ಮರಕ್ಕೆ ನೇಣು ಬಿಗಿದುಕೊಂಡು ಪ್ರಿಯಕರನೊಂದಿಗೆ ವಿವಾಹಿತೆ ಆತ್ಮಹತ್ಯೆ
ಎಂಟು ತಿಂಗಳ ಮಗುವಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆ.ಆರ್.ನಗರ ತಾಲೂಕಿನ ಬಳಿ ಜಮೀನಿನಲ್ಲಿ ಒಂದೇ ವೇಲ್ ನಿಂದ ಇಬ್ಬರೂ ನೇಣು ಹಾಕಿಕೊಂಡಿದ್ದಾರೆ.
ಮೈಸೂರು, ಡಿಸೆಂಬರ್ 21: ವಿವಾಹಿತೆಯೊಬ್ಬರು ಪ್ರಿಯಕರನೊಂದಿಗೆ ಒಂದೇ ವೇಲಿನಿಂದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ನಗರ ಪಟ್ಟಣದ ಮಧುವನಹಳ್ಳಿ ಬಡಾವಣೆ ಜಮೀನಿನಲ್ಲಿ ನಡೆದಿದೆ. ಮಾವತ್ತೂರು ಗ್ರಾಮದ ಪೂಜಾಶ್ರೀ(21) ಮತ್ತು ನಂಜನಗೂಡು ತಾಲೂಕಿನ ಗೋನಹಳ್ಳಿಯ ಸೋಮಶೇಖರ್(26) ನೇಣಿಗೆ ಶರಣಾದವರು.
ಮೃತ ಪೂಜಾಶ್ರೀಯನ್ನು ಗೋನಹಳ್ಳಿಯ ಜಗದೀಶ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಆತನ ಸ್ನೇಹಿತ ಸೋಮಶೇಖರ ಪೂಜಾಶ್ರೀಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಆಕೆಯ ಮನೆಯವರಿಗೆ ತಿಳಿದು, ಪೂಜಾಶ್ರೀಗೆ ಬುದ್ಧಿವಾದ ಹೇಳಿದ್ದರು. ಆದರೆ ಮನೆಯವರ ಮಾತು ಕೇಳದ ಪೂಜಾ, ಪ್ರಿಯಕರ ಸೋಮಶೇಖರನಿಂದ ದೂರವಿರಲು ಒಪ್ಪಿರಲಿಲ್ಲ.[ಭಾರತೀಯ ಸೇನೆಯ ಮಹಿಳಾ ಅಧಿಕಾರಿ ಆತ್ಮಹತ್ಯೆ]
ಈ ನಡುವೆ ಕೆ.ಆರ್.ನಗರಕ್ಕೆ ಬರುವಂತೆ ಸೋಮಶೇಖರನಿಗೆ ಕರೆ ಮಾಡಿ ಹೇಳಿದ್ದಾಳೆ. ಇತ್ತ ತಮ್ಮ ಮನೆಯವರಿಗೆ ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿ ಬಂದ ಪೂಜಾಶ್ರೀ, ಪ್ರಿಯಕರನೊಂದಿಗೆ ಮಧುವನಹಳ್ಳಿಯ ಸಮೀಪದ ಜಮೀನಿಗೆ ತೆರಳಿ ಮರವೊಂದಕ್ಕೆ ಒಂದೇ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.[ಜನಪ್ರಿಯ ಧಾರಾವಾಹಿಯ ನಟ ಆತ್ಮಹತ್ಯೆಗೆ ಶರಣು!]
ಮೃತ ಪೂಜಾಶ್ರೀಗೆ 8 ತಿಂಗಳ ಗಂಡು ಮಗುವಿದ್ದು, ಚೊಚ್ಚಲ ಹೆರಿಗೆಗಾಗಿ ಸ್ವಗ್ರಾಮ ಮಾವತ್ತೂರಿಗೆ ಆಗಮಿಸಿದ್ದಳು. ಈ ವೇಳೆ ಪ್ರಿಯಕರನ ಸಂಪರ್ಕದಲ್ಲಿದ್ದ ಆಕೆ ಮತ್ತೆ ಗಂಡನ ಮನೆಗೆ ಹೋಗಲು ಇಷ್ಟವಿಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಕೆ.ಆರ್.ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಕಾಂತ್, ಎಎಸ್ಐ ತಿರುಮಲೇಶ್ ಸಿಬ್ಬಂದಿ ಶ್ರೀಕಂಠ ಭೇಟಿ ನೀಡಿದ್ದು, ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.