ಮೈಸೂರಿನಲ್ಲಿ ಜ.1ಕ್ಕೆ ಭಕ್ತಾದಿಗಳಿಗೆ 2 ಲಕ್ಷ ಲಡ್ಡು ವಿತರಣೆ
ಮೈಸೂರಿನ ವಿಜಯ ನಗರ ಒಂದನೇ ಹಂತದಲ್ಲಿರುವ ಶ್ರೀಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜನವರಿ 1ರಂದು ಬೆಳಿಗ್ಗೆ 4ಗಂಟೆಯಿಂದ 12ರವರೆಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡುಗಳನ್ನು ಭಕ್ತಾದಿಗಳಿಗೆ ವಿತರಣೆಯಾಗಲಿದೆ.
ಮೈಸೂರು, ಡಿಸೆಂಬರ್ 24 : ಮೈಸೂರಿನ ವಿಜಯ ನಗರ ಒಂದನೇ ಹಂತದಲ್ಲಿರುವ ಶ್ರೀಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜನವರಿ 1ರಂದು ಬೆಳಿಗ್ಗೆ 4ಗಂಟೆಯಿಂದ 12ರವರೆಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡುಗಳನ್ನು ಭಕ್ತಾದಿಗಳಿಗೆ ಪ್ರೊ.ಭಾಷ್ಯಂ ಸ್ವಾಮೀಜಿ ವಿತರಿಸಲಿದ್ದಾರೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ತಿಳಿಸಿದರು.
ದೇವಸ್ಥಾನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಶ್ರೀನಿವಾಸನ್ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು ಜ.1ರಂದು ಬೆಳಿಗ್ಗೆ 4ಗಂಟೆಯಿಂದಲೇ ನಡೆಯಲಿದ್ದು, ದೇವರಿಗೆ ಹತ್ತು ಕ್ವಿಂಟಾಲ್ ಪುಳಿಯೋಗರೆ ನೈವೇದ್ಯ ಮಾಡಲಾಗುವುದು ಎಂದರು.[ತಿರುಪತಿ ಲಡ್ಡುಗೂ ಪರವಾನಗಿಯೇ? ಗೋವಿಂದಾ ಗೋವಿಂದ]
ಭಕ್ತಾದಿಗಳಿಗಾಗಿ ಎರಡು ಲಕ್ಷ ಲಡ್ಡು ತಯಾರಿಸಲಾಗಿದ್ದು, ಲಡ್ಡು ತಯಾರಿಕೆಗೆ 50ಕ್ವಿಂಟಾಲ್ ಕಡಲೆಹಿಟ್ಟು, 100ಕ್ವಿಂಟಾಲ್ ಸಕ್ಕರೆ, 4000ಲೀಟರ್ ಖಾದ್ಯ ತೈಲ, 100ಕೆ.ಜಿ.ಗೋಡಂಬಿ, 100ಕೆ.ಜಿ.ಒಣದ್ರಾಕ್ಷಿ, 50ಕೆ.ಜಿ.ಬಾದಾಮಿ ಸೇರಿದಂತೆ ಪ್ರಸಾದವನ್ನು ತಯಾರಿಸಲಾಗುತ್ತಿದ್ದು ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.