ಭಾರೀ ವರ್ಷಧಾರೆಗೆ ಮೈದುಂಬಿದ ಜಲಾಶಯಗಳು: ರೈತರ ಮೊಗದಲ್ಲಿ ಖುಷಿ
ಮೈಸೂರು, ಜೂನ್ 15 : ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರದಿಂದಾಗಿ ಕೊಡಗು, ಮೈಸೂರು, ಹಾಸನ ಜಿಲ್ಲೆಗಳ ನದಿಗಳೆಲ್ಲಾ ತುಂಬಿ ಹರಿಯುತ್ತಿದ್ದು, ಅಣೆಕಟ್ಟೆಗಳಿಗೆ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
ಕಳೆದ ಮೂರು ವರ್ಷಗಳಿಂದ ಮಳೆ ಕೊರತೆ ಕಾರಣದಿಂದ ಅಣೆಕಟ್ಟೆಗಳಲ್ಲಿ ನೀರಿಲ್ಲದೇ ಮೈಸೂರು ಭಾಗದ ಕೃಷಿ ಚಟುವಟಿಕೆಗಳು ಕಡಿಮೆಯಾಗಿದ್ದವು. ಈ ಬಾರಿ ಉತ್ತಮ ಮುಂಗಾರಿನ ಕಾರಣ ಜಲಾಶಯಗಳ ಒಡಲು ತುಂಬುತ್ತಿರುವುದು ಕೃಷಿಕರಿಗೆ ಖುಷಿಯ ಸಂಗತಿಯಾಗಿದೆ.
ಜೋರು ಮಳೆಗೆ ತುಂಬಿದ ಕಬಿನಿ ಜಲಾಶಯ: ಸಂತಸಗೊಂಡ ರೈತರು
ಎಚ್.ಡಿ.ಕೋಟೆಯ ಕಬಿನಿ ಅಣೆಕಟ್ಟೆಯ ಜಲಾನಯನ ಪ್ರದೇಶ ವೈನಾಡಿನಲ್ಲಿ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಅಣೆಕಟ್ಟೆ ಭರ್ತಿಗೆ 5 ಅಡಿಗಳಷ್ಟೇ ಬಾಕಿಯಿದೆ.
ಏರುತ್ತಲಿದೆ ನೀರಿನ ಮಟ್ಟ
ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪುತ್ತಿರುವುದರಿಂದ ನೀರನ್ನು ಹೊರಬಿಡಲಾಗುತ್ತಿದೆ. ಸಂಜೆ ವೇಳೆಗೆ ಹೊರಹರಿವು 15,000 ಕ್ಯೂಸೆಕ್ಸ್ ಏರಿತ್ತು. ಯಾವುದೇ ಸಂದರ್ಭದಲ್ಲಿಯಾದರೂ ಇನ್ನೂ ಹೆಚ್ಚು ನೀರನ್ನು ನದಿಗೆ ಬಿಡುವ ಸಂಭವವಿದೆ.
ಕಬಿನಿ ಜಲಾಶಯಕ್ಕೆ 35 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ ಏರುತ್ತಲೇ ಇದೆ. ಜಲಾಶಯದ ಸಾಮರ್ಥ್ಯ 15.11 ಟಿಎಂಸಿ ಆಗಿದ್ದು, ಸದ್ಯ 5.30 ಟಿಎಂಸಿ ಸಂಗ್ರಹ ಇದೆ.
ಕಬಿನಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಮತ್ತು ಜಾನುವಾರು ರಕ್ಷಣೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಬಿನಿ ಜಲಾಶಯ ವಿಭಾಗದ ಕಾರ್ಯಪಾಲಕ ಅಭಿಯಂತರ ಸಿ.ಪಿ.ಜಗದೀಶ್ ತಿಳಿಸಿದ್ದಾರೆ.
ಕೆಆರ್ಎಸ್ ನಲ್ಲಿ ಒಳಹರಿವು ಹೆಚ್ಚಳ
ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಭಾಗಮಂಡಲದಲ್ಲಿ 195 ಮಿ.ಮೀ. ಮಳೆಯಾಗಿದೆ. ಪರಿಣಾಮ ಕೃಷ್ಣರಾಜಸಾಗರ ಅಣೆಕಟ್ಟೆಗೆ ಒಳಹರಿವು ಗಣನೀಯ ವಾಗಿ ಹೆಚ್ಚಿದೆ. 124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ನೀರಿನ ಮಟ್ಟ 92.30 ಅಡಿಗಳಿಗೆ ಮುಟ್ಟಿದೆ.
ಭರ್ತಿಯಾಗುತ್ತಿದೆ ಹೇಮಾವತಿ
ಹಾಸನ ಜಿಲ್ಲೆ ಗೊರೂರು ಪಟ್ಟಣದಲ್ಲಿರುವ ಹೇಮಾವತಿ ಅಣೆಕಟ್ಟೆಗೂ 37,479 ಕ್ಯೂಸೆಕ್ಸ್ ಒಳಹರಿವು ಇದ್ದು, ನೀರಿನ ಮಟ್ಟ 2,894 ಅಡಿಗಳಿಗೆ ಮುಟ್ಟಿತ್ತು. ಅಣೆಕಟ್ಟೆ ಭರ್ತಿಗೆ ಇನ್ನೂ 28 ಅಡಿ ಬಾಕಿ ಇದೆ.
ಮುನ್ನೆಚ್ಚರಿಕೆ ಸೂಚನೆ
ಕಬಿನಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಡ್ಯಾಂಗೆ ಒಳ ಹರಿವು ಹೆಚ್ಚಿದ್ದು, ಯಾವುದೇ ಕ್ಷಣದಲ್ಲೂ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಹಿನ್ನೆಲೆಯಲ್ಲಿ ಸುಮಾರು 15000 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಯಾವ ಸಂದರ್ಭದಲ್ಲಾದರೂ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಂಭವವಿದೆ. ಕಬಿನಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಮತ್ತು ಜಾನುವಾರು ರಕ್ಷ ಣೆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು.
ಅಲ್ಲದೆ, ಸುರಕ್ಷಿತ ಸ್ಥಳಗಳಿಗೆ ತೆರಳಲು ಮುಂದಾಗಬೇಕು ಎಂದು ಕಬಿನಿ ಜಲಾಶಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಿ.ಪಿ. ಜಗದೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.