ಎಚ್.ಡಿ.ಕೋಟೆ ಗಂಗಡಹೊಸಹಳ್ಳಿಯಲ್ಲಿ ರೈತರ ಮೇಲೆ ಚಿರತೆ ದಾಳಿ
ಮೈಸೂರು, ಸೆಪ್ಟೆಂಬರ್ 7: ರೈತರ ಮೇಲೆ ಚಿರತೆಯೊಂದು ದಾಳಿ ಮಾಡಿದ ಪರಿಣಾಮ ತೀವ್ರ ಗಾಯಗೊಂಡ ಘಟನೆ ಎಚ್.ಡಿ.ಕೋಟೆ ತಾಲೂಕಿನ ಗಂಗಡಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕೃಷ್ಣೇಗೌಡ (35) ತೀವ್ರವಾಗಿ ಗಾಯಗೊಂಡ ರೈತ. ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಅಲ್ಲೇ ಇದ್ದ ಚಿರೆತೆ ಏಕಾಏಕಿ ದಾಳಿ ನಡೆಸಿದೆ. ದಾಳಿ ವೇಳೆ ಕೃಷ್ಣೇಗೌಡ ತೀವ್ರವಾಗಿ ಗಾಯಗೊಂಡಿದ್ದಾರೆ. ತಲೆ, ಮೂಗು, ಕಣ್ಣಿನ ಭಾಗಗಳಿಗೆ ಗಾಯವಾಗಿದೆ.[ಕೋಣನೂರಲ್ಲಿ ಮತ್ತೆ ಭಯಹುಟ್ಟಿಸಿದ ಚಾಣಾಕ್ಷ ಚಿರತೆ]
ದಾಳಿ ನಡೆಸಿದ್ದರಿಂದ ಭಯಗೊಂಡ ರೈತ ಕೃಷ್ಣೇಗೌಡ ಕಿರುಚಿಕೊಂಡಿದ್ದು, ಚೀರಾಟ ಕೇಳಿ ತಂದೆ ಪುಟ್ಟೇಗೌಡ ಮತ್ತು ನೆರೆಹೊರೆ ರೈತರು ಸ್ಥಳಕ್ಕೆ ಬಂದಿದ್ದರಿಂದ ಚಿರತೆ ಹೆದರಿ ಓಡಿದೆ ಪರಿಣಾಮ ಕೃಷ್ಣೇಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.[ಹುಣಸೂರು ತಾಲೂಕಿನ ಗ್ರಾಮಸ್ಥರ ನಿದ್ದೆಕೆಡಿಸಿದ್ದ ಚಿರತೆ ಸೆರೆ]
ಗ್ರಾಮಸ್ಥರ ಆಕ್ರೋಶ: ಗ್ರಾಮದಲ್ಲಿ ಚಿರತೆ ಹಾವಳಿ ಕುರಿತಂತೆ ಈ ಹಿಂದೆಯೇ ಗ್ರಾಮಸ್ಥರು ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದ್ದರಿಂದ ಚಿರತೆ ಹಾವಳಿ ಮರುಕಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.