ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಜ್ಜಾಗುತ್ತಿದೆ ಮಲ್ಲಿಗೆ ಸಾರೋಟು!
ಮೈಸೂರು, ನವೆಂಬರ್ 8: 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉಳಿದಿರುವುದು 15 ದಿನಗಳು ಮಾತ್ರ. ಇತ್ತ ಮೆರವಣಿಗೆ ಸಮಿತಿಯಿಂದ ಸಮ್ಮೇಳನದ ಅಧ್ಯಕ್ಷರನ್ನು ಮಲ್ಲಿಗೆ ಹೂವಿನಿಂದ ಅಲಂಕರಿಸಿದ ರಥದಲ್ಲಿ ಕರೆತರಲು ಯೋಜಿಸಲಾಗಿದೆ.
83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಅಕ್ರಮ ವಸೂಲಿ?
ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿರುವ ಅಧ್ಯಕ್ಷರ ಮೆರವಣಿಗೆ ನ.24ರಂದು ಬೆ.9 ಗಂಟೆಗೆ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಡಾ.ಚಂದ್ರಶೇಖರ ಪಾಟೀಲ ಅವರನ್ನು ಮೈಸೂರು ಮಲ್ಲಿಗೆಯಿಂದ ಅಲಂಕೃತಗೊಂಡ ಜೀಪಿನ ಮಂಟಪದಲ್ಲಿ ಸಮ್ಮೇಳನ ನಡೆಯುವ ವೇದಿಕೆಗೆ ಕರೆದೊಯ್ಯಲಾಗುವುದು. ಈ ಸಂದರ್ಭ 30 ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರು ಕುದುರೆ ಸಾರೋಟಿನಲ್ಲಿ ಸಮ್ಮೇಳನದ ಅಧ್ಯಕ್ಷರ ಜೊತೆಗೆ ಮೆರವಣಿಗೆಯಲ್ಲಿ ಸಾಗಲಿದ್ದಾರೆ.
600 ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 300 ಸ್ಥಳೀಯ ಕಲಾವಿದರಿಗೆ ಹಾಗೂ 300 ಹೊರ ಜಿಲ್ಲೆಯ ಕಲಾವಿದರಿಗೆ ಅವಕಾಶ ನೀಡಲಾಗುವುದು. ಶಾಲಾ ಕಾಲೇಜುಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ 5000 ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು. ಇದಲ್ಲದೇ 200 ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಸಿಂಗಾರಗೊಂಡ ಎತ್ತಿನಗಾಡಿ, ಅಟೋ ರಿಕ್ಷಾಗಳು, ಕುದುರೆ ಸಾರೋಟು, ಪೊಲೀಸ್ ಬ್ಯಾಂಡ್ ತಂಡಗಳು ಭಾಗವಹಿಸಲಿದೆ.
ಕನ್ನಡದ ಅಳಿವು -ಉಳಿವಿನ ಬಗ್ಗೆ ಅರಿಯಲು ಸಾಹಿತ್ಯ ಸಮ್ಮೇಳನ ಬೇಕು: ಚಂಪಾ
ಸಮ್ಮೇಳನಾಧ್ಯಕ್ಷರ ಮೆರವಣಿಗೆ ನ.24ರಂದು ಬೆಳಗ್ಗೆ 9 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾಗಲಿದೆ. ಮೆರವಣಿಗೆಯನ್ನು ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಅವರು ಉದ್ಘಾಟಿಸಲಿದ್ದಾರೆ. ಮೆರವಣಿಗೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಟ್ಯಾಬ್ಲೋಗಳು, ಕಲಾತಂಡಗಳು ಪಾಲ್ಗೊಳ್ಳಲಿವೆ.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಗೊಳ್ಳುವ ಮೆರವಣಿಗೆ ಅಶೋಕ ರಸ್ತೆ, ಇರ್ವಿನ್ ರಸ್ತೆ, ಸಯ್ಯಾಜಿ ರಾವ್ ರಸ್ತೆ, ಕೆ ಆರ್ ವೃತ್ತ, ಸಂಸ್ಕೃತ ಪಾಠ ಶಾಲೆ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕವಾಗಿ ಸಮ್ಮೇಳನ ನಡೆಯುವ ಮಹಾರಾಜ ಕಾಲೇಜು ಮೈದಾನವನ್ನು ತಲುಪಲಿದೆ. ಒಟ್ಟಾರೆ 9 ಗಂಟೆಗೆ ಆರಂಭವಾಗುವ ಮೆರವಣಿಗೆ 11 ಗಂಟೆಯ ಹೊತ್ತಿಗೆ ಸಮ್ಮೇಳನ ನಡೆಯುವ ಸಭಾಂಗಣವನ್ನು ತಲುಪಲಿದೆ. ಒಟ್ಟಾರೆ ಎರಡು ಗಂಟೆಗಳ ಕಾಲ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ.
ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಶುರು: ಅಕ್ಷರ ಜಾತ್ರೆಗೆ ಕುಂದಿತೇ ಉತ್ಸಾಹ!?
ಅಂದು ಸಂಜೆ 6 ರಿಂದ 9 ರವರೆಗೆ 6 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮುಖ್ಯ ವೇದಿಕೆಯಲ್ಲಿ 12 ಕಾರ್ಯಕ್ರಮ ಹಾಗೂ ಇನ್ನುಳಿದ ವೇದಿಕೆಗಳಲ್ಲಿ 75 ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕನ್ನಡ ನಾಡು, ನುಡಿ, ಕಲೆ, ಸಂಸ್ಕೃತಿ ಕುರಿತಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಕನ್ನಡ ಕಲಾವಿದರಿಗೆ ಆದ್ಯತೆ ನೀಡಲಾಗುವುದು.