ಜಿಟಿಜಿಟಿ ಮಳೆಯಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ
ಮೈಸೂರು, ಅಕ್ಟೋಬರ್ 11 : ಐತಿಹಾಸಿಕ ಜಂಬೂ ಸವಾರಿಗೆ ಅಲಂಕೃತಗೊಂಡು ಕಾದುಕುಳಿತಿರುವ ಮೈಸೂರಿಗೆ ಮಳೆಯ ಸಿಂಚನ. ಆ ಜಿಟಿಜಿಟಿ ಮಳೆಯ ನಡುವೆಯೂ ಸರಿಯಾಗಿ 2.16ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು.
ಇದರೊಂದಿಗೆ, ವಿಶ್ವವಿಖ್ಯಾತ ಜಂಬೂ ಸವಾರಿಗೆ ಮುಂಚಿತವಾಗಿ ದಸರಾ ಆನೆಗಳ, ಸ್ತಬ್ಧಚಿತ್ರಗಳ, ವಿಧವಿಧವಾದ ಕಲಾಪ್ರಕಾರಗಳ ಮೆರವಣಿಗೆ ಆರಂಭವಾಗಿದೆ. ಮೆರವಣಿಗೆಯ ಹಾದಿಗುಂಟ ಸಹಸ್ರಾರು ಜನರು ನೆರೆದು ಆನಂದಿಸುತ್ತಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿರುವ 42ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ನೆರೆದವರ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಮೆರವಣಿಗೆಯ ಹಾದಿಯುದ್ದಕ್ಕೂ ಚಪ್ಪರ ಹಾಕಿರುವುದರಿಂದ ಜನರು ಅದರಡಿಯಲ್ಲಿ ಕುಳಿತು ಮೆರವಣಿಗೆ ನೋಡುವಂತಾಗಿದೆ. [ಮಳೆಯಿಲ್ಲದೆ ಕಂಗಾಲಾಗಿದ್ದ ಮೈಸೂರಿಗೆ ವರುಣನ ಸಿಂಚನ]
ಅರಮನೆಯಿಂದ ಬನ್ನಿಮಂಟಪದ ಹಾದಿ : ಅರಮನೆಯಿಂದ ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಕಾಲೇಜು ಸರ್ಕಲ್, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ, ಜಂಬೂ ಸವಾರಿ ಬನ್ನಿಮಂಟಪ ತಲುಪಲಿದೆ.
ಜಂಬೂ ಸವಾರಿ ಸಾಗುವ ರಸ್ತೆಯ ಉದ್ದಕ್ಕೂ, ವಿಶೇಷ ವಾಹನವೊಂದು ಸಂಚರಿಸಲಿದೆ. ಗಜಪಡೆಗೂ ಮುನ್ನ, ತೆರಳುವ ಈ ವಾಹನಕ್ಕೆ ಮ್ಯಾಗ್ನೆಟ್ ಅಳವಡಿಸಲಾಗಿದೆ. ಲೋಹದ ಯಾವುದೇ ವಸ್ತುವನ್ನ ಇದು ಸೆಳೆದುಕೊಳ್ಳುತ್ತದೆ. ಅಥವಾ ಇತರೇ ಯಾವುದೇ ಆಯುಧಗಳು ಆನೆಗಳ ಕಾಲಿಗೆ ಚುಚ್ಚದಂತೆ ಈ ಕ್ರಮ ಕೈಗೊಳ್ಳಲಾಗಿದೆ. [In Pics : ಅರಮನೆಯಲ್ಲಿ ಆಯುಧ ಪೂಜೆ ವೀಕ್ಷಿಸಿದ ತ್ರಿಷಿಕಾ]
ಇನ್ನು, ಅರಮನೆಯಿಂದ ಬನ್ನಿಮಂಟಪಕ್ಕೆ ತೆರಳುವ ರಸ್ತೆಯನ್ನು ತಳಿರು ತೋರಣಗಳಿಂದ ಸ್ಥಳೀಯ ನಿವಾಸಿಗಳೇ ಅಲಂಕರಿಸಿದ್ದಾರೆ. ಮನೆಗಳ ಮುಂದೆ, ಅಂಗಡಿಗಳ ಮುಂದೆ ರಂಗೋಲಿ ಹಾಕಿದ್ದಾರೆ. ಇನ್ನು, 4.30ರ ವೇಳೆಗೆ, ಜಂಬೂ ಸವಾರಿ, ಅರಮನೆಯಿಂದ ಹೊರಡಲಿದೆ.
ನಾಲ್ಕು ಕಿಲೋ ಮೀಟರ್ ಹಾದಿಯನ್ನು, ಸಾಮಾನ್ಯವಾಗಿ ಒಂದೂವರೆ ಗಂಟೆ ಅವಧಿಯಲ್ಲಿ ತಲುಪುತ್ತಿತ್ತು ಗಜ ಪಡೆ. ಆದ್ರೆ, ಚಿನ್ನದ ಅಂಬಾರಿಯ ಮೆರವಣಿಗೆಯ ಸಾಲೂ ದೊಡ್ಡದಿರುವುದರಿಂದ, ಇಂದು ಈ ಪ್ರಯಾಣ, ಸರಿ ಸುಮಾರು ಮೂರೂವರೆ ಗಂಟೆಯಾಗಲಿದೆ. ರಾತ್ರಿ ಎಂಟು ಗಂಟೆ ವೇಳೆಗೆ, ಜಂಬೂ ಸವಾರಿ, ಬನ್ನಿಮಂಟಪ ತಲುಪಲಿದೆ. ಆ ನಂತರವೇ, ಪಂಜಿನ ಕವಾಯತು ಆರಂಭವಾಗಲಿದೆ.