ಮೈಸೂರು ರೇಷ್ಮೆ ಸೀರೆಗೆ ಮನಸೋತ ಏರ್ಇಂಡಿಯಾ
ಮೈಸೂರು, ಜ. 1: ಸರ್ಕಾರಿ ಸ್ವಾಮಿತ್ವದ ಏರ್ಇಂಡಿಯಾ ವಿಮಾನಯಾನ ಸಂಸ್ಥೆಯ ಗಗನಸಖಿಯರು ಇನ್ನು ಮುಂದೆ ರೇಷ್ಮೆ ಸೀರೆಯಲ್ಲಿ ಕಂಗೊಳಿಸಲಿದ್ದಾರೆ. ಗಗನಸಖಿಯರಿಗೆ ರೇಷ್ಮೆ ಸೀರೆಯ ಸಮವಸ್ತ್ರ ನೀಡಲು ನಿರ್ಧರಿಸಿರುವ ಸಂಸ್ಥೆಯು, 10 ಸಾವಿರ ಸೀರೆಗಳನ್ನು ಪೂರೈಸಬೇಕೆಂದು ಕರ್ನಾಟಕ ರೇಷ್ಮೆ ಉದ್ಯಮ ನಿಗಮಕ್ಕೆ ಏರ್ಇಂಡಿಯಾ ಬೇಡಿಕೆ ಸಲ್ಲಿಸಿದೆ.
ಏರ್ಇಂಡಿಯಾ ಗಗನಸಖಿಯರು ಇದುವರೆಗೆ ಸ್ಕರ್ಟ್ ಹಾಗೂ ಸೀರೆ ಎರಡನ್ನೂ ಧರಿಸಿ ಸೇವೆ ಸಲ್ಲಿಸುತ್ತಿದ್ದರು. ಆದ್ದರಿಂದ ಏಕರೂಪತೆ ತರುವ ಉದ್ದೇಶದಿಂದ ಸಂಸ್ಥೆಯು ಈ ನಿರ್ಧಾರ ಕೈಗೊಂಡಿದೆ. [ಜೈಲಿಗೆ ಕಳಿಸ್ತೀವಿ ಹುಷಾರ್... ಅಧಿಕಾರಿಗಳಿಗೆ ಹೈ ಎಚ್ಚರಿಕೆ]
ಈ ಕುರಿತು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಅಧ್ಯಕ್ಷ ಡಿ. ಬಸವರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ವಹಿವಾಟಿನಿಂದ ನಿಗಮಕ್ಕೆ 6.5 ಕೋಟಿ ರೂ. ಆದಾಯ ಬರಲಿದೆ ಎಂದು ಹೇಳಿದ್ದಾರೆ.
100 ನೌಕರರ ನೇಮಕ : ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಹೊಸ ವರ್ಷಕ್ಕೆ ಸಂತಸದ ಸುದ್ದಿ ನೀಡಿದೆ. ತಾಂತ್ರಿಕ ಹಾಗೂ ಮಾರುಕಟ್ಟೆ ಪರಿಣಿತಿ ಪಡೆದಿರುವ 100 ನೌಕರರನ್ನು ನೇಮಕ ಮಾಡಿಕೊಳ್ಳುವುದಾಗಿ ಡಿ. ಬಸವರಾಜ್ ಹೇಳಿದ್ದಾರೆ. [ಮೊಳಕಾಲ್ಮೂರು ರೇಷ್ಮೆಗೂ ಹತ್ತಿದ ತೆಲಂಗಾಣ ಕಿಚ್ಚು]
"ಅನೇಕ ನೌಕರರು ನಿವೃತ್ತಿಯಾಗುತ್ತಿದ್ದಾರೆ. ಆದ್ದರಿಂದ ನೂತನ ನೌಕರರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದೇವೆ. ಕೆಸಿ ಆ್ಯಂಡ್ ಆರ್ ನಿಯಮದ ಮೂಲಕ ಈ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ, ಒಪ್ಪಿಗೆ ನೀಡಲಾಗುವುದು" ಎಂದು ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಕಾರ್ಖಾನೆಯಲ್ಲಿ 650 ಕಾಯಂ ಹಾಗೂ 250 ಹೊರಗುತ್ತಿಗೆ ಆಧಾರದ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ 20 ಎಕರೆ ಸ್ಥಳದಲ್ಲಿ ಮಿದು ರೇಷ್ಮೆ ಸೀರೆ ತಯಾರಿಕೆ ಘಟಕ ಆರಂಭಿಸಲಾಗುತ್ತದೆ. ಈ ಘಟಕದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿಯನ್ನೂ ಇದೇ ಸಂದರ್ಭದಲ್ಲಿ ನೇಮಿಸಿಕೊಳ್ಳಲಾಗುವುದು ಎಂದು ಡಿ. ಬಸವರಾಜ್ ತಿಳಿಸಿದರು. [ನವದೆಹಲಿಯಲ್ಲಿ ಕೆಎಸ್ಐಸಿ ಸೀರೆ ಮಳಿಗೆ ಪ್ರಾರಂಭ]
16.68 ಕೋಟಿ ರು. ನಿವ್ವಳ ಲಾಭ : 2013-14ನೇ ಸಾಲಿನಲ್ಲಿ ನಿಗಮವು 127 ಕೋಟಿ ರೂ. ವಹಿವಾಟು ನಡೆಸಿದೆ. 21 ಕೋಟಿ ರೂ. ಆದಾಯ ಗಳಿಸಿದೆ. 16.68 ಕೋಟಿ ರು. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಚೀನಾದಿಂದ ಯಂತ್ರ ಆಮದು : ಉತ್ತಮ ರೇಷ್ಮೆ ಸೀರೆ ಉತ್ಪಾದಿಸುವ ಉದ್ದೇಶದಿಂದ 1.35 ಕೋಟಿ ರೂ. ವೆಚ್ಚದಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳಲಾಗುವುದು. ತೀ. ನರಸೀಪುರದ ರೇಷ್ಮೆ ನೂಲು ತೆಗೆಯುವ ಘಟಕದಲ್ಲಿ ಈ ಯಂತ್ರ ಅಳವಡಿಸಲಾಗುವುದು ಎಂದು ತಿಳಿಸಿದರು.