ಕ್ಯಾತಮಾರನಹಳ್ಳಿ ಗಲಭೆ ಪ್ರಕರಣ: ಮೈಸೂರಿನಲ್ಲಿ ಇಬ್ಬರ ಬಂಧನ
ಮೈಸೂರು, ಏಪ್ರಿಲ್ 21 : ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಿನ್ನೆ(ಏ.20) ನಡೆದ ಪ್ರತಿಭಟನೆ ವೇಳೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇಬ್ಬರು ಕಿಡಿಗೇಡಿಗಳನ್ನು ಇಂದು(ಏಪ್ರಿಲ್ 21) ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಗಲಭೆ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೀಗಾಗಿ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಳೆ ರಾತ್ರಿಯವರೆಗೆ ನಿಷಾಧಾಜ್ಞೆ ಜಾರಿ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ.
ಕತುವಾ ಪ್ರತಿಭಟನೆ: ಹೊತ್ತಿ ಉರಿಯುತ್ತಿದೆ ಮೈಸೂರಿನ ಕ್ಯಾತಮಾರನಹಳ್ಳಿ
ಕತುವಾ ಅತ್ಯಾಚಾರ ಪ್ರಕರಣ ಖಂಡಿಸಿ ನಿನ್ನೆ ಕ್ಯಾತಮಾರನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟನೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಗಲಾಟೆ ನಿಯಂತ್ರಿಸಲು ಬಂದ ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು. ಕಿಡಿಗೇಡಿಗಳು ಪೊಲೀಸರ ಮೇಲೆ ಗಾಜಿನ ಬಾಟಲ್ ತೂರಿದ್ದರು. ಘಟನೆಯಲ್ಲಿ 8 ಮಂದಿ ಪೊಲೀಸರಿಗೆ ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವ ಉಂಟಾಗಿತ್ತು.
ಬಿಜೆಪಿಗೆ ಮತ ಹಾಕಿದ್ರೆ ಗಲಾಟೆ ನಡೆಯೋಲ್ಲ: ಸಂಸದ ಪ್ರತಾಪ್ ಸಿಂಹ 'ಕಳೆದೆರಡು ವರ್ಷದ ಹಿಂದೆ ಕ್ಯಾತಮಾರನಹಳ್ಳಿ ರಾಜು ಹತ್ಯೆ ನಡೆಯಿತು. ನಿನ್ನೆ ಉದಯಗಿರಿಯಲ್ಲಿ ಗಲಾಟೆ, ಕಲ್ಲು ತೂರಾಟ ಮರುಕಳಿಸಿತು. ಇಂತಹ ಪರಿಸ್ಥಿತಿ ಬದಲಾಗಬೇಕಾದರೆ ಬಿಜೆಪಿಗೆ ಮತನೀಡಿ' ಎಂದು ಸಂಸದ ಪ್ರತಾಪ್ ಸಿಂಹ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ಪರ ಮನವಿ ಮಾಡಿದರು.
'ಮೈಸೂರಿನ ಎನ್.ಆರ್ ಕ್ಷೇತ್ರ ಕೆ.ಪಿ.ಟಿ.ಸಿ.ಎಲ್ ಯೂನಿಯನ್ ಸಮುದಾಯ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಇಲ್ಲಿನ ಇಂತಹ ಕೋಮುಸೌಹಾರ್ದ ಪರಿಸ್ಥಿತಿ ಬದಲಾಗಬೇಕಾದರೆ ಮೇ 12 ಕ್ಕೆ ಉತ್ತರ ಕೊಡಬೇಕು. ಉದಯಗಿರಿಯಲ್ಲಿ ಗಲಾಟೆಯಾಗಿ ಸಂದರ್ಭದಲ್ಲಿ ಪೋಲಿಸರು ನೀವು ಇಲ್ಲಿಂದ ಹೊರಟು ಹೋಗಿ ಎಂದರು. ಆ ಪರಿಸ್ಥಿತಿಯಲ್ಲಿ ನನಗೆ ಬಿಟ್ಟು ಬರಲು ಮನಸಾಗಲಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.