ಚುಂಚನಕಟ್ಟೆ ಜಾತ್ರೇಲಿ ದನಗಳ ಗೋಳು, ರೈತರ ಬಾಳು ಕೇಳೋರಿಲ್ಲ!
ಮೈಸೂರು, ಜನವರಿ 5: ನಮ್ಮಲ್ಲಿ ಇನ್ನೂ ಕಲೆ, ಸಂಸ್ಕೃತಿ ಉಳಿದಿದ್ದರೆ ಅದು ಗ್ರಾಮೀಣ ಭಾಗದಲ್ಲಿ ನಡೆಯುವ ಹಬ್ಬ, ಜಾತ್ರೆಯಿಂದ ಮಾತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಡೀ ಹತ್ತೂರೇ ಸಡಗರ ಸಂಭ್ರಮದಿಂದ ಪಾಲ್ಗೊಳ್ಳುವ ಮೂಲಕ ಜಾತ್ರೆಗೆ ಕಳೆ ಕಟ್ಟಲಾಗುತ್ತದೆ.
ಮೈಸೂರು ಭಾಗದಲ್ಲಿ ನಡೆಯುವ ಜಾತ್ರೆಯಲ್ಲಿ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಜಾತ್ರೆ ಪ್ರಸಿದ್ಧವಾದದ್ದು. ಈಗಾಗಲೇ ಚುಂಚನಕಟ್ಟೆಯಲ್ಲಿ ಜಾತ್ರೆ ಅಂಗವಾಗಿ ಜಾನುವಾರುಗಳ ಜಾತ್ರೆ ಆರಂಭವಾಗಿದೆ. ಸುತ್ತಮುತ್ತಲ ಅಲ್ಲದೆ ಹೊರಗಿನಿಂದಲೂ ರೈತರು ತಮ್ಮ ಜಾನುವಾರುಗಳನ್ನು ತಂದು ಕಟ್ಟಿಹಾಕಿದ್ದಾರೆ.[ಚಾಮರಾಜನಗರ ದೇಗುಲದಲ್ಲಿ ಎಳನೀರು ದೀಪ, ಗಾಳಿ ಬಂದ್ರೂ ಆರೋದಿಲ್ಲ!]
ಮೊದಲೆಲ್ಲ ಜಾತ್ರೆ ಯಶಸ್ವಿಯಾಗಲು ಜಿಲ್ಲಾಡಳಿತ ಹೆಚ್ಚಿನ ಕಾಳಜಿ ವಹಿಸಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಇತ್ತೀಚೆಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದ್ದು, ಪರಿಣಾಮ ಜಾತ್ರೆಗೆ ಜಾನುವಾರುಗಳೊಂದಿಗೆ ಬಂದಿರುವ ರೈತರು ಅಗತ್ಯ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.
ಜಾನುವಾರು ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲು ಕೆ.ಆರ್.ನಗರದ ಶಾಸಕ ಸಾ.ರಾ.ಮಹೇಶ್ ಅವರು ತಮ್ಮ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಜಾತ್ರೆಗೆ ಆಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಅಚ್ಚುಕಟ್ಟಾಗಿ ನಡೆಸುವಂತೆ ಸೂಚಿಸಿದ್ದರು.
ಆದರೆ, ಇದೀಗ ತಮ್ಮ ರಾಸುಗಳೊಂದಿಗೆ ಆಗಮಿಸಿ ಜಾತ್ರಾ ಮಾಳದಲ್ಲಿ ಬೀಡು ಬಿಟ್ಟಿರುವ ರೈತರಿಗೆ ಸರಿಯಾಗಿ ವಿದ್ಯುತ್ ಸೌಲಭ್ಯ ಕಲ್ಪಿಸದ ಕಾರಣ ಕತ್ತಲಲ್ಲಿ ಜೀವ ಭಯದೊಂದಿಗೆ ರಾತ್ರಿ ಕಳೆಯುವಂತಾಗಿದೆ. ಇನ್ನು ಇಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸದಿರುವುದು ಕಂಡು ಬರುತ್ತಿದೆ.[ನಂಜನಗೂಡಿನ ಶ್ರೀಕಂಠೇಶ್ವರನಿಗೆ ಜೈ ಎಂದ ಲಕ್ಷಾಂತರ ಭಕ್ತರು]
ಜಾತ್ರೆಯ ಮಾಳದಲ್ಲಿ ಮತ್ತು ರಸ್ತೆಯಲ್ಲಿ ಧೂಳು ಏಳದಂತೆ ನೀರು ಹಾಕಿಸುತ್ತಿಲ್ಲ. ನೊಣಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ರೋಗ ರುಜಿನ ಹರಡುವ ಭೀತಿ ಎದುರಾಗಿದೆ. ಜಾತ್ರೆಯ ಅಂಗವಾಗಿ ಜನವರಿ 15ರಂದು ಶ್ರೀರಾಮ ದೇವರ ಬ್ರಹ್ಮರಥೋತ್ಸವ ನಡೆಯಲಿದೆ. ಅಲ್ಲಿವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಈ ಬಾರಿ ಬರದ ಪರಿಸ್ಥಿತಿ ಇದ್ದರೂ ರೈತರು ತಮ್ಮ ಜಾನುವಾರುಗಳೊಂದಿಗೆ ಜಾತ್ರೆಗೆ ಆಗಮಿಸಿದ್ದಾರೆ. ಹೀಗಿರುವಾಗ ಸಂಬಂಧಪಟ್ಟವರು ಇತ್ತ ಗಮನಹರಿಸಿ, ರೈತರಿಗೆ ಅನುಕೂಲ ಮಾಡಿಕೊಡುವುದು ಅಗತ್ಯವಾಗಿದೆ.