ಸಾಲ ಬಾಧೆಗೆ ಬೇಸತ್ತು ಕೆ.ಆರ್.ಪೇಟೆಯಲ್ಲಿ ನೇಣಿಗೆ ಕೊರಳೊಡ್ಡಿದ ರೈತ
ಮೈಸೂರು ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬೀರುವಳ್ಳಿ ಗ್ರಾಮದಲ್ಲಿ ಸಾಲಬಾಧೆಯಿಂದ ರೈತ ಬಿಕೆ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ಎಕರೆ ಜಮೀನಿದ್ದ ಅವರು ಬ್ಯಾಂಕ್ ನಿಂದ ಸಾಲ ಹಾಗೂ ಇತರೆಡೆ ಕೈ ಸಾಲ ಮಾಡಿದ್ದರು
ಕೆ.ಆರ್.ಪೇಟೆ, ಏಪ್ರಿಲ್ 8: ಸಾಲ ಬಾಧೆಯಿಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೀರುವಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ದಿವಂಗತ ಕಾಳೇಗೌಡ ಅವರ ಮಗ ಬಿ.ಕೆ.ಸುರೇಶ್ (50) ಆತ್ಮಹತ್ಯೆ ಮಾಡಿಕೊಂಡಿರುವ ರೈತ.
ರೈತ ಬಿ.ಕೆ.ಸುರೇಶ್ ಬೀರುವಳ್ಳಿ ಗ್ರಾಮದಲ್ಲಿ ಸುಮಾರು 3 ಎಕರೆ ಜಮೀನು ಹೊಂದಿದ್ದು, ಕೃಷಿಗಾಗಿ ಮಂದಗೆರೆ ವಿಜಯ ಬ್ಯಾಂಕಿನಲ್ಲಿ ಸುಮಾರು 1 ಲಕ್ಷ ರುಪಾಯಿ ಬೆಳೆ ಸಾಲ, ಜೊತೆಗೆ ಲಕ್ಷಾಂತರ ರುಪಾಯಿ ಕೈಸಾಲ ಮಾಡಿಕೊಂಡಿದ್ದರು. ಬ್ಯಾಂಕಿನವರು ಸಾಲ ವಸೂಲಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ನೋಟಿಸ್ ಜಾರಿ ಮಾಡಿದ್ದರು.[ಉಪಚುನಾವಣೆ ಕಾವಿರುವ ಗುಂಡ್ಲುಪೇಟೆಯಲ್ಲಿ ಒಂದೇ ತಿಂಗಳು 3ರೈತರ ಆತ್ಮಹತ್ಯೆ]
ಇದರಿಂದ ಮನನೊಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಗೆ ಅವರ ಪತ್ನಿ ಮಂಜುಳಾ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅಕ್ಕಿಹೆಬ್ಬಾಳು ನಾಡ ಕಚೇರಿಯ ಉಪ ತಹಸೀಲ್ದಾರ್ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ಪ್ರವೀಣ್ ಕುಮಾರ್, ಸಬ್ ಇನ್ ಸ್ಪೆಕ್ಟರ್ ಗಿರೀಶ್, ಎಎಸ್ಐ ಪ್ರಮೋದ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.