ಬಿಜೆಪಿ- ಜೆಡಿಎಸ್ ಇದೆ ಎಂಬ ಬೋರ್ಡ್ ಹಾಕಿ ಎಂದ ಮುಖ್ಯಮಂತ್ರಿ ಚಂದ್ರು!
ಮೈಸೂರು, ಏಪ್ರಿಲ್ 14: "ನಿಮ್ಮ ಮನೆಯ ಮುಂದೆ ನಾಯಿ ಇದೆ ಎಂದು ಬೋರ್ಡ್ ಹಾಕುವ ಬದಲು ಇನ್ನು ಮುಂದೆ ಬಿಜೆಪಿ - ಜೆಡಿಎಸ್ ಇದೆ ಎಂದು ಬೋರ್ಡ್ ಬರೆಸಿ, ತೂಗು ಹಾಕಿ" ಎಂದು ನಟ ಮುಖ್ಯಮಂತ್ರಿ ಚಂದ್ರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಮೈಸೂರಿನ ಆಂದೋಲನ ವೃತ್ತದಲ್ಲಿ ಪ್ರಗತಿಪರರೊಂದಿಗೆ ಸಭೆ ಹಾಗೂ ಕಾಂಗ್ರೆಸ್ ನ ಪ್ರಚಾರಾಂದೋಲನದಲ್ಲಿ ಈ ಮಾತುಗಳನ್ನು ಆಡಿದ್ದು, ಕ್ವಿಟ್ ಇಂಡಿಯಾ ಮೂಲಕ ಬ್ರಿಟಿಷರೆ ದೇಶ ಬಿಟ್ಟು ತೊಲಗಿ ಎಂದೆವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯವರೇ ಭಾರತ ಬಿಟ್ಟು ತೊಲಗಿ, ಜೆಡಿಎಸ್ ನವರೇ ಜಾತಿ ಬಿಟ್ಟು ತೊಲಗಿ ಎಂಬ ಪರಿಸ್ಥಿತಿ ಎದುರಾಗಿದೆ ಎಂದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಒಂದು ಕಡೆ ಕೋಮುವಾದ, ಮತ್ತೊಂದು ಕಡೆ ಜಾತಿವಾದದ ರಾಜಕಾರಣ ತುಂಬಿ ತುಳುಕುತ್ತಿದೆ. ಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೋಗುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಅತ್ಯಾಚಾರ ಮಾಡಿದವರಿಗೆ ಹಾಗೂ ಅನೈತಿಕ ಸಂಬಂಧ ಇಟ್ಟುಕೊಂಡವರಿಗೆಲ್ಲಾ ಬಿಜೆಪಿಯಲ್ಲಿ ಟಿಕೆಟ್ ನೀಡುತ್ತಿದ್ದಾರೆ. ಅವರಿಗೆ ಮತ ಹಾಕಿದರೆ ಇಡೀ ರಾಜ್ಯದಲ್ಲಿ ಮುಂದೊಂದು ದಿನ ಏನು ಅನಾಹುತ ಸಂಭವಿಸಬಹುದೋ ಅರಿವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.