ಲಾರಿ ಹಿಂದಕ್ಕೆ ತೆಗೆಯುವಾಗ ಬೈಕ್ ಗೆ ಡಿಕ್ಕಿಯಾಗಿ ಅಣ್ಣ –ತಂಗಿ ಸಾವು
ಮೈಸೂರು, ಜುಲೈ 12 : ಹಿಂಬದಿಯಿಂದ ಬಂದ ಲಾರಿಗೆ ಬೈಕ್ ಡಿಕ್ಕಿಯಾಗಿ ಅಣ್ಣ- ತಂಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ರಾಮನಾಥಪುರ ರಸ್ತೆಯ ಬಳಿ ಇರುವ ಚಾಣಕ್ಯ ಸ್ಕೂಲ್ ಬಳಿ ಈ ಘಟನೆ ಸಂಭವಿಸಿದೆ. ಗೊರಹಳ್ಳಿ ಗ್ರಾಮದ ಜಗದೀಶ್ ಎಂಬುವವರ ಮಕ್ಕಳಾದ ಅಮೋಘ (19 ) ಹಾಗೂ ಅಶ್ವಿನಿ ( 14) ಮೃತಪಟ್ಟವರು. ಜಗದೀಶ್ ಪಿರಿಯಾಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾರೆ.
ರಕ್ತಸಿಕ್ತ ಶವದೆದುರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದೇ? ಇದೇನಾ ಮಾನವೀಯತೆ?!
ಬೆಟ್ಟದಪುರ -ಹಾಸನ ರಾಜ್ಯ ಹೆದ್ದಾರಿಯಲ್ಲಿರುವ ವೇ ಬ್ರಿಡ್ಜ್ ನಿಂದ ಏಕಾಏಕಿ ಲಾರಿ ಹಿಂದಕ್ಕೆ ಬಂದಿದ್ದು, ಈ ವೇಳೆ ಲಾರಿಗೆ ಬೈಕ್ ಅಪ್ಪಳಿಸಿದೆ. ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸ್ಥಳಾವಕಾಶ ನೀಡದೆ ವೇ ಬ್ರಿಡ್ಜ್ ಗೆ ಅನುಮತಿ ಕೊಟ್ಟಿರುವುದೇ ಇವರಿಬ್ಬರ ಸಾವಿಗೆ ಕಾರಣ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಜಗದೀಶ್ ಅವರಿಗೆ ಹೇಳದೇ ಬೈಕ್ ತೆಗೆದುಕೊಂಡು ಹೋಗಿದ್ದ ಇಬ್ಬರು ಮಕ್ಕಳು ದುರಂತ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.