ಬಲರಾಮದ್ವಾರದಿಂದಲೇ ಸಾಗುತ್ತದೆ ಜಂಬೂಸವಾರಿ..!
ಮೈಸೂರು, ಅಕ್ಟೋಬರ್ 19 : ವಿಶ್ವವಿಖ್ಯಾತ ಮೈಸೂರು ದಸರಾದ ಅಂತಿಮ ಮತ್ತು ಕುತೂಹಲದ ಘಟ್ಟವಾದ ಜಂಬೂಸವಾರಿ ಆರಂಭವಾಗಿದೆ. ಎಲ್ಲರ ಚಿತ್ತ ಮೈಸೂರು ಅರಮನೆಯತ್ತ ನೆಟ್ಟಿತ್ತು. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಅರ್ಜುನನ್ನು ನೋಡುವ ಕಾತರ ಎಲ್ಲರಲ್ಲೂ ಮನೆ ಮಾಡಿತ್ತು.
ಸ್ತಬ್ದ ಚಿತ್ರ, ಮತ್ತೊಂದೆಡೆ ಕಲಾತಂಡಗಳು ಮೆರವಣಿಯಲ್ಲಿ ಸಾಗುತ್ತಿವೆ. ದೇಶವಿದೇಶಗಳಿಂದ ಆಗಮಿಸಿರುವ ನೂರಾರು ಪ್ರವಾಸಿಗರು, ಅರಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿಂತು ಜಂಬೂಸವಾರಿಯನ್ನು ವೀಕ್ಷಿಸುತ್ತಿದ್ದಾರೆ.
ನಿಮಗೆ ಗೊತ್ತೇ? ಅರಮನೆಯಲ್ಲಿರುವ ಎಲ್ಲಾ ಕಾರುಗಳ ನಂಬರ್ 1953..!
ಅರಮನೆ ಆವರಣದಲ್ಲಿ ಸಾಗಿ ಬಲರಾಮದ್ವಾರದ ಮೂಲಕ ಮುನ್ನಡೆಯುವ ಜಂಬೂಸವಾರಿಯನ್ನು ವೀಕ್ಷಿಸಲು ಜನ ಮರವೇರುತ್ತಾರೆ, ಕಟ್ಟಡದ ಮೇಲೆ ಹತ್ತಿಕುಳಿತುಕೊಳ್ಳುತ್ತಾರೆ. ಹಳ್ಳಿಗಳಿಂದ ದೂರದ ಊರುಗಳಿಂದ ಬರುವ ಜನ ಜಂಬೂಸವಾರಿ ಸಾಗುವ ಹಾದಿಯಲ್ಲಿ ಸೂಕ್ತ ಜಾಗವನ್ನು ಮಾಡಿಕೊಂಡು ಅಲ್ಲಿಯೇ ಕಾದು ಕುಳಿತು ಕಣ್ತುಂಬಿಸಿಕೊಳ್ಳುತ್ತಾರೆ.
ಜಿಟಿಡಿ-ಸಾರಾ ಮಹೇಶ್ ನಡುವೆಯೇ ಕಿತ್ತಾಟ ನಡೆಯುತ್ತಿದೆ: ಶೋಭಾ ಕರಂದ್ಲಾಜೆ
ದಸರಾ ಜಂಬೂಸವಾರಿಯನ್ನು ಅರಮನೆ ಆವರಣದಲ್ಲಿ ಕುಳಿತು ನೋಡಬೇಕೆನ್ನುವ ತವಕ ಹಲವರದು. ಹೀಗಾಗಿ ಕೆಲವರು ಹಣ ನೀಡಿ ಪಾಸ್ ಪಡೆದು ನೋಡಿದರೆ ಮತ್ತೆ ಕೆಲವರು ಪಾಸ್ಗಾಗಿ ಹಲವು ನಾಯಕರ ಮನೆಬಾಗಿಲಲ್ಲಿ ನಿಂತು ಗೋಗರೆಯುವುದು ಕಂಡು ಬರುತ್ತದೆ.
ಕಾಳಸಂತೆಯಲ್ಲಿ ಮಾರಾಟವಾಯ್ತಾ ಮೈಸೂರು ದಸರಾ ಟಿಕೆಟ್?
ಇತ್ತೀಚೆಗೆ ಪಾಸ್ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಅದು ಏನೇ ಇರಲಿ ದಸರಾ ಸಂದರ್ಭ ಅರಮನೆಗೊಂದು ಸುತ್ತು ಹೊಡೆದಿದ್ದೇ ಆದರೆ ಹತ್ತಾರು ವಿಷಯಗಳು ನಮ್ಮ ಗಮನಸೆಳೆಯುತ್ತವೆ.
ದಸರಾ ಸಂದರ್ಭ ಅರಮನೆಯ ಹೆಬ್ಬಾಗಿಲಾದ ಆನೆ ಬಾಗಿಲು ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ದಸರಾದ ಎಲ್ಲ ಧಾರ್ಮಿಕ ಕಾರ್ಯಗಳು ನಡೆಯುತ್ತದೆ. ಗಜಪಡೆಗಳ ಸ್ವಾಗತದಿಂದ ಆರಂಭವಾಗಿ ಜಂಬೂಸವಾರಿಯ ರೂವಾರಿ ಅರ್ಜುನನಿಗೆ ಅಂಬಾರಿ ಕಟ್ಟುವವರೆಗೆ ಎಲ್ಲವೂ ಇಲ್ಲಿಯೇ ನಡೆಯುತ್ತದೆ.
ಆನೆಬಾಗಿಲು ಅರಮನೆಯ ಪೂರ್ವ ದಿಕ್ಕಿನಲ್ಲಿದೆ. ಇಲ್ಲಿ ಕಂಚಿನ ಬಾಗಿಲಿದೆ. ಇಲ್ಲಿನ ಮತ್ತೊಂದು ವಿಶೇಷ ಎಂದರೆ ಎರಡು ಕಂಬಗಳಲ್ಲಿ ನಿಜವಾದ ಆನೆಗಳ ತಲೆಯನ್ನೇ ಅಲಂಕಾರಕ್ಕಾಗಿ ಅಳವಡಿಸಿರುವುದು. ಇವುಗಳನ್ನು ಜಯ ಚಾಮರಾಜ ಒಡೆಯರ್ ಸೈನ್ಯದೊಡನೆ ಬೇಟೆಗೆ ತೆರಳಿ ಅಲ್ಲಿ ಬೇಟೆಯಾಡಿ ತಂದಿದ್ದು ಎಂದು ಹೇಳಲಾಗಿದೆ.
ಇನ್ನು ಅರಮನೆಗೆ ಇರುವ ಐದು ದ್ವಾರಗಳು ಕೂಡ ವಿಶೇಷತೆಯನ್ನು ಹೊಂದಿವೆ. ಇವುಗಳ ಪೈಕಿ ಅರಮನೆಯ ಎದುರಿನ ಪೂರ್ವಕ್ಕೆ ದೊಡ್ಡ ಕೆರೆ ಮೈದಾನ ಕಡೆಗಿನ ಜಯ ಮಾರ್ತಾಂಡ ದ್ವಾರ ಪ್ರಮುಖವಾಗಿದೆ. ದ್ವಾರದ ಎರಡು ಬದಿ ಹೂ ತೋಟವಿದೆ ಬುರುಜುಗಳಿದ್ದು ಗಮನಸೆಳೆಯುತ್ತದೆ.
ಅರಮನೆಯ ಉತ್ತರಕ್ಕೆ ಬಲರಾಮ ದ್ವಾರವಿದೆ. ಇದರ ಮೂಲಕವೇ ಜಂಬೂಸವಾರಿ ಸಾಗುತ್ತದೆ. ದ್ವಾರದ ಬದಿಯಲ್ಲಿ ಕೋಟೆ ಆಂಜನೇಯ ಸ್ವಾಮಿ, ಗಣಪತಿ ದೇವಾಲಯವಿದೆ. ದ್ವಾರಕ್ಕೆ ಸೇರಿಕೊಂಡಂತೆ ಅರಮನೆ ಆವರಣದ ಒಳಭಾಗದಲ್ಲಿ ದೊಡ್ಡ ಕನ್ನಡಿಯನ್ನಿಡಲಾಗಿದ್ದು ಇದರಲ್ಲಿ ಅರಮನೆಯ ಭವ್ಯದೃಶ್ಯವನ್ನು ವೀಕ್ಷಿಸಬಹುದಾಗಿದೆ.
ಅರಮನೆ ದಕ್ಷಿಣ ಭಾಗದಲ್ಲಿ ವರಹಾ ದ್ವಾರವಿದ್ದು, ಈ ದ್ವಾರದ ಮೂಲಕವೇ ಪ್ರವಾಸಿಗರಿಗೆ ಅರಮನೆಗೆ ಪ್ರವೇಶ ನೀಡಲಾಗುತ್ತದೆ. ಕರಿಕಲ್ ತೊಟ್ಟಿ ದ್ವಾರವು ನಗರ ಪಾಲಿಕೆ ಕಡೆಗೆ ಅರ್ಥಾತ್ ಸಯ್ಯಾಜಿರಾವ್ ರಸ್ತೆ ಕಡೆಗೆ ಇದೆ. ಈ ದ್ವಾರದ ಮೂಲಕ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಬ್ರಹ್ಮಪುರಿ ದ್ವಾರವು ನಗರ ಬಸ್ ನಿಲ್ದಾಣದ ಬಳಿ ಇದೆ ಈ ದ್ವಾರದ ಮೂಲಕ ಎಲ್ಲ ದಿನಗಳಲ್ಲಿ ಪ್ರವೇಶ ಇಲ್ಲ. ದಸರಾ ಸಂದರ್ಭ ದ್ವಾರ ತೆಗೆಯಲಾಗುತ್ತದೆ.
ಮೈಸೂರು ಅರಮನೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಸುಂದರವಾಗಿ ಇಲ್ಲಿನ ದ್ವಾರಗಳಿದ್ದು ಅವು ಅರಮನೆಗೆ ಮೆರಗು ತಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.