ಇದೆಂಥಾ ದೌರ್ಜನ್ಯ: ಗೀಕಳ್ಳಿಯ ಈ ಕುಟುಂಬಕ್ಕೆ ಕಂಟಕವಾಯ್ತು ಬಹಿಷ್ಕಾರ
ಮೈಸೂರು, ಆಗಸ್ಟ್ 1 : ಅಭಿವೃದ್ಧಿಯ ಕನಸು ಕಾಣುತ್ತಿರುವ ಭಾರತ ದೇಶದಲ್ಲಿ ಇನ್ನೂ ಬಹಿಷ್ಕಾರ ಎಂಬ ಸಾಮಾಜಿಕ ಪಿಡುಗು ಮುಂದುವರಿದೇ ಇದೆ. ನಂಜನಗೂಡು ತಾಲೂಕಿನ ಗೀಕಳ್ಳಿಯಲ್ಲಿ ಈ ಪೆಡಂಭೂತ ಕಾಣಿಸಿಕೊಂಡು ಬಡ ಕುಟುಂಬವೊಂದನ್ನು ನರಳಿಸುತ್ತಿದೆ.
ಹೌದು, ನೀವು ನಂಬಲೇಬೇಕು. ಹಲವು ತಿಂಗಳಿಂದ ಗ್ರಾಮದಲ್ಲಿ ಬಹಿಷ್ಕಾರಕ್ಕೊಳಗಾಗಿ ನೊಂದ ಕುಟುಂಬವೊಂದು ಬದುಕು ದುರ್ಬರವೆನಿಸಿದಾಗ ತಾಲೂಕು ಆಡಳಿತಕ್ಕೆ ಕಡೆಗೂ ದೂರು ನೀಡುವ ಧೈರ್ಯ ಮಾಡಿದೆ.
ದೂರು ಹಿಂಪಡೆಯದ ಅತ್ಯಾಚಾರ ಸಂತ್ರಸ್ತೆಗೆ ಬಹಿಷ್ಕಾರದ ಶಿಕ್ಷೆ!
ತನ್ನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಗೀಕಳ್ಳಿ ಗ್ರಾಮದ ಮಹದೇವು, ಪತ್ನಿಯೊಂದಿಗೆ ಪಟ್ಟಣಕ್ಕೆ ಬಂದು ತಹಸೀಲ್ದಾರರಿಗೆ ಲಿಖಿತವಾಗಿ ದೂರು ನೀಡಿದ್ದಾರೆ.
"ಕೂಲಿ ಕೆಲಸ ಮಾಡುವಲ್ಲಿ ಯಜಮಾನರು ಇಲ್ಲಸಲ್ಲದ ಮಾತನಾಡುತ್ತಾರೆ. ಮಾಡಲಾಗದಂತಹ ಕೆಲಸಗಳನ್ನು ಹೇಳುತ್ತಾರೆ. ಅವರ ಸೂಚನೆಗಳನ್ನು ನಾನು ಕೇಳಲಿಲ್ಲ ಎಂಬ ಏಕೈಕ ಕಾರಣವನ್ನೇ ಮುಂದಿಟ್ಟುಕೊಂಡು ದ್ವೇಷ ಸಾಧಿಸಿದ್ದಾರೆ. ಗ್ರಾಮದ ಮುಖಂಡರನ್ನು ಒಟ್ಟಾಗಿಸಿಕೊಂಡು ನಮ್ಮ ಕುಟುಂಬಕ್ಕೆ ಬಹಳ ದಿನಗಳಿಂದ ಬಹಿಷ್ಕಾರ ಹಾಕಿದ್ದಾರೆ" ಎಂದು ಮಹದೇವ ಅವರು ದೂರಿನಲ್ಲಿ ವಿವರಿಸಿದ್ದಾರೆ.
ಮಹದೇವು ಗೀಕಳ್ಳಿಯಲ್ಲೇ ಕೂಲಿ ಕೆಲಸ ಮಾಡಿಕೊಂಡು ಪತ್ನಿ, ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಗಂಡ ಹೆಂಡತಿ ಕೂಲಿ ಕೆಲಸ ಮಾಡಿದರಷ್ಟೇ ಕುಟುಂಬದ ನಿರ್ವಹಣೆ ಸಾಧ್ಯ. ಈಗ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವುದರಿಂದ ಯಾರೊಬ್ಬರೂ ಅವರನ್ನು ಕೂಲಿ ಕೆಲಸಕ್ಕೆ ಕರೆಯುತ್ತಿಲ್ಲ.
ಅಲ್ಲದೇ, ಗ್ರಾಮದಲ್ಲಿನ ಉತ್ಸವ ಮತ್ತಿತರ ಸಮಾರಂಭಗಳಿಗೂ ಅವರ ಕುಟುಂಬದವರನ್ನು ಸೇರಿಸುತ್ತಿಲ್ಲ. ಗ್ರಾಮದ ಯಾರೊಬ್ಬರೂ ಹಬ್ಬ-ಹರಿದಿನಗಳಿಗೆ ನಮ್ಮ ಮನೆಗೆ ಬರುತ್ತಿಲ್ಲ, ಅವರ ಮನೆಗೂ ನಮ್ಮನ್ನು ಸೇರಿಸಿಕೊಳ್ಳುತ್ತಿಲ್ಲ ಎಂದು ಮಹದೇವು ಮತ್ತು ಪತ್ನಿ ಅಲವತ್ತುಕೊಂಡಿದ್ದಾರೆ.
ಮಹದೇವು ಕಳೆದ 5 ವರ್ಷಗಳಿಂದ ತಮ್ಮದೇ ಸಮುದಾಯದ ಜನರಿಂದ 25 ಸಾವಿರ ಹಣ ನೀಡಿ ನಿವೇಶನವೊಂದನ್ನು ಪಡೆದಿದ್ದರು. ಆದರೆ ಗ್ರಾಮದ ಕೆಲವು ಮುಖಂಡರು ನಿವೇಶನವನ್ನು ರಿಜಿಸ್ಟರ್ ಮಾಡಲು ಇನ್ನೂ ಹೆಚ್ಚಿನ ಹಣವನ್ನು ನೀಡಬೇಕು. ಸ್ವಲ್ಪ ಹಣವನ್ನು ಪಂಚಾಯತಿಗೂ ನೀಡಬೇಕು ಎಂದು ಕುಟುಂಬದ ಮೇಲೆ ಒತ್ತಡ ಹೇರಿದ್ದರು.
ಆದರೆ ಮಹದೇವ ಕುಟುಂಬ ಇದಕ್ಕೆ ಒಪ್ಪದಿದ್ದಾಗ ಸಾಮಾಜಿಕ ಬಹಿಷ್ಕಾರವನ್ನು ಕಳೆದ 2 ವರ್ಷಗಳಿಂದ ಹಾಕಿದ್ದಾರಂತೆ. ಸ್ವಜಾತಿಯವರೇ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿ ಶಿಕ್ಷೆ ನೀಡುತ್ತಿದ್ದಾರೆ. ಅದನ್ನು ತಪ್ಪಿಸಿ ನ್ಯಾಯ ಕೊಡಿಸಿಕೊಡಬೇಕೆಂದು ಮಹದೇವು ಮತ್ತು ಪತ್ನಿ ತಹಸೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.
ಪ್ರಜಾಪ್ರಭುತ್ವ ದೇಶದಲ್ಲಿ ಹೀಗೆ ಬಹಿಷ್ಕಾರ ಹಾಕುವುದು ಎಷ್ಟು ಸರಿ? ಗಾಮದಲ್ಲಿ ಸುರಕ್ಷಿತವಾಗಿ ಬದುಕಬೇಕಾದ ನಮ್ಮ ಕುಟುಂಬ ಬಹಿಷ್ಕಾರ ಕಾರಣ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.
ಗ್ರಾಮದಲ್ಲಿ ದೈನಂದಿನ ಬದುಕಿನಲ್ಲಿ ನೆರೆಹೊರೆಯವರ ಜತೆ ಸೇರಲಾಗದೇ ಕುಗ್ಗಿ ಹೋಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. ಬಹಿಷ್ಕಾರವೆಂಬ ಅಮಾನವೀಯ ಶಿಕ್ಷೆಯಿಂದ ತಮ್ಮ ಕುಟುಂಬವನ್ನು ಪಾರು ಮಾಡಿ ಎಂದು ತಾಲೂಕು ದಂಡಾಧಿಕಾರಿಯೂ ಆದ ತಹಸಿಲ್ದಾರ್ ದಯಾನಂದ ಅವರಲ್ಲಿ ಮಹದೇವ ಮನವಿ ಮಾಡಿದ್ದಾರೆ.