ಮೈಸೂರಿನಲ್ಲಿ ಕುವೆಂಪು ಜನ್ಮ ದಿನ: 13 ಭಾಷೆಗಳಲ್ಲಿ ಕೃತಿ ಬಿಡುಗಡೆ
ಮೈಸೂರು, ಡಿಸೆಂಬರ್ 22 : ಜ್ಞಾನಪೀಠ ಪುರಸ್ಕೃತ, ರಾಷ್ಟ್ರಕವಿ ಕುವೆಂಪು 112ನೇ ಜನ್ಮದಿನದಂಗವಾಗಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವೂ ಮತ್ತು ರಂಗಾಯಣದ ಸಂಯುಕ್ತಾಶ್ರಯದಲ್ಲಿ ಬಹುಭಾಷೆಗಳಲ್ಲಿ ಕುವೆಂಪು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಡಿ.23ರಂದು ಸಂಜೆ 5:30ಕ್ಕೆ ಮೈಸೂರಿನ ರಂಗಾಯಣದ ಭೂಮಿಗೀತೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುವರು. ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ವಿ.ನಾರಾಯಣ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಡಾ.ಜಿ.ಎನ್.ದೇವಿ, ಕುವೆಂಪುರವರ ಪುತ್ರಿ ತಾರಿಣಿ ಚಿದಾನಂದಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಉಪಸ್ಥಿತರಿರುವರು.[ಕುವೆಂಪು ವಿಚಾರ ಕ್ರಾಂತಿ - ಆನ್ ಲೈನ್ ರಸಪ್ರಶ್ನೆ ಸ್ಪರ್ಧೆ]
ಕುವೆಂಪುರವರ ಬರಹಗಳನ್ನು ಇತರ ಭಾಷೆಗಳ ಓದುಗರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಸೃಜನಶೀಲ ಬರಹಗಳು, ವೈಚಾರಿಕ ಲೇಖನಗಳನ್ನು ದೇಶದೆಲ್ಲೆಡೆ ಪಸರಿಸುವ ಉದ್ದೇಶದಿಂದ ಪ್ರಸ್ತುತ 5 ಸಾಂಸ್ಕೃತಿಕ ಮಹತ್ವದ ಬರಹಗಳನ್ನು ಉರ್ದು, ಇಂಗ್ಲಿಷ್, ತಮಿಳು, ತೆಲುಗು, ಕೊಂಕಣಿ, ಮರಾಠಿ, ಗುಜರಾತಿ, ಪಂಜಾಬಿ, ಬಂಗಾಳಿ, ಒಡಿಯಾ, ಅಸ್ಸಾಮಿ ಸೇರಿದಂತೆ ಒಟ್ಟು 13 ಭಾಷೆಗಳಿಗೆ ಪುಸ್ತಕಗಳನ್ನು ಅನುವಾದ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರವೂ ಕಳೆದ ಎರಡೂವರೆ ವರ್ಷದಿಂದ ಕಾರ್ಯಪ್ರವೃತವಾಗಿದೆ. ಡಿ.29ರ ಅವರ ಜನ್ಮದಿನಕ್ಕೆ ಈ ವಿಶೇಷ ಕೊಡುಗೆ ನೀಡಲಿದೆ.[ನಾಡಗೀತೆಗೆ ಕತ್ತರಿ ಪ್ರಯೋಗ ವಾಗಲಿದೆಯೇ?]
ಅನುವಾದ ಲೇಖನ : ಬಹುಭಾಷಾ ಭಾರತಿಗೆ ಐಕ್ಯತೆಯ ಆರತಿ, ಸಾಂಸ್ಕೃತಿಕ ವಿಚಾರ ಕಾಂತ್ರಿಗೆ ಆಹ್ವಾನ, ವೈಚಾರಿಕ ಕ್ರಾಂತಿ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಮತ್ತು ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ ಲೇಖನಗಳನ್ನು ಅನುವಾದಗೊಳಿಸಲಾಗಿದೆ.