ಎಚ್ ಡಿಕೆ ಸಿಎಂ: ಚಾಮುಂಡಿ ಬೆಟ್ಟ ಹತ್ತಿ ಹರಕೆ ತೀರಿಸಿದ ದಿವ್ಯಾಂಗ ಮಹಿಳೆ
ಮೈಸೂರು, ಮೇ 28 : ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಕ್ಕೆ ದಿವ್ಯಾಂಗ ಮಹಿಳೆಯೊಬ್ಬರು ಚಾಮುಂಡಿ ಬೆಟ್ಟದ 1001 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತಿ, ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿದರು.
ಕಲಬುರ್ಗಿ ಮೂಲದ ಸಂಗೀತಾ ಎಂಬುವರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪೂಜೆ ಸಲ್ಲಿಸಿ, ತಮ್ಮ ಕುಟುಂಬದವರು, ಸ್ನೇಹಿತರೊಂದಿಗೆ ಬರಿಗಾಲಿನಲ್ಲಿ ಮೆಟ್ಟಲು ಏರಿದರು. 2006ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಗೀತಾ ಅವರಿಗೆ ದಿವ್ಯಾಂಗರ ಕೋಟಾದಲ್ಲಿ ಉದ್ಯೋಗ ಕೊಡಿಸಿದ್ದರು. ಪದವೀಧರೆಯಾದ ಅವರು ಈಗ ಬೆಂಗಳೂರಿನಲ್ಲಿ ನಮ್ಮ ಮೆಟ್ರೋನಲ್ಲಿ ಉದ್ಯೋಗಿಯಾಗಿದ್ದಾರೆ.
'ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ' : ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್ಡಿಕೆ
ಮತ್ತೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಚಾಮುಂಡಿ ಬೆಟ್ಟವನ್ನು ಬರಿಗಾಲಿನಲ್ಲಿ ಹತ್ತುವುದಾಗಿ ಹರಕೆ ಹೊತ್ತಿದ್ದರಂತೆ. ಸಂಗೀತಾ. ಅವರ ಪತಿ ಶಿವಾರೆಡ್ಡಿ ಹಾಗೂ ಕುಟುಂಬದವರು ಬೆಟ್ಟ ಹತ್ತಲು ನೆರವಾದರು. ಸಂಗೀತಾ ಅವರಿಗೆ ಒಂದು ಕಾಲು ಸರಿಯಿಲ್ಲ. ನಡೆಯುವುದು ಕಷ್ಟವಾದರೂ ಛಲ ಬಿಡದೆ 1001 ಮೆಟ್ಟಿಲುಗಳನ್ನು ಹತ್ತಿ, ಹರಕೆ ತೀರಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಸಾಮಾನ್ಯ ಜನರ ಬಗ್ಗೆ ಕಾಳಜಿ ಇದೆ. ಅವರು ಜನತಾ ದರ್ಶನವನ್ನು ಮಾಡುವ ರೀತಿ ಯಾರೂ ಮಾಡುವುದಿಲ್ಲ. ಕೆಲವರು ಕಾಟಾಚಾರಕ್ಕೆ ಮನವಿ ಪತ್ರ ಸ್ವೀಕರಿಸಿ, ಆಯಿತು ನೋಡೋಣ ಹೋಗಿ ಎನ್ನುತ್ತಾರೆ ಎಂದು ಹೇಳಿದರು.
ಆದರೆ, ಕುಮಾರಸ್ವಾಮಿ ಅವರು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಜನತಾ ದರ್ಶನ ಮಾಡಿ, ಪ್ರತಿಯೊಬ್ಬರ ಕಷ್ಟವನ್ನೂ ಆಲಿಸಿ, ಸ್ಥಳದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ಅವರ ಕಾರ್ಯ ವೈಖರಿ ಎಂದರು