ರೆಸಾರ್ಟ್ ಪಾಲಿಟಿಕ್ಸ್: ಬಿಜೆಪಿ ಕಾಲೆಳೆದ ಮುಖ್ಯಮಂತ್ರಿ ಕುಮಾರಸ್ವಾಮಿ
ಮೈಸೂರು, ಜನವರಿ 20: ಜೆಡಿಎಸ್ ಗೆ ರೆಸಾರ್ಟ್ ರಾಜಕೀಯದ ಅನಿವಾರ್ಯತೆ ಇಲ್ಲ. ಬಿಜೆಪಿಯವರು ಮಾಡಿದ ಗೊಂದಲಕ್ಕಾಗಿ ಕಾಂಗ್ರೆಸ್ ನವರು ತಮ್ಮ ಶಾಸಕರ ಜೊತೆ ಮಾತುಕತೆ ನಡೆಸಲು ರೆಸಾರ್ಟ್ ಗೆ ತೆರಳಿದ್ದಾರೆ ಅಷ್ಟೇ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.
ತಮ್ಮ ಪುತ್ರ ನಿಖಿಲ್ ಅಭಿನಯದ ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭಕ್ಕೆಂದು ಮೈಸೂರಿಗೆ ನೇರವಾಗಿ ಕೊಲ್ಕಾತದಿಂದ ಅಗಮಿಸಿದ ಸಿಎಂ ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ರೆಸಾರ್ಟ್ ರಾಜಕೀಯ ಎಂಬುದು ತಪ್ಪು ಕಲ್ಪನೆ. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯವರು ಮಾಡಿದ ಗೊಂದಲಕ್ಕಾಗಿ ಕಾಂಗ್ರೆಸ್ ನವರು ತಮ್ಮ ಶಾಸಕರ ಜೊತೆ ಮಾತುಕತೆ ನಡೆಸಲು ರೆಸಾರ್ಟ್ ಗೆ ತೆರಳಿದ್ದಾರೆ. ಹಾಗೆಂದು ನಮ್ಮ ಜೆ.ಡಿ.ಎಸ್ ಶಾಸಕರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇಲ್ಲ ಎಂದರು.
ಕೋಲ್ಕತ್ತದಲ್ಲಿ ಕರ್ನಾಟಕ ಬಿಜೆಪಿಯ ಬೆತ್ತಲಾಗಿಸಿದ ಕುಮಾರಸ್ವಾಮಿ
ಬಿಜೆಪಿಯ ಯಾವ ಶಾಸಕರನ್ನು ನಾವು ಆಪರೇಷನ್ ಗೆ ಒಳಪಡಿಸಿಲ್ಲ. ಈಗ ನಾವು ಆಪರೇಷನ್ ಶುರು ಮಾಡ್ಬೇಕು ಎಂದು ಬಿಜೆಪಿ ನಿರೀಕ್ಷಿಸುತ್ತಿದೆಯಾ? ನಿರೀಕ್ಷೆ ಇದ್ದರೆ ನಮಗೆ ಹೇಳಲಿ, ಆಗ ನಾವು ಮುಂದೆ ನೋಡುತ್ತೇವೆ ಎಂದು ಬಿಜೆಪಿ ಅವರ ಕಾಲೆಳೆದರು.
ನಾವು ಅಂತಹ ಕೆಲಸಕ್ಕೆ ಮುಂದಾಗುವುದಿಲ್ಲ
ಈ ಹಿಂದೆ ಯಡಿಯೂರಪ್ಪ ಅವರು ತಮ್ಮ ಸರ್ಕಾರ ರಚನೆ ಮಾಡಿದ ಮೇಲೂ ಆಪರೇಷನ್ ಕಮಲ ನಡೆಸಿದರು. ನಾವು ಅಂತಹ ಕೆಲಸಕ್ಕೆ ಮುಂದಾಗುವುದಿಲ್ಲ. ಆ ಅನಿವಾರ್ಯತೆಯೂ ನಮಗಿಲ್ಲ. ಬಿಜೆಪಿ ಸದಾ ಮೈತ್ರಿ ಸರ್ಕಾರವನ್ನ ಬೀಳಿಸುವ ಕನಸು ಕಾಣುತ್ತಲೇ ಇರುತ್ತೆ. ಅದಕ್ಕಾಗಿ ಇಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ. ಆದರೆ ಅದ್ಯಾವುದು ಫಲ ಕೊಡುವುದಿಲ್ಲ ಎಂದು ಸಿಎಂ ಕಿಡಿಕಾರಿದರು.
ಅತ್ಯಂತ ಬೃಹತ್ ಸಮಾವೇಶ
ಪಶ್ಚಿಮ ಬಂಗಾಳದಲ್ಲಿ ಶನಿವಾರ (ಜ.19)ನಡೆದ ಸಮಾವೇಶ ದೇಶದಲ್ಲಿಯೇ ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಬೃಹತ್ ಸಮಾವೇಶ. ಇದು ಕೇಂದ್ರ ನಾಯಕರಿಗೆ ಎಚ್ಚರಿಕೆ ಘಂಟೆ . ಸಿಎಂ ಮಮತಾ ಬ್ಯಾರ್ಜಿಯವರ ಶಕ್ತಿ, ಸಾಮರ್ಥ್ಯವನ್ನು ನಾನು ಈ ಸಮಾವೇಶದಲ್ಲಿ ನೋಡಿದೆ. ಕೇಂದ್ರ ಸರ್ಕಾರ ತಮಗೆ ಯಾವುದೇ ಪರ್ಯಾಯ ನಾಯಕರೇ ಇಲ್ಲ ಅನ್ನೋ ಭಾವನೆಯಲ್ಲಿದ್ದರು ಎಂದು ಕುಮಾರಸ್ವಾಮಿ ತಿಳಿಸಿದರು.
ಆದಿಚುಂಚನಗಿರಿ ಶ್ರೀಗಳ ಹೇಳಿಕೆಗೆ ಧ್ವನಿಗೂಡಿಸಿದ ಸಿಎಂ ಎಚ್ ಡಿ ಕುಮಾರಸ್ವಾಮಿ
ಈ ಸಭೆ ಮೂಲಕ ಉತ್ತರ ಕೊಟ್ಟಿದ್ದಾರೆ
ಕರ್ನಾಟಕದ ಮೈತ್ರಿ ಸರ್ಕಾರದ ಕಾರ್ಯಕ್ರಮದ ಬಳಿಕ ಶನಿವಾರದ (ಜ.19)ಸಭೆ ಅತ್ಯಂತ ಅದ್ಭುತವಾದ ಸಮಾವೇಶ ಎಂದ ಕುಮಾರಸ್ವಾಮಿ ಪ್ರಧಾನಿ ತಮಗೆ ಯಾರೂ ಸರಿ ಸಾಟಿ ಇಲ್ಲ ಅಂದುಕೊಂಡಿದ್ದಾರೆ. ಆದರೆ ಅದಕ್ಕೆ ಪಶ್ಚಿಮ ಬಂಗಾಳದ ಜನ ಈ ಸಭೆ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದರು.
ಸರ್ಕಾರವನ್ನು ಅಸ್ಥಿರಗೊಳಿಸೊಲ್ಲ: ಯಡಿಯೂರಪ್ಪ ಮಾತಿನ ಮರ್ಮವೇನು?
ಲೋಕಸಭೆ ಚುನಾವಣೆ ಅಷ್ಟು ಸುಲಭವಾಗಿರುವುದಿಲ್ಲ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಒಟ್ಟಾಗಿ ಎದುರಿಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ ಎಂದ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯಗಳಲ್ಲೂ ಬಿಜೆಪಿಯೇತರ ಪಕ್ಷಗಳು ಒಂದಾಗುತ್ತಿವೆ. ಬಿಜೆಪಿಗೆ ಮುಂದಿನ ಚುನಾವಣೆ ಅಷ್ಟು ಸುಲಭವಾಗಿರುವುದಿಲ್ಲ ಎಂದರು.