ಕರ್ನಾಟಕದ ಯೋಗಿಯಾಗ್ತಾರಾ ಮಾದಾರ ಚೆನ್ನಯ್ಯ ಸ್ವಾಮೀಜಿ?
Recommended Video
ಮೈಸೂರು, ಆಗಸ್ಟ್ 31: ರಾಜಕೀಯ ಚಾಣಕ್ಯ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರ್ನಾಟಕದ ಬಿಜಪಿಯನ್ನು ರಿಪೇರಿ ಮಾಡುವಲ್ಲಿ ಮುಂದಾಗಿದ್ದು, ಮಾದಾರ ಚೆನ್ನಯ್ಯ ಸ್ವಾಮೀಜಿ ಅವರನ್ನು ಪಕ್ಷಕ್ಕೆ ಎಳೆದು ತರುವ ಮೂಲಕ ಕರ್ನಾಟಕದ ಯೋಗಿ ಆದಿತ್ಯನಾಥ್ ಮಾಡಲು ಹೊರಟಿರುವುದು ಅವರದ್ದೇ ಪಕ್ಷದ ಹಿರಿಯ ಮುಖಂಡರೇ ನಿಬ್ಬೆರಗಾಗುವಂತೆ ಮಾಡಿದೆ.
ಇದುವರೆಗೆ ಬಿಜೆಪಿಯಲ್ಲಿ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಾ ಕಾಲ ಕಳೆಯುತ್ತಿದ್ದವರಿಗೆ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭ ಅಮಿತ್ ಶಾ ಚುರುಕು ಮುಟ್ಟಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದರೂ ಅವರ ಮೇಲಿರುವ ಭ್ರಷ್ಟಾಚಾರದ ಆರೋಪಗಳಿಂದ ಹೊರ ಬಂದು ಮುಂದಿನ ಚುನಾವಣೆ ಹೊತ್ತಿಗೆ ಮತದಾರರನ್ನು ತನ್ನತ್ತ ಸೆಳೆದುಕೊಳ್ಳುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಏಕೆಂದರೆ ಅವರನ್ನು ಹೆಡೆಮುರಿಗೆ ಕಟ್ಟಲು ಏನೆಲ್ಲ ಬೇಕೋ ಅದೆಲ್ಲವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತಿದೆ.
ದಲಿತ ಕುಟುಂಬಗಳಿಗೆ ರೇಷ್ಮೆ ಸೀರೆ,ಪಂಚೆ-ಶರ್ಟ್ ನೀಡಿದ ಬಿಎಸ್ ವೈ
ಜೈಲಿಗೆ ಹೋದ ಮುಖ್ಯಮಂತ್ರಿ ಎಂಬ ಕಳಂಕ ಅವರ ಮೇಲಿದ್ದು ಅದೊಂದನ್ನೇ ಹಿಡಿದುಕೊಂಡು ಕಾಂಗ್ರೆಸ್ ಮುಖಂಡರು ಜಗ್ಗಾಡುತ್ತಿದ್ದಾರೆ. ಇನ್ನು ಮೇಲ್ನೋಟಕ್ಕೆ ಈಶ್ವರಪ್ಪ ಮತ್ತು ಯಡಿಯೂರಪ್ಪ ಸರಿಹೋದಂತೆ ಕಾಣುತ್ತಿದ್ದಾರೆಯಾದರೂ ಒಳಗೊಳಗೆ ಶೀತಲ ಸಮರ ನಡೆಯುತ್ತಲೇ ಇದೆ. ಇತ್ತೀಚೆಗಿನ ವಿದ್ಯಮಾನಗಳನ್ನು ಗಮನಿಸಿದರೆ ಮತ್ತು ಯಡಿಯೂರಪ್ಪ ಅವರ ಕಾರ್ಯ ವೈಖರಿಗಳನ್ನು ಗಮನಿಸಿದರೆ ದಶಕದ ಹಿಂದೆಯಿದ್ದ ಅವರ ಉತ್ಸಾಹ, ಹುರುಪು, ಈಗ ಇಲ್ಲದಂತಾಗಿದೆ.
ಇನ್ನೊಂದಡೆ ಸ್ವತಂತ್ರ ಲಿಂಗಾಯಿತ ಧರ್ಮದ ಕುರಿತು ಹುಟ್ಟಿಕೊಂಡ ವಿವಾದಗಳು ಕೂಡ ಅವರನ್ನು ಇಕ್ಕಟ್ಟಿಗೆ ಸಿಲುಕಿದೆ. ಪರವಿರೋಧಗಳ ನಡುವೆ ಯಾವುದರ ಬಗ್ಗೆಯೂ ಮಾತನಾಡದೆ ತಟಸ್ಥನೀತಿ ಅನುಸರಿಸಿರುವ ಅವರು ಅನ್ಯ ಮಾರ್ಗ ಕಾಣದೆ ದಲಿತರ ಮನವೊಲಿಸುವ ತಂತ್ರ ರೂಪಿಸಿದ್ದಾರೆ. ಕಳೆದ ಕೆಲವು ಸಮಯಗಳಿಂದ ದಲಿತರ ಪರವಾದ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಮೂಲಕ ತಾನು ಜಾತ್ಯತೀತ ನಾಯಕ ಎಂಬುದನ್ನು ರೂಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಹಠಕ್ಕೆ ಬಿದ್ದಿದ್ದಾರೆ ಅಮಿತ್ ಶಾ
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಅನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಸೋಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂಬ ಹಠಕ್ಕೆ ಬಿದ್ದಿರುವ ಅಮಿತ್ ಶಾ ಅವರು ಹಲವು ತಂತ್ರಗಳನ್ನು ರೂಪಿಸುತ್ತಲೇ ಇದ್ದಾರೆ.
ಸ್ವಾಮೀಜಿ ಮುಂದಾಳತ್ವದಲ್ಲಿ ಪ್ರಚಾರ?
ಯಡಿಯೂರಪ್ಪ ಅವರ ಸಾರಥ್ಯದಲ್ಲೇ ಚುನಾವಣೆ ನಡೆಯುತ್ತಿದೆಯಾದರೂ ಅವರನ್ನೇ ಪೂರ್ಣವಾಗಿ ನಂಬುವಂತೆಯೂ ಇಲ್ಲ. ಹೀಗಾಗಿಯೇ ಅವರು ಮಾದಾರ ಚೆನ್ನಯ್ಯ ಸ್ವಾಮೀಜಿಯನ್ನು ಬಿಜೆಪಿಗೆ ತರುವ ಪ್ರಯತ್ನ ಮಾಡಿದ್ದಾರೆ. ಹಿಂದುಳಿದ ವರ್ಗದ ಮಠಾಧೀಶರಾಗಿರುವುದರಿಂದ ಅವರನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಕರ್ನಾಟಕದಲ್ಲೂ ಉತ್ತರ ಪ್ರದೇಶದ ತಂತ್ರ?
ಉತ್ತರ ಪ್ರದೇಶದಲ್ಲಿ ಮಾಡಿದ ತಂತ್ರವನ್ನು ರಾಜ್ಯದಲ್ಲಿ ಮಾಡಲು ಯೋಚಿಸಿರುವ ಅಮಿತ್ ಶಾ ಅವರ ಕಣ್ಣಿಗೆ ಬಿದ್ದವರೇ ಮಾದಾರ ಚೆನ್ನಯ್ಯ ಸ್ವಾಮೀಜಿ. ಅವರನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರ ರೀತಿಯಲ್ಲೇ ಬಿಂಬಿಸುವ ಕೆಲಸಗಳು ನಡೆಯುತ್ತಿವೆ.
ಶಾ ಬತ್ತಳಿಕೆಯ ಶಕ್ತಿಶಾಲಿ ಬಾಣಗಳು!
ಸಂಪೂರ್ಣವಾಗಿ ತಮ್ಮನ್ನು ಚುನಾವಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಮಿತ್ ಶಾ ಚುನಾವಣಾ ಜವಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದು, ತಮ್ಮ ಬತ್ತಳಿಕೆಯಲ್ಲಿ ಹಲವು ಚುನಾವಣಾ ತಂತ್ರದ ಅಸ್ತ್ರಗಳನ್ನಿಟ್ಟುಕೊಂಡಿದ್ದು, ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಒಂದೊಂದನ್ನೇ ಬಿಡಲಿದ್ದಾರೆ. ಅದರ ಮೊದಲ ಅಸ್ತ್ರವೇ ಮಾದಾರ ಚೆನ್ನಯ್ಯ ಸ್ವಾಮೀಜಿ ಬಿಜೆಪಿ ಸೇರ್ಪಡೆಯಾಗಿದೆ. ಮುಂದೆ ಏನೆಲ್ಲ ಆಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.