ಮೈಸೂರು: ಕಬಿನಿ ಜಲಾಶಯ ಭರ್ತಿಗೆ 3 ಅಡಿಯಷ್ಟೇ ಬಾಕಿ
ಮೈಸೂರು, ಸೆಪ್ಟೆಂಬರ್ 18 : ಕೊಡಗು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ, ಕಬಿನಿ ಜಲಾಶಯ ಭರ್ತಿಗೆ ಕೇವಲ 3 ಅಡಿ ಮಾತ್ರ ಬಾಕಿ ಇದೆ. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕು, ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 2281 ಅಡಿಗಳಿಗೆ ದಾಟಿದೆ.
ದೇಶಕ್ಕೆ ಸರ್ದಾರ್ ಸರೋವರ್ ಅಣೆಕಟ್ಟೆ ಸಮರ್ಪಿಸಿದ ಮೋದಿ
ಇದರ ಒಟ್ಟು ನೀರಿನ ಮಟ್ಟ 2284 ಅಡಿಗಳಷ್ಟಿದ್ದು, ಇನ್ನು ಜಲಾಶಯ ಭರ್ತಿಯಾಗಲು ಮೂರು ಅಡಿ ಮಾತ್ರ ಬಾಕಿ ಇದೆ. ಇದು ಸಹ ಕೆಲವೇ ದಿನಗಳಲ್ಲಿ ಭರ್ತಿಯಾಗುವ ಸೂಚನೆ ಸಿಕ್ಕಿದೆ. ಜಲಾಶಯಕ್ಕೆ 12 ಸಾವಿರ ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು, 2 ಸಾವಿರ ಕ್ಯೂಸೆಕ್ಸ್ ನೀರು ಜಲಾಶಯದಿಂದ ಹೊರ ಹೋಗುತ್ತಿದೆ. ಗರಿಷ್ಠ ಸಾಮರ್ಥ್ಯವನ್ನು ಹೊಂದಿರುವ ಕಬಿನಿ ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ಕಬಿನಿ ನದಿಗೆ ಹೆಚ್ಚು ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇದರಿಂದ ಕಪಿಲ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದ್ದು, ಕಪಿಲ ನದಿ ಪಾತ್ರದ ಇಕ್ಕೆಲಗಳ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಕಬಿನಿ ಜಲಾನಯನ ಪ್ರದೇಶ ಹಾಗೂ ಕೇರಳದ ವೈನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. ಕಬಿನಿ ಜಲಾಶಯದ ಒಳಹರಿವು ಇಂದು ಬೆಳಿಗ್ಗೆಯ ವೇಳೆಗೆ 13,000 ಕ್ಯೂಸೆಕ್ ದಾಟಿದೆ. ಜಲಾಶಯದಿಂದ 2000 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದ್ದು, ಪರಿಣಾಮ ಜಲಾಶಯದ ಒಳಹರಿವಿಗೆ ಅನುಗುಣವಾಗಿ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯಿದೆ
ಕಬಿನಿ ಜಲಾಶಯ ಕಳೆದ ಎರಡು ವರ್ಷದಿಂದ ಭರ್ತಿಯಾಗಿರಲಿಲ್ಲ. ಈ ವರ್ಷ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ ಈ ವರ್ಷ ಭರ್ತಿಯಾಗುವ ಸೂಚನೆ ಸಿಕ್ಕಿದೆ.