ಉತ್ತಮ ಚಿತ್ರಗಳಿಗೆ ನೀಡುವ ಹಣ ಏರಿಕೆಯಾಗಲಿ: ವಜುಭಾಯಿವಾಲ
9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ವಿಜೇತ ಸಿನಿಮಾಗಳಿಗೆ ರಾಜ್ಯಪಾಲ ವಜುಭಾಯಿ ರುಢಾಭಾಯಿವಾಲಾ ಪ್ರಶಸ್ತಿಗಳನ್ನು ವಿತರಿಸಿದರು.
ಮೈಸೂರು, ಫೆಬ್ರವರಿ 10: ಪ್ರತಿಯೊಬ್ಬ ನಿರ್ದೇಶಕನಿಗೂ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಳ್ಳಬೇಕು ಎಂಬ ಕನಸಿರುತ್ತದೆ ಅದಕ್ಕೆ ಸಹಕರಿಸುವ ನಿಟ್ಟಿನಲ್ಲಿ ಸರಕಾರ ಪ್ರಸ್ತುತ ಉತ್ತಮ ಪ್ರಶಸ್ತಿಗಳಿಗೆ ನೀಡುತ್ತಿರುವ ರು.10 ಲಕ್ಷ ಬದಲಾಗಿ 50 ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ರಾಜ್ಯಪಾಲ ವಜುಭಾಯಿ ರುಢಾಭಾಯಿವಾಲಾ ಸಲಹೆ ನೀಡಿದರು.
ಮೈಸೂರಿನ ಅರಮನೆ ಮುಂಭಾಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ವಿಜೇತ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ನಾವು ಕೇವಲ ಎರಡೂವರೆ ತಾಸುಗಳಲ್ಲಿ ನೋಡಿ ಸಂತಸ ಪಡುವ ಚಿತ್ರ ನಿರ್ಮಾಣದ ಹಿಂದೆ ಸಾಕಷ್ಟು ಶ್ರಮ ಅಡಗಿರುತ್ತದೆ ಎಂದರು. ಸಿನಿಮಾ ಕೇವಲ ಮನರಂಜನೆಗೆ ಮಾತ್ರವಲ್ಲ. ಅದರಲ್ಲಿ ಸಂಸ್ಕಾರವನ್ನು ಬೆಳೆಸುವ ಅಂಶಗಳಿರುತ್ತವೆ ಎಂದು ತಿಳಿಸಿದರು.[ಇಂದು (ಫೆ.9) ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಅದ್ಧೂರಿ ಸಮಾರೋಪ]
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೈಸೂರು ಮಹಾಪೌರ ಎಂ.ಜೆ.ರವಿಕುಮಾರ್, ಶಾಸಕ ಎಂ.ಕೆ.ಸೋಮಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರಕಾರದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ಕೃಪೆ - ನಂದನ್ .ಎ
ಸಿನಿಮೋತ್ಸವದ ಅತ್ಯುತ್ತಮ ಚಿತ್ರ
ಮೈಸೂರಿನಲ್ಲಿ 9ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭ ಅರಮನೆ ಮುಂಭಾಗ ನಡೆಯಿತು. ಸಿನಿಮೋತ್ಸವದ ಅತ್ಯುತ್ತಮ ಚಿತ್ರವಾಗಿ "ದಿ.ಫಾದರ್ ವೇಲ್" ಚಿತ್ರ ಪ್ರಶಸ್ತಿಯನ್ನು ಪಡೆದಿದೆ. ದಿ ಫಾದರ್ ವೇಲ್ ಕಿರ್ಗಿಸ್ತಾನ್ ದೇಶದ ಚಿತ್ರವಾಗಿದ್ದು, ಏಷ್ಯಿಯನ್ ಸಿನಿಮಾ ವಿಭಾಗದ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆದಿದೆ.
ಭಾರತೀಯ ಅತ್ಯುತ್ತಮ ಚಿತ್ರ
ಅತ್ಯುತ್ತಮ ಭಾರತೀಯ ಚಿತ್ರವಾಗಿ ಅನನ್ಯ ಕಾಸರವಳ್ಳಿ ನಿರ್ದೇಶನದ ಕನ್ನಡದ "ಹರಿಕಥಾ ಪ್ರಸಂಗ" ಚಿತ್ರ ಪ್ರಶಸ್ತಿಯನ್ನು ಪಡೆದಿದೆ. ಅಲ್ಲದೆ ಚಿತ್ರ ಪ್ರದರ್ಶನದಲ್ಲಿಯೂ ಅನೇಕ ಹಿರಿಯ ಪ್ರಶಂಸೆಗೆ ಪಾತ್ರವಾಗಿತ್ತು.
ವಿಶೇಷ ಜ್ಯೂರಿ ಪ್ರಶಸ್ತಿ
"ಲಾತೇ ಜೋಶಿ" ಹಾಗೂ "ಕಾದು ಪುಕ್ಕುನ ನೀರಮ್" ಚಿತ್ರಗಳು ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಪಡೆದಿವೆ. ಪಿ.ಕೆ.ನಾಯರ್ ನೆನಪಿನ ಪ್ರಶಸ್ತಿಯನ್ನು "ಲೇಡಿ ಆಫ್ ದಿ ಲೇಕ್" ಚಿತ್ರ ಪಡೆದಿದೆ.
ಕನ್ನಡ ಚಿತ್ರಕ್ಕೂ ಮಾನ್ಯತೆ
ಕನ್ನಡ ವಿಭಾಗದ ಸ್ಪರ್ಧೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡದ ಅತ್ಯುತ್ತಮ ಚಿತ್ರವಾಗಿ "ರಾಮ ರಾಮಾ ರೇ", ಎರಡನೇ ಅತ್ಯುತ್ತಮ ಚಿತ್ರವಾಗಿ "ಪಲ್ಲಟ",ಮೂರನೆ ಅತ್ಯುತ್ತಮ ಚಿತ್ರವಾಗಿ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ವಿಶೇಷ ಜ್ಯೂರಿ ಚಿತ್ರವಾಗಿ "ಉಪ್ಪಿನ ಕಾಗದ" ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.
ಜನಪ್ರಿಯ ಚಿತ್ರಗಳಿಗೂ ಮನ್ನಣೆ
ಪ್ರಥಮ ಜನಪ್ರಿಯ ಚಿತ್ರವಾಗಿ ಕಿಚ್ಚ ಸುದೀಪ್ ಅಭಿನಯದ "ಕೋಟಿಗೊಬ್ಬ-2",ದ್ವೀತಿಯ ಜನಪ್ರಿಯ ಚಿತ್ರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ "ಜಗ್ಗುದಾದ", ತೃತೀಯ ಜನಪ್ರಿಯ ಚಿತ್ರವಾಗಿ ಪವರ್ ಸ್ಟಾರ್ ಪುನಿತ್ರಾಜ್ಕುಮಾರ್ ಅಭಿನಯದ "ದೊಡ್ಮನೆ ಹುಡ್ಗ" ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.
ಮನೋರಂಜನಾ ಕಾರ್ಯಕ್ರಮ
ಮೈಸೂರಿನ ಅರಮನೆ ಮೈದಾನದಲ್ಲಿ ಗುರುವಾರ ಸಂಜೆ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪದ ಕಾರ್ಯಕ್ರಮದಲ್ಲಿ ಅನೇಕ ಚಿತ್ರ ಕಲಾವಿದರು ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದರು. ಅಲ್ಲದೆ ವಿವಿಧ ಹಾಡುಗಳಿಗೆ ನೃತ್ಯ ಮಾಡಿ ಜನರ ಪ್ರೇಕ್ಷಕರ ಮನ ತಣಿಸಿದರು.