ಮೈಸೂರಿನಲ್ಲಿ 'ಕೋಟೆ' ಕೆಡವಿದ ಬಿಜೆಪಿ, ಹೊತ್ತಿ ಉರಿಯುತ್ತಿದೆ ಆಕ್ರೋಶ
ಮೈಸೂರು, ಏಪ್ರಿಲ್ 17 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಟಿಕೆಟ್ ಎರಡನೇ ಪಟ್ಟಿ ಸೋಮವಾರ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ಭಿನ್ನಮತ ಸ್ಫೋಟಗೊಂಡಿದೆ. ಇಂಥ ಅಸಮಾಧಾನದಿಂದ ಮೈಸೂರು ಬಿಜೆಪಿಯೂ ಹೊರತಾಗಿಲ್ಲ.
ಮುಖ್ಯವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ ಅವರೇ ಅಸಮಾಧಾನ ವ್ಯಕ್ತಪಡಿಸಿ, ನಂಜನಗೂಡು ಬಿಜೆಪಿ ಟಿಕೆಟ್ ಘೋಷಣೆ ಬಗ್ಗೆ ನನಗೆ ಬೇಸರವಾಗಿದೆ. ಸದ್ಯದಲ್ಲೆ ಬಿ.ಎಸ್.ಯಡಿಯೂರಪ್ಪ ಬಳಿ ಮಾತನಾಡಿ, ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ 2ನೇ ಪಟ್ಟಿಯಲ್ಲಿ ಕಾಣಿಸಿಕೊಂಡ ಹೊಸ ಮುಖಗಳು
ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಕೋಟೆ ಶಿವಣ್ಣ, ನನ್ನ ಹಿರಿತನಕ್ಕೆ ಬಿಜೆಪಿ ನಾಯಕರು ಅಗೌರವ ತೋರಿದ್ದಾರೆ. ನಾನು ಎಲ್ಲಾ ಪಕ್ಷಗಳಲ್ಲಿ ಮಣ್ಣು ಹೊತ್ತಿದ್ದೇನೆ. ನಂಜನಗೂಡು ಬಿಜೆಪಿ ಟಿಕೆಟ್ ಘೋಷಣೆ ವಿಚಾರ ನನಗೆ ಬೇಸರವಾಗಿದ್ದು, ಸದ್ಯದಲ್ಲೆ ಬಿ ಎಸ್ ಯಡಿಯೂರಪ್ಪ ಬಳಿ ಮಾತನಾಡಿ, ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಜೆಡಿಎಸ್ ಆಹ್ವಾನ ನೀಡಿದ್ದರೂ ನಾನು ಸ್ಪರ್ಧೆ ಮಾಡೋದಿಲ್ಲ ಎಂದು ಕೋಟೆ ಶಿವಣ್ಣ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ. ಅಂದಹಾಗೆ, ನಂಜನಗೂಡು ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ದನ್ ಗೆ ನೀಡಲಾಗಿದೆ.
ಶ್ರೀನಿವಾಸ್ ಪ್ರಸಾದ್ ಸ್ವಾರ್ಥಿ ಎಂದು ಆರೋಪ
ಕೋಟೆ ಶಿವಣ್ಣ ಒಂದೆಡೆಯಾದರೆ, ಮತ್ತೊಂದೆಡೆ ಮತ್ತೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಹದೇವಯ್ಯ ಅವರು ಶ್ರೀನಿವಾಸ್ ಪ್ರಸಾದ್ ವಿರುದ್ಧ ಕಿಡಿ ಕಾರಿದ್ದಾರೆ. ಶ್ರೀನಿವಾಸ್ ಪ್ರಸಾದ್ ಒಬ್ಬ ಸ್ವಾರ್ಥಿ. ಯಾವ ದಲಿತ ನಾಯಕರನ್ನೂ ಬೆಳೆಯಲು ಅವರು ಬಿಡುವುದಿಲ್ಲ ಎಂದಿದ್ದಾರೆ. ನಂಜನಗೂಡು ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದಕ್ಜೆ ಅಸಮಾಧಾನ ವ್ಯಕ್ತಪಡಿಸಿದ ಮಹದೇವಯ್ಯ, ಪರಿಸ್ಥಿತಿ ನೆನೆದು ಗಳಗಳನೆ ಕಣ್ಣೀರಿಟ್ಟರು. 2008ರಲ್ಲಿ ಶ್ರೀನಿವಾಸ್ ಪ್ರಸಾದ್ ವಿರುದ್ದ ಕೇವಲ 703 ಮತಗಳಿಂದ ಸೋತಿದ್ದರು. ಪ್ರಸಾದ್ ಕೈ ತೊರೆದು ಕಮಲ ಹಿಡಿದಾಗ ತಮ್ಮ ಸ್ಥಾನ ತ್ಯಾಗ ಮಾಡಿದ್ದರು. ಟಿಕೆಟ್ ಕೈ ತಪ್ಪಿದ್ದಕ್ಕೆ ಇದೀಗ ಶ್ರೀನಿವಾಸ್ ಪ್ರಸಾದ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಹರಿಹಾಯ್ದಿದ್ದಾರೆ.
ನಟರಾಜ್ ಬಿಜೆಪಿ ಬಂಡಾಯ ಸ್ಪರ್ಧೆ ಸಾಧ್ಯತೆ
ಬಿ.ಎಂ.ನಟರಾಜ್ ಸಹ ವರ್ಷದ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸೋಮವಾರ ಕಲ್ಯಾಣ ಮಂಟಪವೊಂದರಲ್ಲಿ ಬೆಂಬಲಿಗರ ಸಭೆ ನಡೆಸಿ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಕಚೇರಿಗೆ ನುಗ್ಗಿ ಪ್ರತಿಭಟನೆ, ಟೈರ್ ಗೆ ಬೆಂಕಿ
ನರಸಿಂಹರಾಜ ಕ್ಷೇತ್ರದಲ್ಲಿ ಸಂದೇಶ ಸ್ವಾಮಿಗೆ ಟಿಕೆಟ್ ಘೋಷಿಸಿದ ಬೆನ್ನಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ನಟರಾಜ್ ಹಾಗೂ ಅವರ ಬೆಂಬಲಿಗರು ಮೈಸೂರು ನಗರದ ಬಿಜೆಪಿ ಕಚೇರಿಗೆ ನುಗ್ಗಿ, ಪ್ರತಿಭಟನೆ ನಡೆಸಿದರು. ಟೈರ್ ಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ, ತಮ್ಮ ಆಕ್ರೋಶ ಹೊರಹಾಕಿದರು.
ಸಂದೇಶ್ ಸ್ವಾಮಿಗೆ ಟಿಕೆಟ್ ಘೋಷಣೆ
ನರಸಿಂಹರಾಜ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಇತ್ತೀಚೆಗಷ್ಟೇ ಜೆಡಿಎಸ್ ತೊರೆದು, ಬಿಜೆಪಿ ಸೇರಿದ್ದರು ಸಂದೇಶ ಸ್ವಾಮಿ. ವಿಧಾನ ಪರಿಷತ್ ಸದಸ್ಯ ಸಂದೇಶ ನಾಗರಾಜ್ ಸಹೋದರ ಸಂದೇಶ ಸ್ವಾಮಿಗೆ ನರಸಿಂಹರಾಜ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಿಂದ ನರಸಿಂಹರಾಜ ಕ್ಷೇತ್ರದಲ್ಲೂ ಅಸಮಾಧಾನ ವ್ಯಕ್ತವಾಗಿದೆ.