ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ರಸ್ತೆಯಲ್ಲೇ ಮಾನ ತೆಗೆದ ಮರಿಸ್ವಾಮಿ
ಮೈಸೂರು, ಏಪ್ರಿಲ್ 25 : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ತೆರಳಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೇಚಿಗೆ ಸಿಲುಕಿದ ಘಟನೆ ಬುಧವಾರ ನಡೆಯಿತು. ಮೈಸೂರಿನ ಹಳೆ ಕೆಸರೆಯಲ್ಲಿ ಪ್ರಚಾರಕ್ಕೆ ಬಂದಿದ್ದ ವೇಳೆ ಸಿದ್ದರಾಮಯ್ಯಗೆ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಮರಿಸ್ವಾಮಿ ಮಾತಿಗೆ ಮಾತು ಕೊಟ್ಟು, ಮುಜುಗರಕ್ಕೆ ಈಡು ಮಾಡಿದರು.
ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ತೆರೆದ ವಾಹನದಲ್ಲಿ ರೋಡ್ ಶೋ ಮಾಡುತ್ತಾ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ರೋಡ್ ಶೋ ನಡೆಯುತ್ತಿದ್ದ ಸಮೀಪದಲ್ಲೇ ಹಾಜರಿದ್ದ ಒಂದು ಕಾಲದ ಬೆಂಬಲಿಗ ಹಾಗೂ ಸದ್ಯ ಗ್ರಾ.ಪಂ.ಸದಸ್ಯ ಮರಿಸ್ವಾಮಿಯನ್ನು ಕೂಗಿ, ಮಾತನಾಡಿಸಿದರು.
ಬಿಜೆಪಿ, ಜೆಡಿಎಸ್ ನೊಂದಿಗೆ ಅನಧಿಕೃತವಾಗಿ ಮೈತ್ರಿ ಮಾಡಿಕೊಂಡಿದೆ: ಸಿಎಂ
ಆಗ, ನಾನು ನಿಮಗೆ ಓಟು ಹಾಕುವುದಿಲ್ಲ. ನಾನು ಜೆಡಿಎಸ್ ನಲ್ಲಿದ್ದೇನೆ, ಬರೊಲ್ಲ ಎಂದು ಮರಿಸ್ವಾಮಿ ಅವಾಜ್ ಹಾಕಿದ್ದಾರೆ. "ಆಯ್ತು, ನೀ ಬರಬೇಡ. ಓಟು ಹಾಕು" ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಊರ ಜನರ ಮುಂದೆಯೇ ಇಬ್ಬರ ಮಧ್ಯೆ ಮಾತುಕತೆ ಮುಂದುವರಿದಿದೆ.
ಇದೇ ವೇಳೆ, ಏನೋ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಹೋಗಿದ್ದಿಯ ಎಂದು ಸಿದ್ದರಾಮಯ್ಯ ಸಲುಗೆಯಿಂದ ಮಾತನಾಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಮರಿಸ್ವಾಮಿ, ನಾನು ಜೆಡಿಎಸ್ ನಲ್ಲಿಯೇ ಇದ್ದೀನಿ, ನೀನೇ ಕಾಂಗ್ರೆಸ್ ಗೆ ಹೋಗಿರೋದು ಎಂದು ಉತ್ತರ ಕೊಟ್ಟಿದ್ದಾರೆ.
ಜೆಡಿಎಸ್, ಬಿಜೆಪಿ ಎರಡು ಒಂದೇ ನಾಣ್ಯದ ಎರಡು ಮುಖಗಳು ಎಂದು ಸಮಜಾಯಿಷಿ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಆಗ ಅದಕ್ಕೆ ಕಿವಿಗೊಡದ ಮರಿಸ್ವಾಮಿ, ನಾವು ಜೆಡಿಎಸ್ ಗೆ ಓಟ್ ಹಾಕೋದು ಎಂದು ಜೈಕಾರ ಕೂಗಿದ್ದಾರೆ. ಇದಾದ ಬಳಿಕ, ಆಯ್ತು ಬರಬೇಡ ಹೋಗು ಎಂದಿದ್ದಾರೆ ಸಿದ್ದರಾಮಯ್ಯ. ಅದಕ್ಕೆ ಪ್ರತಿಯಾಗಿ, "ನೀವು ನಮ್ಮ ಊರಿನಲ್ಲಿ ಇರೋದು, ನೀವೇ ಹೋಗಿ" ಎಂದಿದ್ದಾರೆ ಮರಿಸ್ವಾಮಿ.
ಕೊನೆಗೆ ರೋಸತ್ತ ಸಿದ್ದರಾಮಯ್ಯ, ಹೇ ಅವನು ಯಾವುದಕ್ಕಾದರೂ ಓಟ್ ಹಾಕಲಿ, ನೀವು ಕಾಂಗ್ರೆಸ್ ಗೆ ಮತ ಹಾಕಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಈ ಘಟನೆಯಿಂದ ಸಿದ್ದರಾಮಯ್ಯ ಅವರಿಗೆ ತಮ್ಮ ತವರು ಜಿಲ್ಲೆಯಲ್ಲಿ ಭಾರಿ ಮುಜುಗರ ಆದಂತಾಗಿದೆ.