ಉನ್ನತ ಶಿಕ್ಷಣ ಖಾತೆಗೆ ಬೇಸತ್ತು ಜಿಟಿ ದೇವೇಗೌಡ ಅಜ್ಞಾತ ಸ್ಥಳಕ್ಕೆ
ಮೈಸೂರು, ಜೂನ್ 9 : ಖಾತೆ ಹಂಚಿಕೆ ಬೆನ್ನಲ್ಲೇ ಜೆಡಿಎಸ್ ನಲ್ಲಿ ಕೂಡ ಭಿನ್ನಮತ ಭುಗಿಲೆದ್ದಿದ್ದು, ಉನ್ನತ ಶಿಕ್ಷಣ ಸಚಿವ ಖಾತೆಗೆ ನೀಡಿದ್ದಕ್ಕಾಗಿ ಸಚಿವ ಜಿ.ಟಿ.ದೇವೇಗೌಡರ ಬೆಂಬಲಿಗರು ತಕರಾರು ಎತ್ತಿದ್ದಾರೆ.
ಇತ್ತ 8ನೇ ತರಗತಿ ಓದಿರುವ ಜಿ.ಟಿ.ದೇವೇಗೌಡಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ. ಆ ಖಾತೆಯಿಂದ ಕ್ಷೇತ್ರದ ಜನರಿಗೆ ಆಗುವ ಪ್ರಯೋಜನೆ ಏನು? ಖಾತೆ ಬದಲಾಯಿಸಿ ಎಂದು ಜಿ.ಟಿ ದೇವೇಗೌಡರು ಪಟ್ಟು ಹಿಡಿದಿದ್ದಾರೆ. ಜಿ.ಟಿ ದೇವೇಗೌಡರು ಸರ್ಕಾರಿ ಕಾರನ್ನು ವಾಪಸ್ ಕೊಟ್ಟು ಮುನಿಸು ಪ್ರದರ್ಶನ ಮಾಡಿದ್ದು, ಯಾರ ಸಂಪರ್ಕಕ್ಕೂ ಸಿಗದೆ ಮೈಸೂರಿನ ಅಜ್ಞಾತ ಸ್ಥಳದಲ್ಲಿ ಉಳಿದುಕೊಂಡದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜಿ.ಟಿ.ದೇವೇಗೌಡಗೆ ಕೊಟ್ಟ ಮಾತು ತಪ್ಪಿದ ಕುಮಾರಸ್ವಾಮಿ
ಜಿ.ಟಿ ದೇವೇಗೌಡರ ಬೆಂಬಲಿಗರು, ಪ್ರಬಲ ಖಾತೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಜಯನಗರದ ದೇವೇಗೌಡರ ನಿವಾಸದ ಮುಂದೆ ಜಮಾಯಿಸಿ ಬೆಂಬಲಿಗರು ಧರಣಿ ನಡೆಸುತ್ತಿದ್ದಾರೆ. ಜೆಡಿಎಸ್ ವರಿಷ್ಠರ ಈ ನಡೆಗೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಿಟಿಡಿ ಪುತ್ರ ಹರೀಶ್ ಗೌಡರಿಗೆ ಜೆಡಿಎಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆಯಿತು. ನಿವಾಸದ ಮುಂದೆ ಕಾರ್ಯಕರ್ತರು ಪ್ರತಿಭಟನೆ ಮಾಡುವಾಗ ಸ್ಥಳಕ್ಕೆ ಆಗಮಿಸಿದ ಹರೀಶ್ ಗೌಡರನ್ನು ಉದ್ದೇಶಿಸಿ, ನೀವು ಮತ್ತು ನಿಮ್ಮ ತಂದೆ ಮೌನ ವಹಿಸೋದು ಬೇಡ. ಕೂಡಲೇ ಪ್ರಬಲ ಖಾತೆ ನೀಡುವಂತೆ ಹಠ ತೊಡಿ ಎಂದು ಒತ್ತಾಯಿಸಿದರು.
ಸತೀಶ್ ಜಾರಕಿಹೊಳಿ ಪರ ಮೈಸೂರಿನಲ್ಲಿ ಪ್ರತಿಭಟನೆ
ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಆಕ್ರೋಶಗೊಂಡ ಕಾರ್ಯಕರ್ತರು ಮೈಸೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ನಗರದ ಪುರಭವನದ ಬಳಿಯ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಮಾನವ ಬಂಧುತ್ವ ವೇದಿಕೆ ಮತ್ತು ದಲಿತ ಸಂಘಟನೆಗಳ ಒಕ್ಕೂಟಗಳು ಪ್ರತಿಭಟನೆ ನಡೆಸಿದವು.
ಎಐಸಿಸಿ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ಸತೀಶ್ ಜಾರಕಿಹೊಳಿ
ಕೈಗೆ ಕಪ್ಪು ಪಟ್ಟಿ ಧರಿಸಿ, ಸತೀಶ್ ಜಾರಕಿಹೋಳಿ ಭಾವಚಿತ್ರ ಹಿಡಿದು ಪ್ರತಿಭಟಿಸಿದರು. ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದೆ ದಲಿತರನ್ನು ಅವಮಾನಿಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಸತೀಶ್ ಜಾರಕಿಹೊಳಿ ಅಭಿಮಾನಿಗಳ ಸಂಘದ ಅಧ್ಯಕ್ಷ ರವಿಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.