ಕೆಎಸ್ಒಯು ಕುಲಸಚಿವ ಪ್ರೊ. ಪಿ.ಎಸ್. ನಾಯಕ್ ಅಮಾನತು
ಮೈಸೂರು, ಡಿಸೆಂಬರ್ 15 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ(ಕೆಎಸ್ ಒಯು) ಕುಲಸಚಿವ ಪ್ರೊ.ಪಿ.ಎಸ್. ನಾಯಕ್ ಅವರನ್ನು ಬುಧವಾರ ಅಮಾನತುಗೊಳಿಸಲಾಗಿದೆ.
ಕೆಎಸ್ ಒಯುನಲ್ಲಿನ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ಈ ಆದೇಶ ಹೊರಡಿಸಿದ್ದಾರೆ. ಪ್ರೊ.ನಾಯಕ್ ಅವರನ್ನು ಬುಧವಾರ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಅವರ ಸ್ಥಾನಕ್ಕೆ ಪ್ರೊ.ಸೋಮಶೇಖರ್ ಅವರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.[ತಿಂಗಳ ಕೊನೆಗೆ ಕೆಎಸ್ ಒಯು ಮಾನ್ಯತೆ ನವೀಕರಣ?]
ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಸಮಿತಿಯು ಕೆಎಸ್ ಒಯು ಅಕ್ರಮಗಳ ವಿಚಾರಣೆ ನಡೆಸಿ ರಾಜ್ಯಪಾಲರಿಗೆ ವರದಿ ಸಲ್ಲಿಸಿತ್ತು. ಪಾರದರ್ಶಕತೆ ನಿಯಮ ಉಲ್ಲಂಘನೆ, ಕಂಪ್ಯೂಟರ್ ಖರೀದಿ, ಅಂಕಪಟ್ಟಿ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಎಸ್ ಒಯು ಕುಲಸಚಿವ ಪ್ರೊ.ಪಿ.ಎಸ್. ನಾಯಕ್ ಸೇರಿದಂತೆ 7 ಮಂದಿ ವಿರುದ್ಧ ಜಯಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಈ ಸಂಬಂಧ ರಾಜ್ಯಪಾಲರು ವರದಿಯಲ್ಲಿರುವ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕ್ರಮ ಜರುಗಿಸಿದರು.