'ಸಿದ್ದರಾಮಯ್ಯ ಬಯಸಿದರೆ 24 ಗಂಟೆಯಲ್ಲಿ ಮರೀಗೌಡ ಬಂಧನ'
ಮೈಸೂರು, ಜುಲೈ 20 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಬಯಸಿದರೆ 24 ಗಂಟೆಯಲ್ಲಿ ತಮ್ಮ ಆಪ್ತ ಕೆ.ಮರೀಗೌಡನನ್ನು ಬಂಧಿಸಬಹುದು. ಆದರೆ, ಮೈಸೂರು ಪೊಲೀಸರ ಮೇಲೆ ಸಿದ್ದರಾಮಯ್ಯ ಪ್ರಭಾವವಿದೆ. ಆದ್ದರಿಂದ ಅದು ಸಾಧ್ಯವಾಗುತ್ತಿಲ್ಲ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಮೈಸೂರಿನಲ್ಲಿ ಬುಧವಾರ ಮಾತನಾಡಿದ ಕುಮಾರಸ್ವಾಮಿ ಅವರು, 'ನೀವೇನು ಸತ್ಯ ಹರಿಶ್ಚಂದ್ರನ ಹಟ್ಟಿಯಲ್ಲಿ ಹುಟ್ಟಿದವರಾ?, ಮನಸ್ಸು ಮಾಡಿದರೆ ಕೆ.ಮರೀಗೌಡ ಅವರನ್ನು ಬಂಧಿಸಲು 24 ಗಂಟೆಗಳು ಸಾಕು' ಎಂದು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.[ಮರಿಗೌಡನ ಬಂಧನಕ್ಕಾಗಿ ಮೈಸೂರಲ್ಲಿ ಹಾರಿತು ಗಾಳಿಪಟ!]
'ದಲಿತ ಮಹಿಳೆಗೆ ಅವಮಾನ ಮಾಡಿದವರ ವಿರುದ್ಧ ಪಿಸಿಆರ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು. ಆದರೆ, ಮರಿಗೌಡ ವಿರುದ್ಧ ಪಿಸಿಆರ್ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಲ್ಲ. ಡಿಸಿ ಸಿ.ಶಿಖಾ ಅವರಿಗೆ ಅಪಮಾನ ಮಾಡಿದ ಪ್ರಕರಣದ ತನಿಖೆಗೆ ಖಡಕ್ ಅಧಿಕಾರಿಯ ಅಗತ್ಯವಿದೆ' ಎಂದು ಕುಮಾರಸ್ವಾಮಿ ಹೇಳಿದರು.[ಜಿಲ್ಲಾಧಿಕಾರಿಗೆ ಧಮ್ಕಿ, ಸಿದ್ದರಾಮಯ್ಯ ಮೌನವೇಕೆ?]
ಯಾರು ಮರೀಗೌಡ? : ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವನ್ನು ಸಿದ್ದರಾಮಯ್ಯ ಆಪ್ತ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರೀಗೌಡ ಎದುರಿಸುತ್ತಿದ್ದಾರೆ.
ಸಿ.ಶಿಖಾ ಅವರು ನಜರಬಾದ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿರುವ ಮರೀಗೌಡ ಅವರು ನಿರೀಕ್ಷಣಾ ಜಾಮೀನು ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಮೈಸೂರು ಜೆಎಂಎಫ್ಸಿ ಕೋರ್ಟ್ ರದ್ದುಗೊಳಿಸಿದೆ. [ಸಿದ್ದು, ಪರಮೇಶ್ವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು]
ಹಳೆಯದ್ದನ್ನು ಮರೆತಿದ್ದೀರಾ? : 'ನನಗೆ ಯಾರ ಮೇಲೂ ವೈಯಕ್ತಿಕವಾಗಿ ದ್ವೇಷವಿಲ್ಲ. ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ರಾಜೀನಾಮೆಗೆ ನಾನು ಒತ್ತಾಯಿಸಿಲ್ಲ. ಶವ ಇಟ್ಟುಕೊಂಡು ರಾಜಕೀಯ ಮಾಡುತ್ತೀರಿ ಎಂದು ಸಿದ್ದರಾಮಯ್ಯ ಆರೋಪಿಸುತ್ತಾರೆ. ಆದರೆ, ರೈತರ ಆತ್ಮಹತ್ಯೆ ವಿಚಾರದಲ್ಲಿ ಸದನಲ್ಲಿ ನಿಮ್ಮ ನಾನು ಇದ್ದೆ ಎಂಬುದನ್ನು ನೀವು ಮರೆತಿದ್ದೀರಾ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.