ಕಪಿಲೆಯ ಪ್ರವಾಹಕ್ಕೆ ನಲುಗಿದ ನಂಜನಗೂಡಿನ ಜನತೆ
ಮೈಸೂರು, ಜುಲೈ 13 : ಈ ಬಾರಿ ಉತ್ತಮ ಮುಂಗಾರು ಮಳೆಯ ಪರಿಣಾಮ ತುಂಬಿ ಹರಿಯುತ್ತಿರುವ ಕಪಿಲೆಯ ಪ್ರವಾಹಕ್ಕೆ ಎಚ್.ಡಿ.ಕೋಟೆ ಮತ್ತು ನಂಜನಗೂಡು ತಾಲೂಕುಗಳ ಜನತೆ, ರೈತರು ಬೆಚ್ಚಿಬೀಳುವಂತಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರನ್ನು ನದಿಗೆ ಬಿಟ್ಟಿರುವುದರಿಂದ ಕಬಿನಿ ಜಲಾಶಯ ಸಮೀಪದ ಸೇತುವೆಗಳು ಮುಳುಗಿದ್ದರೆ, ನಂಜನಗೂಡು ದೇವಸ್ಥಾನದ ಸ್ನಾನಘಟ್ಟ, ಹದಿನಾರುಕಾಲು ಮಂಟಪಗಳು ಮುಳುಗಡೆಯಾಗಿ ಆತಂಕ ಸೃಷ್ಟಿಸಿವೆ.
ಹೇಮಾವತಿ ಜಲಾಶಯದ ನೀರಿನ ಮಟ್ಟ, ಮಳೆ ಪ್ರಮಾಣ ವಿವರ
ಸುತ್ತೂರು ಸೇತುವೆಯೂ ಮುಳುಗುವ ಹಂತದಲ್ಲಿದೆ. ಇನ್ನೊಂದೆಡೆ ಎರಡೂ ತಾಲೂಕುಗಳಲ್ಲೂ ನದಿಪಾತ್ರದ ರೈತರ ಜಮೀನುಗಳಿಗೆ ನುಗ್ಗಿದ ನೀರು ಬೆಳೆಗಳನ್ನು ಆವರಿಸಿದೆ. ಒಟ್ಟಾರೆ ಕಪಿಲೆಯ ಅಬ್ಬರಕ್ಕೆ ಅಕ್ಷರಶಃ ಎರಡೂ ತಾಲೂಕುಗಳು ನಲುಗಿವೆ.
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ಸೇತುವೆಗಳು ಮುಳುಗಿದ್ದು, ಗ್ರಾಮಗಳ ಜಮೀನುಗಳಲ್ಲಿ ಬೆಳೆದ ಬೆಳೆಗಳು ಜಲಾವೃತಗೊಂಡಿರುವುದರಿಂದ ರೈತರು, ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಹಲವಾರು ವರ್ಷಗಳ ನಂತರ ಕಬಿನಿ ಜಲಾಶಯದಲ್ಲಿ 50 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿರುವುದರಿಂದ ಇಂತಹ ಸಮಸ್ಯೆ ಎದುರಾಗಿದೆ.
ಕಬಿನಿ ಜಲಾಶಯದ ಮುಂಭಾಗದಲ್ಲಿರುವ ಬೀಚನಹಳ್ಳಿ ಮತ್ತು ಎನ್.ಬೇಗೂರು ಸೇತುವೆ ಸಂಪೂರ್ಣ ಜಲಾವೃತಗೊಂಡು ಕೆಲ ದಿನಗಳೇ ಕಳೆದಿವೆ. ಬುಧವಾರ ರಾತ್ರಿಯಿಂದ ಮಾದಾಪುರ-ಕೆ.ಬೆಳತ್ತೂರು ರಸ್ತೆ ಮಧ್ಯದ ಸೇತುವೆ ಜಲಾವೃತಗೊಂಡಿದೆ.
ಈ ಎರಡೂ ಸೇತುವೆಗಳಲ್ಲಿ ಸಂಚಾರ ನಿಷೇಧಗೊಳಿಸಿದ್ದು, ಸೇತುವೆ ಬಳಿ ಯಾರೂ ಹೋಗದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನದಿ ಸಮೀಪದಲ್ಲಿ ಅನೇಕ ರೈತರ ಜಮೀನುಗಳಲ್ಲಿ ಬೆಳೆದ ಶುಂಠಿ, ಅರಿಶಿನ, ಬಾಳೆ, ತೆಂಗು, ಹತ್ತಿ, ಹೊಗೆಸೊಪ್ಪು, ಕಬ್ಬು ಇನ್ನಿತರ ಬೆಳೆಗಳಿಗೆ ನೀರು ಆವರಿಸಿಕೊಂಡಿದೆ.
ಕೇರಳದ ವೈನಾಡು ಮತ್ತು ತಾಲೂಕಿನಲ್ಲಿ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಿದ್ದು, ಮುಂದೆ ಇನ್ನು ಭಾರೀ ಪ್ರಮಾಣದಲ್ಲಿ ನೀರನ್ನು ಹೊರ ಬಿಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ರೈತರು, ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಕಬಿನಿ ಜಲಾಶಯದ ನೀರಿನ ಹರಿವು ಅಪಾಯದ ಹಂತ ಮೀರುತ್ತಿದ್ದು, ತಾಲೂಕಿನ ಸುತ್ತೂರು ಸೇತುವೆ ಮುಳುಗುವತ್ತ ಸಾಗಿದೆ. ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಇನ್ನೂ ಹೆಚ್ಚಿನ ನೀರನ್ನು ಯಾವುದೇ ಕ್ಷಣದಲ್ಲಿ ಕಬಿನಿ ಜಲಾಶಯದಿಂದ ಬಿಡುವ ಸಾಧ್ಯತೆ ಇರುವುದರಿಂದ ಮೈಸೂರು ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ಪಾರಂಭಿಸಿದೆ.
ಇನ್ನು ನಂಜನಗೂಡಿನಲ್ಲೂ ಪ್ರವಾಹ ಭೀತಿ ಎದುರಾಗಿದ್ದು, ಈಗಾಗಲೇ ಪರಶುರಾಮ ದೇಗುಲ, ಹದಿನಾರು ಕಾಲುಮಂಟಪಗಳು ಜಲಾವೃತಗೊಂಡಿವೆ. ಸಾರ್ವಜನಿಕರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಹಳ್ಳದಕೇರಿಯ ತಗ್ಗು ಪ್ರದೇಶದ ನಾಲ್ಕು ಮನೆ ಹಾಗೂ ರಾಜಾಜಿ ಕಾಲೋನಿಯ 2 ಮನೆಗಳು ಜಲಾವೃತವಾಗಿದ್ದು, ಜನರನ್ನು ಬೇರೆಡೆಗೆ ಕಳುಹಿಸಲಾಗಿದೆ. ನಗರದ ಲಿಂಗಾಭಟ್ಟರ ಗುಡಿಯ ಬಳಿಯ ಸ್ಮಶಾನ ನೀರಿನಿಂದ ಅವೃತವಾಗಿದೆ. ಅಲ್ಲಿ ಕಾವಲಿಗಿದ್ದ ಕುಟುಂಬದವರ ಮನೆಯನ್ನು ತೆರವುಗೊಳಿಸಲು ತಾಲೂಕು ಆಡಳಿತ ಸೂಚನೆ ನೀಡಿದೆ.