ಕುಮಾರಸ್ವಾಮಿ ಸಿಎಂ ಆಗಲೆಂದು ಟಗರಿನ ಹರಕೆ ಹೊತ್ತ ಅಭಿಮಾನಿಗಳು
ಮೈಸೂರು, ಮೇ 18 : ರಾಜ್ಯದ ಜನರ ಚಿತ್ತ ಈಗ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮದತ್ತ ನೆಟ್ಟಿದೆ. ಇದರ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನಿಗಳು ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲೆಂದು ಹರಕೆ ಹೊತ್ತಿದ್ದಾರೆ.
ನಗರದ ಜಿ.ಟಿ. ಹರೀಶ್ ಗೌಡ ಅವರ ಅಭಿಮಾನಿ ಬಳಗದವರು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ಟಗರು ಹರಕೆ ನೀಡುವುದಾಗಿ ತೊಣಚಿಕೊಪ್ಪಲಿನಲ್ಲಿರುವ ಬಿಸಿಲು ಮಾರಮ್ಮ ಹಾಗೂ ಚಾಮುಂಡೇಶ್ವರಿ ತಾಯಿಗೆ ಹರಕೆ ಕಟ್ಟಿಕೊಂಡಿದ್ದಾರಂತೆ.
ಗೆಲುವಿನ ಬಳಿಕವೂ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮಾರಾಮಾರಿ
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ, ಜಿ.ಟಿ. ದೇವೇಗೌಡರು ಮೈಸೂರಿನ ಉಸ್ತುವಾರಿ ಸಚಿವರಾಗಲಿ ಎಂದು ಅಭಿಮಾನಿಗಳು ಹರಕೆ ಹೊತ್ತಿದ್ದು, ಹರಕೆಗಾಗಿ 25 ಸಾವಿರ ಮೊತ್ತದ ಟಗರು ಖರೀದಿ ಮಾಡಿದ್ದಾರೆ.
ದಾವಣಗೆರೆಯಿಂದ ಟಗರು ಖರೀದಿಸಿದ್ದು, ಹರಕೆ ಟಗರಿಗೆ ಹಸಿರು, ನೀಲಿ ಬಣ್ಣ ಬಳಿದಿದ್ದಾರಂತೆ. ಕುಮಾರ ಸ್ವಾಮಿ ಅವರ ಭಾವಚಿತ್ರವಿರುವ ಬಾವುಟವನ್ನು ಟಗರಿನ ಕತ್ತಿಗೆ ಸುತ್ತಲಾಗಿದೆ. ನಾಳೆ ಕಾಂಗ್ರೆಸ್-ಜೆಡಿಎಸ್ ಸೇರಿ ಬಹುಮತ ಸಾಬೀತುಪಡಿಸಲು ಯಶಸ್ವಿಯಾದರೆ ಟಗರಿನ ಬಲಿಯಾಗುವುದೂ ಗ್ಯಾರಂಟಿ.