"ನೋಟ್ ಬ್ಯಾನ್ ಆದಾಗಲೇ ಗೌರಿ ಲಂಕೇಶ್ ತೀರಿಕೊಂಡಿದ್ದರು!"
ಮೈಸೂರು, ಸೆಪ್ಟೆಂಬರ್ 9 : "ಗುಂಡಿನ ದಾಳಿಗೂ ಮೊದಲೇ, ಅಂದರೆ ನರೇಂದ್ರ ಮೋದಿಯವರು ನೋಟು ನಿಷೇಧಿಸಿದ ಸಮಯದಕ್ಕೇ ಗೌರಿ ಲಂಕೇಶ್ ತೀರಿಕೊಂಡುಬಿಟ್ಟಿದ್ದರು. ಆ ಸಮಯದಲ್ಲಿ ಪತ್ರಿಕೆಯನ್ನು ನಡೆಸಿದ್ದು ತೀರ ದುಸ್ತರವಾಗಿತ್ತು ಎಂದು ಈ ಬಗ್ಗೆ ನನ್ನೊಂದಿಗೆ ದೂರವಾಣಿಯಲ್ಲಿ ಅಳಲು ಹಂಚಿಕೊಂಡಿದ್ದರು" ಎಂದು ಔಟ್ ಲುಕ್ ನ ಮಾಜಿ ಮುಖ್ಯಸ್ಥ ಕೃಷ್ಣಪ್ರಸಾದ್ ಹೇಳಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೆ.7 ರಂದು ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಗೌರಿ ಲಂಕೇಶ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ರೊಂದಿಗಿನ ಒಡನಾಟವನ್ನು ಸ್ಮರಿಸಿದರು.
ಪತ್ರಿಕೋದ್ಯಮ ಎಷ್ಟೊಂದು ಬಡವಾಗಿದೆ ಎನ್ನುವುದು ಗೌರಿ ಲಂಕೇಶ್ ಹತ್ಯೆಯಿಂದ ಜಗ್ಜಾಹೀರವಾಗಿದೆ ಎಂದು ಕಳವಳ ವ್ಯಕ್ತಪಡಿಸಿ, 1996ರಿಂದ ಪತ್ರಿಕಾ ರಂಗ ಉದ್ಯಮವಾಗಿ ಮಾರ್ಪಟ್ಟಿದ್ದು ಟಿಆರ್ ಪಿ ಗಾಗಿ ವೃತ್ತಿ ಧರ್ಮವನ್ನೇ ಒತ್ತೆಯಿಡುವ ಸ್ಥಿತಿ ಮೂಡಿದೆ ಎಂದು ಬೇಸರಿಸಿದರು.
ಗೌರಿ ಹತ್ಯೆ ಖಂಡಿಸಿ ಸೆ.12ರಂದು ಬೆಂಗಳೂರಲ್ಲಿ ಸಮಾವೇಶ
"ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಲಾಗಿದ್ದು ಆದರೆ ಚಿಕ್ಕಪುಟ್ಟ ವಿಷಯಗಳಿಗೂ ಟ್ವೀಟ್ ಮಾಡುವ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಈ ಬಗ್ಗೆ ಮಾತನಾಡದೇ ಇರುವುದು ದುಃಖಕರವೆಂದ ಅವರು, ಎಡ-ಬಲ ಪಂಥೀಯ ವಾದಬೇಕಿಲ್ಲ, ಪ್ರಸ್ತುತ ಪ್ರಕರಣದಿಂದ ಸಂಪಾದಕೀಯ ಬರೆಯಲೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ, ಟಿ.ಆರ್.ಪಿಗಾಗಿ ಬದುಕುವ ಚಾನಲ್ ಗಳೇ ನಿಮಗೆ ಗುಂಡು ಬೀಳುವುದಕ್ಕೂ ಮುಂಚೆ ಎಚ್ಚೆತ್ತುಕೊಳ್ಳಿ ಎಂದು ಎಚ್ಚರಿಕೆ ನೀಡಿದರು."
ಹಂತಕರು ಈ ನಾಡನ್ನು ಆಳಬೇಕಾದರೆ ಹತ್ಯೆಯಲ್ಲದೇ ಶಾಂತಿ ನೆಲೆಸಲು ಸಾಧ್ಯವೇ ಎಂದು ಮಾರ್ಮಿಕವಾಗಿ ನುಡಿದ ಅವರು, ಸಂಶೋಧಕ ಎಂ.ಎಂ.ಕಲ್ಬುರ್ಗಿಯವರ ಹತ್ಯೆಯಾಗಿ 2 ವರ್ಷ ಕಳೆದರೂ ಇಂದಿಗೂ ಹಂತಕರ ಪತ್ತೆಯಾಗಿಲ್ಲದೇ ಇರುವುದು ವಿಪರ್ಯಾಸ, ಗೌರಿ ಲಂಕೇಶ್ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ತನಿಖೆಗೆ ಸಿಎಂ.ಸಿದ್ದರಾಮಯ್ಯ ಭರವಸೆ ನೀಡಬೇಕೆಂದು ಒತ್ತಾಯಿಸಿದರು.
"ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ರ ಅಮಾನುಷ ಹತ್ಯೆಯ ಬಗ್ಗೆ 'ಡಾನ್', 'ದಿ ಡೈಲಿ ಟೆಲಿಗ್ರಾಫ್'ನಂತಹ ದೇಶ, ವಿದೇಶಗಳ ಹಲವಾರು ಪ್ರಮುಖ ಪತ್ರಿಕೆಗಳು ಸಂಪಾದಕೀಯ ಬರೆದಿವೆ. ಆದರೆ, ದೇಶದ ಪ್ರಮುಖ ಆಂಗ್ಲ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್ ನಲ್ಲಿ ಹತ್ಯೆಯ ಬಗ್ಗೆ ಸಂಪಾದಕೀಯ ಲೇಖನ ಪ್ರಕಟವಾಗದಿರುವುದು ಬೇಸರದ ಸಂಗತಿ. ಪಾಕಿಸ್ತಾನದ ಪ್ರಮುಖ ಇಂಗ್ಲಿಷ್ ದೈನಿಕ 'ಡಾನ್' ಪತ್ರಿಕೆಯೂ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸಂಪಾದಕೀಯ ಬರೆದಿದೆ. ಆದರೆ, ದೇಶದ ಕೆಲವು ಪತ್ರಿಕೆಗಳು ಅದನ್ನು ನಿರ್ಲಕ್ಷ್ಯಿಸಿವೆ. ಇದು ನಮ್ಮ ಇಂದಿನ ಪತ್ರಿಕೋದ್ಯಮ ತನ್ನ ಪ್ಯಾಷನ್ ಕಳೆದುಕೊಳ್ಳುತ್ತಿರುವುದಕ್ಕೆ ನಿದರ್ಶನವಾಗಿದೆ" ಎಂದರು.
"ಪ್ರಸ್ತುತ ದಿನಗಳಲ್ಲಿ ಮುಖ್ಯವಾಹಿನಿಯ ಪತ್ರಿಕೆಗಳು ಮಲಗಿದಂತಿವೆ. ಪತ್ರಿಕೋದ್ಯಮ ತನ್ನ ಮೂಲ ತತ್ವಗಳನ್ನು ಕಳಚಿಕೊಂಡು ವ್ಯಾಪಾರೀಕರಣದತ್ತ ಮುಖಮಾಡಿದೆ. ಈ ವಾಣಿಜ್ಯೀಕರಣದಿಂದ ಸಾಕಷ್ಟು ಸಣ್ಣ ಪತ್ರಿಕೆಗಳು ಬಲಿಯಾಗಿವೆ ನೋಟು ಅಮಾನೀಕರಣದಿಂದ ಸಾಕಷ್ಟು ಉದ್ದಿಮೆಗಳು, ವ್ಯವಹಾರಗಳು ತೊಂದರೆಗೆ ಒಳಗಾದಂತೆ ನಮ್ಮ ಪತ್ರಿಕೆಯು ತೊಂದರೆಗೆ ಸಿಲುಕಬೇಕಾಯಿತು" ಎಂದು ಗೌರಿ ಲಂಕೇಶ್ ತಮ್ಮ ಬಳಿ ಹೇಳಿಕೊಂಡ ಘಟನೆಯನ್ನು ಸಲಹೆ ನೀಡಿದರು.
ಕೇವಲ ಟಿಆರ್ ಪಿ ಹಿಂದೆ ಬೀಳಬಾರದು. ಅನ್ಯಾಯ, ಅಸಮಾನತೆ ಮುಂತಾದವುಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಈ ವಿಷಯಗಳ ಬಗ್ಗೆ ಪತ್ರಿಕೋದ್ಯಮ ಚಿಂತನೆ ನಡೆಸಬೇಕಿದೆ. ಓರ್ವ ಮಹಿಳಾ ದನಿಯನ್ನು ಅಡಗಿಸುವ ಮೂಲಕ ಸ್ತ್ರೀ ಸಂವೇದನೆ ವಾದವನ್ನು ಹತ್ಯೆ ಮಾಡಲಾಗಿದೆ. ಇಂಥ ಘಟನೆಗಳ ಕಾರಣವಾಗಿ ನಮ್ಮ ದೇಶದಲ್ಲಿ ಪ್ರಜಾಪ್ರ ಭುತ್ವಕ್ಕೆ ಗಂಡಾಂತರ ಕಾದಿದೆ ಎನ್ನುವ ಭಯ ನಾಗರಿಕರನ್ನು ಕಾಡುತ್ತಿದೆ ಎಂದು ಹೇಳಿದರು.