ಸುತ್ತೂರು ಜಾತ್ರೆಯ ಆಕರ್ಷಕ ಚಿತ್ರಗಳನ್ನು ಕಣ್ತುಂಬಿಕೊಳ್ಳಿ
ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಜಾತ್ರೆಯ ಆಕರ್ಷಕ ಚಿತ್ರಗಳು ಇಲ್ಲಿವೆ.
ಮೈಸೂರು, ಜನವರಿ 25 : ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಮೈಸೂರಿಗೆ ಹೋಗಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗದವರಿಗಾಗಿ ಜಾತ್ರೆಯ ಮನಮೋಹಕ ದೃಶ್ಯಗಳನ್ನು ನಾವಿಲ್ಲಿ ಹೊತ್ತು ತಂದಿದ್ದೇವೆ. ನೋಡಿ ಕಣ್ತುಂಬಿಕೊಳ್ಳಿ.[ಸುತ್ತೂರಿನಲ್ಲಿ ಜ್ಯೋತಿಷಿಗಳ ಎಕ್ಕಿಳಿಸಿದ ಸಿಎಂ ಸಿದ್ದರಾಮಯ್ಯ]
ಸುತ್ತೂರು ಜಾತ್ರೆಗೆ ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಗಳವಾರ ಸಂಜೆ ಚಾಲನೆ ನೀಡಿದ್ದರು. ಈ ಸಂದರ್ಭ ಅವರು 23ನೇ ಪೀಠಾಧ್ಯಕ್ಷರಾದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಶಿಕ್ಷಣ ಹಾಗೂ ಸಮಾಜ ಸುಧಾರಣೆಗೆ ಉತ್ತಮ ಅಡಿಪಾಯ ಹಾಕಿದ್ದಾರೆ. 24ನೇ ಪೀಠಾಧ್ಯಕ್ಷರಾದ ಈಗಿನ ದೇಶಿಕೇಂದ್ರ ಸ್ವಾಮೀಜಿ ಈ ಅಡಿಪಾಯದ ಮೇಲೆ ಭವ್ಯ ಸೌಧ ನಿರ್ಮಿಸಿದ್ದಾರೆ ಎಂದು ಶ್ಲಾಘಿಸಿದ್ದರು.[ಮೈಸೂರಿನ ಸುತ್ತೂರು ಜಾತ್ರೆಗೆ ಕಳೆಗಟ್ಟಿದ ಜನಜಾತ್ರೆ]
ಜಾತ್ರೆಯ ವಿಶೇಷವಾಗಿ ಬುಧವಾರ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು. ಸಾಮೂಹಿಕ ಮದುವೆ, ಜಾತ್ರೆಯ ಸೊಬಗು, ಕಾರಂಜಿನ ಮುಂತಾದ ಅಪರೂಪದ ಚಿತ್ರಗಳು ಇಲ್ಲಿವೆ.
ಮನಸೆಳೆದ ಅಲಂಕಾರ
ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಈ ಬಾರಿ ಜ.24ರಿಂದ 29 ರವರೆಗೆ ಆರು ದಿನಗಳ ಕಾಲ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯ ವಹಿಸುತ್ತಿದ್ದಾರೆ. ಈಗಾಗಲೇ ಖುದ್ದು ಸ್ವಾಮೀಜಿಗಳೇ ಮನೆಮನೆಗೆ ತೆರಳಿ ಮಹಾಪ್ರಸಾದಕ್ಕಾಗಿ 1000ಕ್ವಿಂಟಲ್ ಭತ್ತ ಮತ್ತು 10ಲಕ್ಷ ರೂ.ಸಂಗ್ರಹಿಸಿದ್ದಾರೆ.
ತರಕಾರಿಯ ಅಲಂಕಾರ
ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಂಗಳವಾರ ಜಾತ್ರೆಯ ಪ್ರಯುಕ್ತ ನಂದಿಗೆ ತರಕಾರಿಯ ಅಲಂಕಾರ ಮಾಡಲಾಯಿತು. ತರಕಾರಿಗಳಿಂದಲೇ ಮಾಡಿದ ಮಾಲೆಗಳಲ್ಲಿ ನಂದಿ ನೋಡುಗರ ಆಕರ್ಷಣೆಯ ಕೇಂದ್ರವಾಗಿತ್ತು.
ಬಣ್ಣ ಬಣ್ಣದ ಕಾರಂಜಿ
ಸುತ್ತೂರು ಮಠದ ಆವರಣದಲ್ಲಿ ಇರುವ ಕಾರಂಜಿ ನೋಡುಗರ ಮನ ಸೆಳೆದಿತ್ತು. ರಾತ್ರಿ ವೇಳೆ ಜಾತ್ರೆಗೆ ಬಂದವರು ಬಣ್ಣ ಬಣ್ಣದ ಕಾರಂಜಿಯನ್ನು ವೀಕ್ಷಿಸಿ ಮುದಗೊಂಡರು.
ಸ್ವಾಮೀಜಿಗಳ ನೌಕಾ ವಿಹಾರ
ಜಾತ್ರೆಯ ಹಿನ್ನಲೆಯಲ್ಲಿ ಮಮಹಾಸ್ವಾಮಿಗಳು ಬುಧವಾರ ನೌಕಾ ವಿಹಾರ ಕೈಗೊಂಡರು. ಅವರಿಗೆ ಮಠದ ಪದಾಧಿಕಾರಿಗಳು ಸಾಥ್ ನೀಡಿದರು. ಜಾತ್ರೆಯಲ್ಲಿ ಜ.26 ರಂದು ಮಕ್ಕಳಿಗಾಗಿ ಗಾಳಿಪಟ ಸ್ಪರ್ಧೆ, ಜ.27 ರಂದು ವಿವಿಧ ದೇಸಿ ಆಟಗಳೂ, ಜ 28 ರಂದು ಕುಸ್ತಿ ಪಂದ್ಯಾವಳಿ, ಜ. 29 ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಸ್ಥಳದಲ್ಲೇ ಚಿತ್ರ ರಚಿಸುವ ಸ್ಪರ್ಧೆಗಳು ನಡೆಯಲಿವೆ.
ಕಂಗೊಳಿಸಿದ ವಧು-ವರರು
ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಸಾಮೂಹಿಕ ವಿವಾಹ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಇದುವರೆಗೂ 2038 ಜೋಡಿಗಳು ಸತಿ ಪತಿಗಳಾಗಿದ್ದು, ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ 159 ಜೋಡಿಗಳು ಸಪ್ತಪದಿ ತುಳಿದಿದ್ದಾರೆ.
ವಧು -ವರರಿಗೆ ಸಮವಸ್ತ್ರದ ಉಡುಗೆ
ಸಾಮೂಹಿಕ ವಿವಾಹದಲ್ಲಿ ಈ ಬಾರಿ 17ವಿಶೇಷ ಜೋಡಿಗಳು ಕಂಡು ಬಂತು. ವೀರಶೈವ 13, ಹಿಂದುಳಿದ ವರ್ಗದ 40, ಪರಿಶಿಷ್ಟ ಜಾತಿಯ 96, ಪರಿಶಿಷ್ಟಪಂಗಡದ 10ಮಂದಿ ಹಸೆ ಮಣೆ ಏರಿದ್ದಾರೆ. ಅಂತರ್ಜಾತಿ 7, ತಮಿಳುನಾಡು 5, ಕೇರಳ 1, ಅಂಗವಿಕಲ 3, ವಿಧವೆ-ವಿಧುರ-1 ವಿಶೇಷ ಜೋಡಿಗಳಾಗಿವೆ.
ಆಕರ್ಷಕ ಮೆರವಣಿಗೆ
ನೂತರನ ವಧು ವರರ ಮೆರವಣಿಗೆ ಆಕರ್ಷನೀಯವಾಗಿತ್ತು. ಸಾವಿರಾರು ಜನರು ನೂತನ ವಧುವರರನ್ನು ಕಣ್ತುಂಬಿಕೊಂಡರು. ಮಠದ ಕಡೆಯಿಂದ ವಧುವಿಗೆ ಸೀರೆ, ಮಾಂಗಲ್ಯ, ಕಾಲುಂಗುರ ಮತ್ತು ವರನಿಗೆ ಪಂಚೆ ಹಾಗೂ ಶರ್ಟ್ ನ್ನು ನೀಡಲಾಗಿತ್ತು. ಈ ಸಂದರ್ಭ ಹಲವು ಗಣ್ಯರು ಉಪಸ್ಥಿತರಿದ್ದರು.