ನಾಮಪತ್ರ ಸಲ್ಲಿಸಲು ಮೈಸೂರಿನಿಂದ ಬಾದಾಮಿ ಕಡೆ ಸಿಎಂ ಪ್ರಯಾಣ.
ಮೈಸೂರು, ಏಪ್ರಿಲ್ 24: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದಲೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಕೆಗಾಗಿ ಇಂದು ಮೈಸೂರಿನಿಂದ ಬಾದಾಮಿಗೆ ಪ್ರಯಾಣ ಬೆಳೆಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಇವತ್ತು ಕೊನೆಯ ದಿನವಾಗಿರುವುದರಿಂದ 2 ಗಂಟೆಯಿಂದ 3 ಗಂಟೆ ಒಳಗಾಗಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಲಿದ್ದಾರೆ. ಬಾದಾಮಿ ಪ್ರಯಾಣಕ್ಕೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಮುಖಂಡ ಶ್ರೀರಾಮುಲು ಅವರಿಗೆ ಟಾಂಗ್ ನೀಡಿದರು. "ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ಚರಿ ಈಗಾಗಲೇ ತಿರಸ್ಕಾರ ಮಾಡಿದ್ದಾಳೆ, ಬನಶಂಕರಿಯೂ ತಿರಸ್ಕಾರ ಮಾಡ್ತಾಳೆ" ಎಂದು ಶ್ರೀರಾಮುಲು ಹೇಳಿಕೆ ನೀಡಿದ್ದರು.
ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ:ಮೋದಿ ಜೊತೆ ಸಿದ್ದು ಹೋಲಿಕೆ ಸರಿಯೆ?
'ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಅಮಯ್ಯ, "ನಾನು 1983 ರಲ್ಲೇ ಶಾಸಕನಾದವನು. ಶ್ರೀರಾಮುಲು 2004 ರಲ್ಲಿ ಶಾಕರಾದವರು. ರಾಜಕಾರಣ ತಿಳಿದು ಮಾತನಾಡಲಿ' ಎಂದು ಆವರು ಪ್ರತಿಕ್ರಿಯಿಸಿದರು.
ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುರಿತು ಎದ್ದಿರುವ ಗೊಂದಲಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ವರುಣದಲ್ಲಿ ಯಾವ ಬಿಜೆಪಿ ಅಭ್ಯರ್ಥಿ ನಿಲ್ಲಿಸಿದ್ರೂ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಮಗನಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಮಾತ್ರ ಯಡಿಯೂರಪ್ಪ ವೀಕ್ ಆಗಿಲ್ಲ. ಅವರು ಎಲ್ಲ ವಿಷಯಗಳಲ್ಲೂ ವೀಕ್! ಅವರೊಬ್ಬ ಕಳಂಕಿತ ವ್ಯಕ್ತಿ. ಆದ್ದರಿಂದ ಅವರಿಗೆ ಸಾರ್ವಜನಿಕ ಮೌಲ್ಯ ಇಲ್ಲ. ಹಿಂದೆಯೂ ವೀಕ್ ಆಗೆಯೇ ಇದ್ದರೂ ಈಗಲೂ ವೀಕ್ ಆಗಿಯೇ ಇದ್ದಾರೆ' ಎಂದು ಅಣಕಿಸಿದರು.
"ನಾವು ಕುಟುಂಬ ರಾಜಕೀಯ ಮಾಡಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಬಿ ವೈ ರಾಘವೇಂದ್ರ ಯಾರ ಮಗ? ಒಂದು ಬಾರಿ ಎಂಪಿ, ಒಂದು ಬಾರಿ ಎಂಎಲ್ ಎ ಆಗಿಲ್ವಾ? ಆತ ಯಡಿಯೂರಪ್ಪನ ಮಗನೋ ಅಥವಾ ಅವರ ಅಮ್ಮನ ಮಗನೋ ? ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ಯುದ್ಧಕ್ಕೆ ಮೊದಲೇ ಸೋಲೊಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ : ಬಿಜೆಪಿ
ಚುನಾವಣಾ ಪೂರ್ವ ಸಮೀಕ್ಷೆಗಳ ವಿಚಾರವಾಗಿ ಮಾತನಾಡಿದ ಅವರು, 'ನಾನು ಸಮೀಕ್ಷೆಗಳನ್ನು ಅಷ್ಟಾಗಿ ನಂಬಲ್ಲ. ಆದ್ರೆ ಜನರ ಮನಸ್ಸಿನಲ್ಲಿ ನಾನು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ' ಎಂಬುದು ನನಗೆ ಗೊತ್ತು ಎಂದರು.
ಮಾಜಿ ಸಚಿವ ಅಂಬರೀಶ್ ನಾಮಪತ್ರ ಸಲ್ಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅಂಬರೀಶ್ ನಾಮಪತ್ರ ಸಲ್ಲಿಕೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.