಂಡಾಟ ಮಾಡಿದವರು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಬೆಂಬಲಿರು ಎನ್ನಲಾಗಿದೆ.
ಈ ಕಾರಣಕ್ಕೆ ಬಾರ್ ಮ್ಯಾನೇಜರ್ ದೂರು ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುಡುಕರ ಗುಂಪು ಗಲಾಟೆ ನಡೆಸಿರುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.