ಪುನಃ ಜೆಡಿಎಸ್ ಸೇರಲು ಒತ್ತಡ ಹಾಕಿಸುತ್ತಿದ್ದಾರೆ: ಜಮೀರ್ ಅಹ್ಮದ್
ಮೈಸೂರು, ಮಾರ್ಚ್ 21 : ತಮ್ಮನ್ನು ನಂಬಿದವರನ್ನು ಮುಗಿಸುವ ದುರುದ್ದೇಶ ಹೊಂದಿರುವ ರಾಜಕಾರಣಿಗಳು ಅಂತ ಇದ್ದರೆ ಅದು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಇಲ್ಲಿ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಬೇರೆಯವರಿಂದ ಕುಮಾರಸ್ವಾಮಿ ಬೆದರಿಕೆ ಹಾಕಿಸುತ್ತಿದ್ದಾರೆ. ಅವರ ಬೆದರಿಕೆಗೆ ನಾನು ಬಗ್ಗುವುದಿಲ್ಲ. ಪುನಃ ಪಕ್ಷಕ್ಕೆ ಬರುವಂತೆ ಹೇಳುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಗೆ ಹೋಗುವುದಿಲ್ಲ. ನಾನು ಈಗಾಗಲೇ ಕಾಂಗ್ರೆಸ್ ಜತೆ ಇದ್ದೇನೆ. ಇದೇ ಇಪ್ಪತ್ತೈದರಂದು ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ ಎಂದರು.
ಜೆಡಿಎಸ್ 7 ಬಂಡಾಯ ಶಾಸಕರಿಗೆ ವಿಪ್ ಬೆಲೆ ಈಗ ಗೊತ್ತಾಗಿದೆ: ಎಚ್ ಡಿಕೆ
ರಾಜ್ಯಸಭೆ ಚುನಾವಣೆ ಅಡ್ಡಮತದಾನ ಮಾಡಿದ್ದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಬಾಗುತ್ತೇವೆ. ಈ ಸಂದರ್ಭದಲ್ಲಿ ಹೋರಾಟದ ಅವಶ್ಯಕತೆ ಇಲ್ಲ. ಅದರ ಜೊತೆಗೆ ವಿಪ್ ಜಾರಿ ಮಾಡಿದ್ದಾರೆ. ಈಗಾಗಲೇ ನಮ್ಮನ್ನು ಜೆಡಿಎಸ್ ವರಿಷ್ಠರು ಪಕ್ಷಕ್ಕೆ ಸೇರಲು ಒತ್ತಡ ಹೇರಿದ್ದಾರೆ ಎಂದು ಹೇಳಿದರು.
ಬಂಡಾಯ ಶಾಸಕರ ವಿರುದ್ಧ ಬ್ಲ್ಯಾಕ್ ಮೇಲ್ ತಂತ್ರ ರೂಪಿಸುತ್ತಿದ್ದಾರೆ. ಜೆಡಿಎಸ್ ವರಿಷ್ಠರು ನನ್ನನ್ನು ಸೋಲಿಸಲು ಯಾವ ತಂತ್ರ ರೂಪಿಸಿದರೂ ಪ್ರಯೋಜನವಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲ್ಲುವ ಅವಕಾಶ ಇಲ್ಲ. ನಮ್ಮ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ. ನನ್ನ ಬೆಂಬಲಿಗರು ಕೂಡ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ತಿಳಿಸಿದರು.