ಸಿಂಹಾಸನವೇರಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಮೈಸೂರು, ಅಕ್ಟೋಬರ್ 13 : ಒಂದೆಡೆ ರೈತ ಪುಟ್ಟಯ್ಯ ಅವರಿಂದ ಮೈಸೂರು ದಸರಾಗೆ ಚಾಲನೆ ದೊರೆತಿದ್ದರೆ, ಮತ್ತೊಂದೆಡೆ ಮೈಸೂರು ದಸರಾ ಆಕರ್ಷಣೆಯಲ್ಲೊಂದಾದ ಖಾಸಗಿ ದರ್ಬಾರ್ ಅಂಬಾವಿಲಾಸ ಅರಮನೆಯಲ್ಲಿ ಆರಂಭವಾಗಿದೆ.
ಇದೇ ವರ್ಷದ ಮೇ 28ರಂದು ಸಿಂಹಾಸನವೇರಿದ ನಂತರ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನವರಾತ್ರಿ ಸಂದರ್ಭದಲ್ಲಿ ಮೊದಲ ಬಾರಿಗೆ ಒಂಬತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸಿಕೊಡಲಿದ್ದಾರೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]
ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಅವರಿಗೆ ಕಂಕಣಧಾರಣೆ ಮಾಡಿ, ಬೆಳಿಗ್ಗೆ 10.30 ಗಂಟೆಗೆ ಅಂಬಾವಿಲಾಸ ಅರಮನೆಯ ಸವಾರ ತೊಟ್ಟಿಗೆ ಪಟ್ಟದ ಆನೆ, ಕುದುರೆ ಮತ್ತು ಹಸುವನ್ನು ಕರೆತರಲಾಯಿತು. ಬೆಳಿಗ್ಗೆ 11.05ರಿಂದ 11.55ರ ವೇಳೆಗೆ ಶುಭ ಧನುರ್ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನಕ್ಕೆ ವಿವಿಧ ಪೂಜಾ ವಿಧಿ-ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.[ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]
11.40ರ ನಂತರ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನಾರೋಹಣ ಮಾಡಿದರು. ಅರಮನೆಯ ದರ್ಬಾರ್ ಹಾಲ್ನಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯವನ್ನು ಮೈಸೂರಿಗೆ ಸಮೀಪದ ಗೆಜ್ಜಗಳ್ಳಿ ಗ್ರಾಮದಿಂದ ಆಯ್ದ ಕೆಲವರು ಬಂದು ಸಿಂಹಾಸನವನ್ನು ಜೋಡಿಸಿದ್ದರು.[ಮೈಸೂರು ದಸರಾ ಉದ್ಘಾಟಿಸಿದ ರೈತ ಪುಟ್ಟಯ್ಯ]
ಇಂದ್ರನ ಐಭೋಗ ನೆನಪಿಸುವಂತಿತ್ತು
ಪಳಪಳನೆ ಹೊಳೆಯುವ ರೇಷ್ಮೆ ವಸ್ತ್ರಕ್ಕೆ ಚಿನ್ನದ ಜರಿ ಕೂರಿಸಿದ ರಾಜಪೋಷಾಕು ಅಲ್ಲದೆ, ಜರಿಪೇಟ, ಅತ್ಯಮೂಲ್ಯ ಆಭರಣ ಧರಿಸಿದ ಯದುವೀರ್ ದರ್ಬಾರ್ ಹಾಲ್ಗೆ ಬರುತ್ತಿದ್ದಂತೆಯೇ ಇಂದ್ರನ ಐಭೋಗವನ್ನು ನೆನಪಿಸುವಂತಿತ್ತು.[ಮೈಸೂರಿನಲ್ಲಿ ಗಜಪಡೆಯ ತಾಲೀಮು ಹೇಗಿರುತ್ತೆ ಗೊತ್ತಾ?]
ರಾಜರಿಗೆ ಆರತಿ ಬೆಳಗಿದ ಮಹಿಳೆಯರು
ಬೆಳಿಗ್ಗೆ ಎದ್ದ ತಕ್ಷಣ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೆ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳ ಸ್ನಾನ ಮಾಡಿಸಿ ಮುತೈದೆಯರು ಹಾಗೂ ಪುರೋಹಿತ ಮನೆತನದ ಮಹಿಳೆಯರು ಆರತಿ ಬೆಳಗಿದ್ದರು.[ಶಾಸ್ತ್ರೋಕ್ತವಾಗಿ ನವರಾತ್ರಿ ಉತ್ಸವ ಆಚರಿಸುವ ಬಗೆ ಹೇಗೆ?]
ಗಣಪತಿ, ಕಳಶ, ಕಂಕಣ ಪೂಜೆ
ಇದಾದ ನಂತರ ಯದುವೀರರು ಪೂಜೆಗೆ ಅಣಿಯಾದರು. ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ನಂತರ ಕಳಶಪೂಜೆ, ಕಂಕಣಪೂಜೆ ನಡೆಸಿ, ಕುಲದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಂಕಣ ಧರಿಸಿದರು.[ರಾಜ ಗಾಂಭೀರ್ಯದ ದಸರಾ ಗಜಪಡೆ ಎಲ್ಲಿಂದ ಬಂದದ್ದು?]
ಬಲಗೈಯಿಂದ ಸೆಲ್ಯೂಟ್ ಹೊಡೆದ ಯದು
ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿದಂತೆ ಹಲವು ಪೂಜಾವಿಧಿಗಳು ಸಾಂಗೋಪವಾಗಿ ನಡೆಯುತ್ತದೆಯಲ್ಲದೆ, ದೇವಿ ಭಾಗವತವನ್ನು ಪಾರಾಯಣ ಮಾಡಲಾಯಿತು.
ದರ್ಬಾರ್ ಹಾಲ್ಗೆ ಆಗಮಿಸಿದ ಯದುವೀರ್ ಸಿಂಹಾಸನಕ್ಕೆ ಪೂಜೆ ಮಾಡಿ ಬಳಿಕ ರಾಜಗಾಂಭೀರ್ಯದಿಂದ ಸಿಂಹಾಸನವನ್ನೇರಿ ಆ ಸ್ಥಾನಕ್ಕೆ ಬಲಗೈಯಿಂದ ಸೆಲ್ಯೂಟ್ ಹೊಡೆದು ರಾಜಗತ್ತಿನಲ್ಲಿ ಆಸೀನರಾದರು. ಈ ಸಂದರ್ಭ ಹೊಗಳು ಭಟರಿಂದ ಬಹುಪರಾಕ್ ಕೇಳಿ ಬಂತು.
ಒಂಬತ್ತು ದಿನ ಖಾಸಗಿ ದರ್ಬಾರ್
ಪ್ರತಿ ದಿನ ಖಾಸಗಿ ದರ್ಬಾರ್ ನಡೆಯುವ ಮುನ್ನ ಕೆಲವು ವಿಧಿವಿಧಾನಗಳು ಕೂಡ ಇಲ್ಲಿ ನಡೆಯುತ್ತವೆ. ಅದರಂತೆ ಪಟ್ಟದ ಆನೆ, ಹಸು, ಕುದುರೆಗಳಿಗೆ ಅಲಂಕಾರ ಮಾಡಿ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅರಮನೆಗೆ ಇವುಗಳ ಪ್ರವೇಶವಾಗುತ್ತದೆ ನಂತರ ದರ್ಬಾರ್ ಆರಂಭವಾಗುತ್ತದೆ.