ಕೋಣನೂರಲ್ಲಿ ಮತ್ತೆ ಭಯಹುಟ್ಟಿಸಿದ ಚಾಣಾಕ್ಷ ಚಿರತೆ
ಮೈಸೂರು, ಆಗಸ್ಟ್ 05 : ನಂಜನಗೂಡು ತಾಲೂಕಿನ ಕೋಣನೂರು ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಅರಣ್ಯ ಇಲಾಖೆಯ ಬೋನಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಾ ಓಡಾಡುತ್ತಿರುವ ಚಿರತೆ ಇದೀಗ ಗ್ರಾಮದ ರೈತರೊಬ್ಬರ ಸಾಕುನಾಯಿಯನ್ನು ಎಳೆದೊಯ್ದಿರುವುದು ಗ್ರಾಮಸ್ಥರು ಇನ್ನಷ್ಟು ಭಯಪಡುವಂತೆ ಮಾಡಿದೆ.
ಕಾಡಂಚಿನ ಗ್ರಾಮವಾದ ಕೋಣನೂರಿನಲ್ಲಿ ಒಂದಲ್ಲ ಒಂದು ಕಾಡುಪ್ರಾಣಿಗಳ ಹಾವಳಿ ಇದ್ದೇ ಇರುತ್ತದೆ. ಕೃಷಿ ಮಾಡಿ ಫಸಲು ಬರುವ ಸಮಯದಲ್ಲಿ ಕಾಡಾನೆಗಳು ದಾಳಿ ಮಾಡಿ ತಿಂದು ತುಳಿದು ನಾಶ ಮಾಡಿದರೆ, ಚಿರತೆಯಂತಹ ಕ್ರೂರ ಪ್ರಾಣಿಗಳು ಸಾಕುಪ್ರಾಣಿಗಳನ್ನು ತಿಂದು ಹಾಕುತ್ತಿವೆ. ಇದರಿಂದ ಗ್ರಾಮದ ರೈತರು ಜೀವನ ನಡೆಸುವುದೇ ದುಸ್ತರವಾಗುತ್ತಿದೆ.[ಹುಣಸೂರು ತಾಲೂಕಿನ ಗ್ರಾಮಸ್ಥರ ನಿದ್ದೆಕೆಡಿಸಿದ್ದ ಚಿರತೆ ಸೆರೆ]
ಕಳೆದ ಎರಡು ವರ್ಷಗಳ ಹಿಂದೆ ಚಿರತೆ ಬೋನಿಗೆ ಸಿಕ್ಕಿಬಿದ್ದಿತ್ತಾದರೂ ಅದು ಬಳಿಕ ತಪ್ಪಿಸಿಕೊಂಡಿತ್ತು. ಆ ನಂತರ ಅದನ್ನು ಹಿಡಿಯುವ ಪ್ರಯತ್ನ ಮಾಡಿದರೂ ಇದುವರೆಗೂ ಸಿಕ್ಕಿ ಬೀಳುತ್ತಲೇ ಇಲ್ಲ. ಈಗ ಗ್ರಾಮದ ಬೆಳ್ಳಪ್ಪ ಎಂಬುವರ ತೋಟದ ಮನೆಯ ಜಾನುವಾರುಗಳ ಕೊಟ್ಟಿಗೆ ಬಳಿ ಕಟ್ಟಿಹಾಕಿದ್ದ ನಾಯಿಯನ್ನೇ ಕೊಂದು ಎಳೆದೊಯ್ದು ಪೊದೆಯಲ್ಲಿ ತಿಂದು ಹಾಕಿದೆ.[ನಂಜನಗೂಡು ಕಾಡಂಚಿನ ಜನರ ನಿದ್ದೆಗೆಡಿಸಿದ ಚಿರತೆ]
ಚಿರತೆ ಬಂದಿರುವುದಕ್ಕೆ ಅದರ ಹೆಜ್ಜೆ ಮತ್ತು ಎಳೆದೊಯ್ದ ಗುರುತು ಜಮೀನಿನಲ್ಲಿ ಮೂಡಿದೆ. ಈ ಚಿರತೆ ಎಷ್ಟೊಂದು ಚಾಣಾಕ್ಷತನ ಮೆರೆದಿದೆ ಎಂದರೆ, ಜಮೀನಿಗೆ ಸೋಲಾರ್ ಅಳವಡಿಸಿರುವುದರಿಂದ ಮರವನ್ನೇರಿ, ಅಲ್ಲಿಂದ ಜಮೀನಿಗೆ ನೆಗೆದು ಜಾನುವಾರು ಕೊಟ್ಟಿಗೆಗೆ ಬಂದಿದೆ. ಆದರೆ ಕೊಟ್ಟಿಗೆಯ ಬಾಗಿಲಿಗೆ ಬೀಗ ಹಾಕಿದ್ದರಿಂದ ಒಳ ನುಗ್ಗಲು ಸಾಧ್ಯವಾಗದೆ ಸಮೀಪದಲ್ಲಿ ಕಟ್ಟಿಹಾಕಿದ ನಾಯಿಯನ್ನು ಕೊಂದು ಎಳೆದೊಯ್ದಿದೆ.[ಜಾನುವಾರುಗಳಿಗೆ ಕಂಟಕವಾಗಿದ್ದ ಗಂಡು ಚಿರತೆ ಸೆರೆ]
ಈ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದ ಜನ ಭಯಭೀತರಾಗಿದ್ದಾರೆ. ಜಮೀನಿನಲ್ಲಿ ಹೇಗಪ್ಪಾ ಕೆಲಸ ಮಾಡುವುದೆಂಬ ಆತಂಕ ಅವರಲ್ಲಿ ಶುರುವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಸ್ಥಳ ಪರಿಶೀಲನೆ ಮತ್ತು ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದು, ಬೋನಿಟ್ಟು ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ. ಆದರೆ ಚಿರತೆ ಬೋನಿಗೆ ಬೀಳುವ ಲಕ್ಷಣಗಳಿಲ್ಲ. ಹೀಗಾಗಿ ಗ್ರಾಮಸ್ಥರು ಭಯದಿಂದಲೇ ಬದುಕು ಸಾಗಿಸುವಂತಾಗಿದೆ.