ಮೈಸೂರು ಮೃಗಾಲಯ ಪರಿಶೀಲಿಸಿದ ಅರಣ್ಯ ಸಚಿವ ರಮಾನಾಥ ರೈ
ಮೈಸೂರು, ಜನವರಿ 4: ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಹಕ್ಕಿಜ್ವರದ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಬುಧವಾರ ಮೃಗಾಲಯದ ಪರಿಶೀಲನೆ ನಡೆಸಿದರು. ಆ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮೃಗಾಲಯದಲ್ಲಿ ಹರಡಿರುವ ರೋಗ ಮತ್ತು ಅದರ ನಿವಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಒಂದಷ್ಟು ಸಲಹೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ.
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ಕರಿಕಾಳನ್ ಹಾಗೂ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಅವರೊಂದಿಗೆ ಚರ್ಚೆ ನಡೆಸಿರುವ ಅರಣ್ಯ ಸಚಿವ ರಮಾನಾಥ್ ರೈ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.[ಸಾರ್ವಜನಿಕರಿಗೆ ಫೆಬ್ರವರಿ 2ರವರೆಗೆ ಮೈಸೂರು ಮೃಗಾಲಯ ಪ್ರವೇಶವಿಲ್ಲ]
ಇದೇ ವೇಳೆ ಮೃಗಾಲಯದಲ್ಲಿರುವ ಪ್ರಾಣಿ- ಪಕ್ಷಿಗಳ ಆರೋಗ್ಯ ಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿ ಹಿಂತಿರುಗಿದ್ದಾರೆ. ಸದ್ಯ ಮೃಗಾಲಯದಲ್ಲಿ ವಿರ್ಕಾನ್ ಎಸ್ ಎಂಬ ಔಷಧಿ ಸಿಂಪಡಣೆಯನ್ನು ಮೃಗಾಲಯದ ಸಿಬ್ಬಂದಿ ಮಾಡುತ್ತಿದ್ದಾರೆ. ಮೃಗಾಲಯದ ಪ್ರಾಣಿಗಳು ಮಾತ್ರವಲ್ಲ, ಸಿಬ್ಬಂದಿ ಆರೋಗ್ಯವನ್ನು ಕೂಡ ತಪಾಸಣೆ ನಡೆಸಿ, ರೋಗ ನಿರೋಧಕ ಮಾತ್ರೆಗಳನ್ನು ನೀಡಲಾಗುತ್ತಿದೆ.
ಮೃಗಾಲಯದಲ್ಲಿ 1435ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳಿದ್ದು ಅವುಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವುದು ಮೃಗಾಲಯ ಪ್ರಾಧಿಕಾರದ ಬಹು ದೊಡ್ಡ ಜವಾಬ್ದಾರಿಯಾಗಿದೆ. ಈಗಾಗಲೇ ಮೃಗಾಲಯದಲ್ಲಿ ಹರಡಿರುವ ಅವಿನ್ ಇನ್ ಫ್ಲುಯೆಂಜಾ- ಎಚ್5 ಎನ್ 8 ಎಂಬ ಸೋಂಕು ಬಗ್ಗೆ ಮಾಹಿತಿ ನೀಡಿರುವ ಮೃಗಾಲಯದ ವೈದ್ಯರಾದ ಸುರೇಶ್, ಸೋಂಕು ಗಾಳಿಯ ಮೂಲಕ ಹರಡುವುದು ಸಾಮಾನ್ಯ ಎಂದಿದ್ದಾರೆ.[ಕಬಿನಿ ಹಿನ್ನೀರಲ್ಲಿ 4 ಅಡಿ ಉದ್ದದ ದಂತವಿರುವ ದೈತ್ಯ ಗಾತ್ರದ ಆನೆ]
ಹಕ್ಕಿಗಳಿಗೆ ಸೋಂಕು ಬೇಗ ತಗಲುತ್ತದೆ. ಇದರ ತಡೆಗೆ ಎಲ್ಲ ರೀತಿ ಕ್ರಮಗಳನ್ನು ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಇನ್ನು ಮೃಗಾಲಯ ಬಂದ್ ಆಗಿರುವ ವಿಚಾರ ತಿಳಿಯದೆ ಆಗಮಿಸುತ್ತಿರುವವರು ಬಂದ್ ಆಗಿರುವುದನ್ನು ಕಂಡು ಹಿಂತಿರುಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ವ್ಯಾಪ್ತಿಯಲ್ಲಿ ಪ್ರವಾಸಿಗರನ್ನೇ ನಂಬಿಕೊಂಡು ವ್ಯಾಪಾರ ನಡೆಸುತ್ತಿರುವವರಿಗೂ ಭಾರೀ ಹೊಡೆತ ಬಿದ್ದಿದೆ.