ಕರ್ನಾಟಕ ಚುನಾವಣೆ: ಮೈಸೂರಿನಲ್ಲಿ ಹಲವು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಮೈಸೂರು, ಏಪ್ರಿಲ್ 19 : ರಾಜ್ಯ ವಿಧಾನಸಭಾ ಚುನಾವಣೆಯ ಅಸಲಿ ಆಟ ಇಂದಿನಿಂದ ಶುರುವಾಗಿದೆ. ಎಲೆಕ್ಷನ್ ಉಮೇದುವಾರಿಕೆಗಾಗಿ ಮೈಸೂರಿನಲ್ಲಿ ಹಲವು ಪಕ್ಷದ ಮುಖಂಡರು ಇಂದು ನಾಮಪತ್ರ ಸಲ್ಲಿಸಿದರು. ಪಕ್ಷದ ಅಭ್ಯರ್ಥಿಗಳೊಂದಿಗೆ ಬೆಂಬಲಿಗರೂ ಆಗಮಿಸಿದ್ದರು.
ಮೊದಲಿಗರಾಗಿ ಕೆ.ಆರ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ. ವಿ ಮಲ್ಲೇಶ್ ತನ್ನ ಬೆಂಬಲಿಗರೊಂದಿಗೆ ತೆರಳಿ ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಚಾಮರಾಜ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಮಾಲವಿಕಾ ಗುಬ್ಬಿ ವಾಣಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಘಟಾನುಘಟಿಗಳ ನಾಮಪತ್ರ ಸಲ್ಲಿಕೆ ಗುರುವಾರ ಆರಂಭ
ಚಾಮರಾಜ ಶಾಸಕ ವಾಸು ಅವರು ತಮ್ಮ ಬೆಂಬಲಿಗರೊಂದಿಗೆ ಚುನಾವಣಾ ಅಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ನಾನು ಮೂರು ಸೆಟ್ ನಾಮಪತ್ರವನ್ನು ಸಲ್ಲಿಸಿದ್ದೇನೆ .
ಮೂರು ಸೆಟ್ಟಲಿ ನಮ್ಮ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇನೆ. ನಾನು ಐದು ವರ್ಷದಿಂದಲೂ ಪ್ರಚಾರದಲ್ಲೇ ಇದ್ದೇನೆ. ವಾಸು ಎಂದರೆ ಮೈಸೂರಿನಲ್ಲಿ ಎಲ್ಲರಿಗೂ ಗೊತ್ತಿದೆ. ನಗರ ಪಾಲಿಕೆ ಸದಸ್ಯನಾಗಿ ಮೇಯರ್ ಆಗಿ ಎರಡು ಬಾರಿ ಚುನಾವಣೆಯಲ್ಲಿ ನಿಂತು ಗೆದ್ದು ಮೂರನೇ ಬಾರಿಯೂ ಗೆದ್ದು ನಾಲ್ಕನೇ ಬಾರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾಳೆ ಸಿಎಂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವುದರಿಂದ ನಾನು ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದರು.
ಇತ್ತ ಜೆಡಿಎಸ್ ಪಕ್ಷದ ಹುಣಸೂರು ಅಭ್ಯರ್ಥಿ ಮಾಜಿ ಸಚಿವ ಎಚ್. ವಿಶ್ವನಾಥ್ ಚುನಾವಣಾಧಿಕಾರಿಗೆ ನಾಮಪತ್ರವನ್ನು ಸಲ್ಲಿಸಿದರು. ಇದಕ್ಕಿಂತ ಮೊದಲು ದೇವರಾಜು ಅರಸು ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಹುಣಸೂರಿನ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಮೇದುವಾರಿಕೆಯವನ್ನು ಸಲ್ಲಿಸಿದರು.