ಕಾಮಗಾರಿ ಅವ್ಯವಹಾರ: ಮೈಸೂರಿನ ರಸ್ತೆಗೂ ಲೋಕಾಯುಕ್ತ ಚಾಟಿ
ಮೈಸೂರು, ಫೆಬ್ರವರಿ 9 : ಮೈಸೂರಿನ ಅರಮನೆ ಸುತ್ತಲಿನ ರಾಜಪಥ ಕಾಮಗಾರಿಯಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ.
ಹಾರ್ಡಿಂಗ್ ವೃತ್ತದಲ್ಲಿ ರಾಜಮಾರ್ಗ ಕಾಮಗಾರಿಯ ಗುಣಮಟ್ಟ ಪರಿಶೀಲನೆಯನ್ನು ಆರಂಭಿಸಿದ ಲೋಕಾಯುಕ್ತರ ತಂಡವು ದಾಖಲೆಗಳ ಪರಿಶೀಲನೆ ನಡೆಸಿತು. ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಅವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಾರ್ಯಪಾಲಕ ಅಭಿಯಂತರ ಹಾಗೂ ತನಿಖಾಧಿಕಾರಿ ಜಯಕುಮಾರ್ ಅವರು, ರಾಜಪಥದ ಕಾಮಗಾರಿಗಳ ಗುಣ ಮಟ್ಟವನ್ನು ಪರಿಶೀಲಿಸಿದರು. ಈ ರಾಜಮಾರ್ಗ ಹಾದು ಹೋಗಿರುವ ಸ್ಥಳಗಳಲ್ಲಿ ಕಾಮಗಾರಿಯನ್ನು 2 ದಿನಗಳ ಕಾಲ ಸಂಪೂರ್ಣವಾಗಿ ಪರಿಶೀಲಿಸಲಾಗುವುದು. ಆ ಬಳಿಕ ವರದಿ ಸಿದ್ಧಪಡಿಸಿ ಲೋಕಾಯುಕ್ತದ ಉನ್ನತಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಎಸಿಬಿ ಬಲೆಗೆ ಹಳಿಯಾಳ ನೀರಾವರಿ ಇಲಾಖೆಯ ಲ್ಯಾಬ್ ಅಸಿಸ್ಟೆಂಟ್ ಹುಲಿ
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ನಗರೋತ್ಥಾನ ಯೋಜನೆಯಡಿ ಮೈಸೂರು ನಗರದ ಅಭಿವೃದ್ಧಿಗೆಂದು 100 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದ್ದರು. ಒಟ್ಟು 5 ಕಿ.ಮೀ ಉದ್ದ ಎಂದು ನಿಗದಿಯಾಗಿದ್ದ ಕಾಮಗಾರಿಯನ್ನು ಆರಂಭಿಸುವ ವೇಳೆಗೆ 1.4 ಕಿ.ಮೀ.ಗೆ ಸೀಮಿತಗೊಳಿಸಲಾಯಿತು. ಒಟ್ಟು 16 ಕೋಟಿ ರೂ.ಗಳಿಗೆ 2010- 11 ನೇ ಸಾಲಿನಲ್ಲಿ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆಯಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಕಾಮಗಾರಿಯ ಅಂದಾಜು ದರಕ್ಕಿಂತ ಶೇ.96.10ರಷ್ಟು ಹೆಚ್ಚುವರಿ ಹಣವನ್ನು ಗುತ್ತಿಗೆದಾರರಿಗೆ ಪಾವತಿಸುವಂತೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಹಾಗೂ ಪಾಲಿಕೆ ಆಯುಕ್ತರಾಗಿದ್ದ ಸಿ.ಜಿ.ಬೆಟಸೂರಮಠ ಅವರು ಆದೇಶಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇದೇ ವೇಳೆ ಗುತ್ತಿಗೆದಾರರಿಗೆ ಶೇ.96.10ರಷ್ಟು ಹೆಚ್ಚುವರಿ ಹಣ ಪಾವತಿ ಮಾಡುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 25.80 ಕೋಟಿ ರೂ. ನಷ್ಟವಾಗಲಿದೆ ಎಂದು ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ದೂರು ಸಲ್ಲಿಸಿದ್ದರು. ಈ ಹೆಚ್ಚುವರಿ ಹಣ ಪಾವತಿ ವ್ಯವಹಾರದಲ್ಲಿ ಅಂದಿನ ಪಾಲಿಕೆ ಆಯುಕ್ತ ಸಿ.ಜಿ.ಬೆಟಸೂರಮಠ, ಅಂದು ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಹಾಗೂ ಗುತ್ತಿಗೆದಾರರ ನಡುವೆ ಆಂತರಿಕ ಒಪ್ಪಂದ ನಡೆದಿರು ವುದು ಮೇಲುನೋಟಕ್ಕೆ ಕಾಣಬರುತ್ತಿದೆ. ಹಾಗಾಗಿ ತಪ್ಪಿತಸ್ಥರಾದ ಮೂವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರಿಗೆ ನೀಡಿದ್ದ ದೂರಿನಲ್ಲಿ ನಂದೀಶ್ ಪ್ರೀತಂ ಕೋರಿದ್ದರು.