ಕುಡಿದು ದಾಂಧಲೆ ಆರೋಪ: ಕಿಕ್ಕೇರಿ ಪಿಎಸ್ಐ ಅಮಾನತು
ಕೆ.ಆರ್.ಪೇಟೆ, ಮೇ 16: ಶಿಕ್ಷಕನ ಮೇಲೆ ಹಲ್ಲೆ ನಡೆಸಿ, ಮನೆಗೆ ನುಗ್ಗಿ ದಾಂಧಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಯಶ್ವಂತ್ ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ತೇಗನಹಳ್ಳಿ ಗೇಟಿನಲ್ಲಿರುವ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಸಬ್ಇನ್ಸ್ಪೆಕ್ಟರ್ ಯಶ್ವಂತ್ ಕುಮಾರ್ ದಾಳಿ ಮಾಡಿದ್ದಾರೆ.
ಆದರೆ, ಅಂಗಡಿಗಳಲ್ಲಿ ಮದ್ಯದ ಬಾಟಲುಗಳು ದೊರೆಯದ ಹಿನ್ನೆಲೆಯಲ್ಲಿ ಪಕ್ಕದಲ್ಲಿಯೇ ಇದ್ದ ಶಿಕ್ಷಕ ರಾಜೇಗೌಡ ಅವರ ಮನೆಯೊಳಗೆ ನುಗ್ಗಿ ಅವಾಚ್ಯ ಶಬ್ದಗಳಿಂಧ ನಿಂದಿಸಿ ಹಲ್ಲೆ ಮಾಡಲು ಮುಂದಾದಾಗ ಗ್ರಾಮಸ್ಥರೆಲ್ಲರೂ ಒಂದಾಗಿ ಪ್ರತಿಭಟಿಸಿ ಹಲ್ಲೆ ನಡೆಸಲು ಮುಂದಾದರು.
ಈ ಸಂದರ್ಭ ಯಶ್ವಂತ್ ಕುಮಾರ್ ಅವರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗೇಶ ಅವರ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಂಡು ಬಾಗಿಲು ಹಾಕಿಕೊಂಡಾಗ ರೊಚ್ಚಿಗೆದ್ದ ಗ್ರಾಮಸ್ಥರು ಸ್ಥಳಕ್ಕೆ ಪೊಲೀಸ್ ಉನ್ನತಾಧಿಕಾರಿಗಳು ಬರುವವರೆಗೂ ಸಬ್ಇನ್ಸ್ ಪೆಕ್ಟರ್ ಇಲ್ಲಿಂದ ಹೊರಗೆ ಬರಲು ಬಿಡುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ನಾಗಮಂಗಲ ಡಿವೈಎಸ್ಪಿ ಜನಾರ್ದನ್ ಅವರಿಗೆ ದೂರವಾಣಿ ಮೂಲಕ ವಿಚಾರ ತಿಳಿಸಿದರು.