ಮೈಸೂರಿನ ಇಂದಿರಾ ಕ್ಯಾಂಟೀನ್ ಗಳಿಗೇಕೆ ಬಂತು ಇಂಥ ದುಸ್ಥಿತಿ?
Recommended Video
ಮೈಸೂರು, ಜುಲೈ. 11: ಮಾಜಿ ಸಿಎಂ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಅಧೋಗತಿಗೆ ಸಾಗುತ್ತಿದೆ. ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಳೆದ ಜನವರಿ - ಫೆಬ್ರವರಿಯಿಂದ ಈಚೆಗೆ ಏಕಾಏಕಿ 11 ಕ್ಯಾಂಟೀನ್ ಗಳನ್ನು ಆರಂಭಿಸಲಾಗಿತ್ತು. ಆದರೆ ಅದೇ ಈಗ ತಲೆ ನೋವು ತಂದಿಟ್ಟಿದೆ.
ಹೌದು, ನಗರದ ಇಂದಿರಾ ಕ್ಯಾಂಟೀನ್ಗಳಲ್ಲಿ ಶುಚಿ, ರುಚಿ, ಬಿಸಿ ಇಲ್ಲದ ಉಪಾಹಾರ, ಊಟ ಸಿಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ದೇವೇಗೌಡರ ಅಭಿಮಾನಿಯಿಂದ ಮಂಡ್ಯದಲ್ಲಿ ಅಪ್ಪಾಜಿ ಕ್ಯಾಂಟೀನ್
ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ಬಡವರಿಗೆ ರಿಯಾಯಿತಿ ದರದಲ್ಲಿ ಊಟ, ಉಪಾಹಾರ ಸಿಗಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟೀನ್ಗಳಿಗೆ ಚಾಲನೆ ನೀಡಿದ್ದರು. ಆದರೆ ಇತ್ತೀಚೆಗೆ ಕ್ಯಾಂಟೀನ್ ಗಳಲ್ಲಿ ಗಟ್ಟಿಯಾದ ಇಡ್ಲಿ, ಸರಿಯಾಗಿ ಬೇಯಿಸದ ಅನ್ನ ಕೊಡಲಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಸ್ವಚ್ಛತೆಯಿಲ್ಲದ ಕ್ಯಾಂಟೀನ್ ಗಳು
ಕ್ಯಾಂಟೀನ್ ನಲ್ಲಿ ಸ್ವಚ್ಛತೆ ಕೂಡ ಕಾಪಾಡುತ್ತಿಲ್ಲ. ಪಾತ್ರೆ ತೊಳೆಯುವ ಜಾಗ ಪಾಚಿಗಟ್ಟಿದೆ. ಶೌಚಾಲಯ ಸೋರುತ್ತಿದೆ, ನೊಣಗಳು ಅಲ್ಲಲ್ಲಿ ಹಾರಾಡುತ್ತಲೇ ಇರುತ್ತವೆ. ಅನೇಕ ಬಡಮಕ್ಕಳು ಶಾಲೆಗೆ ಹೋಗುವ ಮುನ್ನ ಇಲ್ಲಿಯೇ ತಿಂಡಿ ತಿಂದು ಹೋಗುತ್ತಾರೆ.
ಆದರೆ ಅವರಿಗೆ ಶುಚಿ, ರುಚಿಯಾದ ಆಹಾರ ಬಡಿಸಲಾಗುತ್ತಿಲ್ಲ ಎನ್ನುವ ಕೊರಗು ನಮಗಿದೆ ಎಂದು ಸಿಬ್ಬಂದಿಗಳೇ ಬೇಸರ ವ್ಯಕ್ತಪಡಿಸುತ್ತಾರೆ.
ಚಿಕ್ಕಮಗಳೂರು : ಇಂದಿರಾ ಕ್ಯಾಂಟೀನ್ಗೆ ಕೊನೆಗೂ ಉದ್ಘಾಟನೆ ಭಾಗ್ಯ!
ಇಲ್ಲಿಯೂ ಅದೇ ಗೋಳು
ಇನ್ನು ಸಿಲ್ಕ್ ಫ್ಯಾಕ್ಟರಿ ಎದುರಿನ ಇಂದಿರಾ ಕ್ಯಾಂಟೀನ್ ಶೌಚಾಲಯದಲ್ಲಿ ನೀರು ಸೋರಲು ಶುರುವಾಗಿ ತಿಂಗಳು ಮೇಲಾಗಿದೆ. ಆದರೂ ಸರಿಪಡಿಸಿಲ್ಲ. ಪ್ರತಿ ದಿನವೂ ಸಾವಿರಾರು ಲೀಟರ್ ನೀರು ಪೋಲಾಗಿ ಚರಂಡಿ ಸೇರುತ್ತಿದೆ. ಅಷ್ಟೇ ಅಲ್ಲ, ಈ ಕ್ಯಾಂಟೀನಿನಲ್ಲಿ ಪಾತ್ರೆ ತೊಳೆಯುವ ಜಾಗದಲ್ಲಿ ಶೌಚಾಲಯದ ಉಪಕರಣಗಳು ಕಳುವಾಗುತ್ತಿವೆ ಎನ್ನುತ್ತಾರೆ ಸಿಬ್ಬಂದಿಗಳು.
ಎಲ್ಲಾ ಕ್ಯಾಂಟೀನುಗಳಲ್ಲಿ ಶೌಚಾಲಯಗಳಲ್ಲಿನ ನಿರ್ವಹಣೆಯದ್ದೇ ಮುಖ್ಯ ಸಮಸ್ಯೆ. ಇತ್ತ ಬದಿಯಲ್ಲಿರುವ ಸೂಯೇಜ್ ಫಾರಂ ಬಳಿಯ ಕ್ಯಾಂಟೀನ್ನ ಪಾತ್ರೆ ತೊಳೆವ ಜಾಗ ಪಾಚಿಗಟ್ಟಿದೆ. ಯಾಕೆ ಸ್ವಚ್ಛವಾಗಿಟ್ಟುಕೊಂಡಿಲ್ಲ ಎಂದು ಕೆದಕಿ ಕೇಳಿದರೆ ಸಂಬಳ ನೀಡಿಲ್ಲ ಎನ್ನುತ್ತಾರೆ.
5ರೂಪಾಯಿಗೆ ಮೂರು ಇಡ್ಲಿ, ಇಲ್ಲವೇ ಉಪ್ಪಿಟ್ಟು ಸಿಗುತ್ತದೆ. 10ರೂಪಾಯಿ ಕೊಟ್ಟರೆ ಇಡ್ಲಿ, ಉಪ್ಪಿಟ್ಟು ಒಟ್ಟಿಗೆ ದೊರಕುತ್ತದೆ. ಆದರೆ, ಅನೇಕ ಕಡೆ ದುಡ್ಡು ಪಡೆದು ಟೋಕನ್ ಕೊಡುವುದಿಲ್ಲ.
ಸಿದ್ದರಾಮಯ್ಯ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಬಗ್ಗೆ ಎಚ್ಡಿಕೆ ನಿರ್ಲಕ್ಷ್ಯ?
ಜನ ಏನ್ ಹೇಳ್ತಾರೆ ?
"ಕಾಡಾ ಕಚೇರಿ ಆವರಣದಲ್ಲಿನ ಕ್ಯಾಂಟೀನ್ ನಲ್ಲಿ ದುಡ್ಡು ಕೊಟ್ಟರೆ ಟೋಕನ್ ಕೊಡುತ್ತಿರಲಿಲ್ಲ. ಅಂಥವರನ್ನು ಕೆಲಸದಿಂದ ತೆಗೆದುಹಾಕಿ ಬೇರೆಯವರನ್ನು ನೇಮಿಸಿಕೊಳ್ಳಲಾಗಿದೆ. ಇಂಥದು ಅನೇಕ ಕಡೆ ನಡೆಯುತ್ತಿದೆ" ಎಂದು ಖಾಸಗಿ ಕಂಪನಿ ಉದ್ಯೋಗಿ ಆರ್.ಎಸ್.ಗೌಡ ಹೇಳಿದರು.
"ಸಣ್ಣ ಹೋಟೆಲುಗಳಲ್ಲಿ 10ರಿಂದ 20 ರೂಪಾಯಿಗೆ ಸಾಕಷ್ಟು ಊಟ ಸಿಗುತ್ತದೆ. ಆದರೆ, ಇಂದಿರಾ ಕ್ಯಾಂಟೀನ್ನಲ್ಲಿ ಲಿಮಿಟೆಡ್. ಅದು ಕೂಡ ಕ್ವಾಲಿಟಿ, ಕ್ವಾಂಟಿಂಟಿ ಇಲ್ಲ. ನಮ್ಮ ತೆರಿಗೆ ದುಡ್ಡಲ್ಲಿ ಈ ಕ್ಯಾಂಟೀನ್ ನಡೆಸುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗಾರೆ ಕೆಲಸದ ಲಿಂಗರಾಜು.
ಜಾಗ ವಿವಾದ
ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ಈ ಯೋಜನೆ ಆರಂಭಿಸಿತ್ತು. ಜಿಲ್ಲೆಯಲ್ಲಿ ಒಟ್ಟು 17 ಇಂದಿರಾ ಕ್ಯಾಂಟಿನ್ ಗಳು ಆರಂಭವಾಗಬೇಕಿತ್ತು.
ಅದರಂತೆ ಮೊದಲ ಹಂತದಲ್ಲಿ ಮೈಸೂರು ನಗರ ವ್ಯಾಪ್ತಿಯಲ್ಲಿ 11 ಹಾಗೂ ಎರಡನೇ ಹಂತದಲ್ಲಿ ಜಿಲ್ಲೆಯ 6 ತಾಲೂಕು ಕೇಂದ್ರಗಳಲ್ಲಿ ತಲಾ ಒಂದು ಕ್ಯಾಂಟಿನ್ ಕಟ್ಟಡ ಕಾಮಗಾರಿ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗಿತ್ತು.
ಯೋಜನೆಯಂತೆ ತಲಾ 40 ಲಕ್ಷ ರೂ. ವೆಚ್ಚದಲ್ಲಿ ತಾಲೂಕು ಕೇಂದ್ರಗಳಾದ ಕೆ.ಆರ್.ನಗರ, ನಂಜನಗೂಡು, ತಿ.ನರಸೀಪುರ ಕೇಂದ್ರಗಳಲ್ಲಿ ಕಟ್ಟಡ ಕಾಮಗಾರಿ ಜನವರಿಯಲ್ಲೇ ಆರಂಭವಾಗಿತ್ತು. ಮಾರ್ಚ್ ತಿಂಗಳಲ್ಲಿ ತಾಲೂಕು ಕೇಂದ್ರಗಳ ಜನತೆಗೆ ಕ್ಯಾಂಟಿನ್ ಲಭ್ಯವಾಗಬೇಕಿತ್ತು. ಆದರೆ ಜೂನ್ ಮುಗಿಯುತ್ತಾ ಬಂದರೂ ಕ್ಯಾಂಟೀನ್ ಗಳೇ ಆರಂಭವಾಗಿಲ್ಲ.
ಎರಡನೇ ಹಂತದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಕ್ಯಾಂಟಿನ್ ಕಟ್ಟಡ ಕಾಮಗಾರಿ ಆರಂಭಿಸಿದ್ದರೂ ಇದುವರೆಗೂ ಪೂರ್ಣಗೊಳಿಸಿಲ್ಲ. ಇದೇ ವೇಳೆ ಚುನಾವಣೆ ಬಂದ ಹಿನ್ನೆಲೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು.
ಜಿಲ್ಲೆಯ ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಕೇಂದ್ರಗಳಲ್ಲಿ ಜಾಗ ಕುರಿತು ವಿವಾದ ಉಂಟಾಗಿದ್ದು, ಈ ಕೇಂದ್ರಗಳಲ್ಲಿ ಇನ್ನೂ ಕಟ್ಟಡ ಕಾಮಗಾರಿ ಆರಂಭವೇ ಆಗಿಲ್ಲ.
ಒಟ್ಟಾರೆ ಇಷ್ಟೆಲ್ಲಾ ಸಮಸ್ಯೆಗಳು ಎದುರಾದರೂ, ಬಡವರ ಪಾಲಿನ ಆಹಾರ ದೀವಿಗೆಯಾಗಬೇಕಿದ್ದ ಈ ಇಂದಿರಾ ಕ್ಯಾಂಟೀನ್ ಗಳು ಮೈಸೂರಿನಲ್ಲಿ ಮುಚ್ಚುವ ಹಂತ ತಲುಪಿರುವುದು ಖೇದಕರ ವಿಷಯ.