ಸೂರ್ಯರಶ್ಮಿಯಂತೆ ಕಂಗೊಳಿಸಿದರೇ ಸಾಯಿಬಾಬಾ? ನಿಜಕ್ಕೂ ಇದು ಪವಾಡವೇ?
ಬೆಳಕಿನ ಕಿರಣಗಳು ವ್ಯಕ್ತಿಯ ಸ್ವರೂಪದಂತೆ ಕಂಗೊಳಿಸಿದ್ದು ಹುಣಸೂರಿನ ಸಾಯಿಬಾಬಾ ದೇಗುಲಕ್ಕೆ ಹೊಸ ಪ್ರಸಿದ್ಧಿಯನ್ನು ತಂದಿದೆ.
ಹುಣಸೂರು, ಫೆಬ್ರವರಿ 28: ಇಲ್ಲಿನ ಸಾಯಿಬಾಬಾ ದೇವಾಲಯವೊಂದರಲ್ಲಿ ಬೆಳಕಿನ ಕಿರಣಗಳು ಸಾಯಿಬಾಬಾ ಸ್ವರೂಪ ಪಡೆದು ದೇಗುಲದಲ್ಲಿ ಓಡಾಡಿದೆಯೆಂಬ ಸುದ್ದಿ ಈಗ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡಿದೆ.
ದೇಗುಲದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸಾಯಿಬಾಬಾ ಮೂರ್ತಿಯ ಮುಂದೆ ಮನುಷ್ಯನಾಕೃತಿಯ ಬೆಳಕು ಸೋಮವಾರ (ಫೆ. 28) ಸಂಜೆ ಓಡಾಡಿರುವುದು ದಾಖಲೆಯಾಗಿದೆ. ಇದನ್ನು ಕಂಡ ದೇಗುಲದ ವ್ಯವಸ್ಥಾಪಕರು ಹಾಗೂ ಇತರ ಸಿಬ್ಬಂದಿ ಇದನ್ನು ಪವಾಡ ಎಂದು ನಂಬಿ ಸಾಯಿಬಾಬಾಗೆ ವಿಶೇಷ ಪೂಜೆ ಮಾಡಿಸಿದ್ದಾರೆ.
ಇದು ಗೊತ್ತಾಗಿದ್ದೇ ತಡ, ದೇಗುಲ ಭಕ್ತಾದಿಗಳು ಈ ಕಥೆಗೆ ಮತ್ತಷ್ಟು ರೆಕ್ಕೆ ಪುಕ್ಕಗಳನ್ನು ಸೇರಿಸಿ ಕಥೆ ಕಟ್ಟಿ ಹರಿಯಬಿಟ್ಟಿದ್ದಾರೆ. ಬಾಯಿಂದ ಬಾಯಿಗೆ ಹರಡಿ ಘಟನೆ ನಡೆದು 24 ಗಂಟೆ ಕಳೆಯುವದರೊಳಗಾಗಿ ಎಲ್ಲೆಲ್ಲೂ ಪ್ರಚಲಿತವಾಗಿ ಈ ದೇಗುಲಕ್ಕೆ ಭಕ್ತಾದಿಗಳ ದಂಡೇ ಹರಿದುಬರಲಾರಂಭಿಸಿದೆ.
ಇಷ್ಟೇ ಅಲ್ಲ, ಸಿಸಿಟಿವಿ ಕ್ಯಾಮೆರಾದ ವೀಡಿಯೊ ತುಣುಕುಗಳನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದರಿಂದ ಈ ವಿಚಾರ ವೈರಲ್ ಆಗಿದೆ.