ಮೈಸೂರಿನಲ್ಲಿ ಸಿಕ್ಕಾಪಟ್ಟೆ ಬಿಸಿಲು, ತಂಪು ಪೇಯಕ್ಕೆ ಹೆಚ್ಚಿದ ಬೇಡಿಕೆ
ಮೈಸೂರು, ಸೆಪ್ಟೆಂಬರ್. 17 : ಕೊಡಗು ಪ್ರವಾಹದ ಬಳಿಕ ಪಕ್ಕದ ಮೈಸೂರಿನಲ್ಲಿ ಬಿಸಿಲಿನ ಝಳ ಜನರನ್ನು ಹೈರಾಣಾಗಿಸಿದೆ. ಮೇ ತಿಂಗಳಿನಿಂದಲೂ ಹಿತಕರ ವಾತಾವರಣದಲ್ಲಿ ಕಾಲ ಕಳೆದಿದ್ದ ಸಾಂಸ್ಕೃತಿಕ ನಗರಿಯ ಜನರಿಗೆ ಇದೀಗ ಬಿಸಿಲಿನ ಅನುಭವ ತಟ್ಟತೊಡಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ತಾಪಮಾನ ಒಂದೇ ಸಮನೆ ಏರಿಕೆಯಾಗಿದೆ.
ಜಿಲ್ಲೆಯಾದ್ಯಂತ ವಾತಾವರಣದ ಉಷ್ಣತೆ ದಿನೇ ದಿನೇ ಏರುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿಯೇ ಕಡುಬೇಸಿಗೆಯ ಅನುಭವವಾಗುತ್ತಿದೆ. ನಗರದಲ್ಲಿ ಕಳೆದ ವಾರ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ತಾಪಮಾನ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳವಾಗಿದೆ.
ಬಿಸಿಲ ಝಳ ಎದುರಿಸಲು ಜಪಾನಿಗರು ಐಡ್ಯಾ ಮಾಡ್ಯಾರ!
ಈ ತಿಂಗಳ ಆರಂಭದಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ಹತ್ತು ದಿನಗಳ ಅವಧಿಯಲ್ಲಿ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದು, ಸೆಖೆಯ ಅನುಭವ ಉಂಟಾಗತೊಡಗಿದೆ. ಬೆಳಗ್ಗೆ 11 ಗಂಟೆಯ ವೇಳೆಗಾಗಲೇ ಬಿಸಿಲಿನ ಝಳ ಅನುಭವಕ್ಕೆ ಬರುತ್ತಿದೆ.
ಗರಿಷ್ಠ ತಾಪಮಾನದಲ್ಲಿ ದಿಢೀರ್ ಏರಿಕೆಯಾಗಿದೆಯಾದರೂ, ಕನಿಷ್ಠ ತಾಪಮಾನದಲ್ಲಿ ಭಾರಿ ವ್ಯತ್ಯಾಸ ಉಂಟಾಗಿಲ್ಲ. ನಾಲ್ಕು ತಿಂಗಳ ಬಿಡುವಿನ ಬಳಿಕ ನಗರದಲ್ಲಿ ತಾಪಮಾನ ಈ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಬಾರಿ ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಬಿದ್ದಿದ್ದರಿಂದ ಮೇ ತಿಂಗಳಲ್ಲಿ ಬಿಸಿಲಿನ ತಾಪ ಅನುಭವಕ್ಕೆ ಬಂದಿರಲಿಲ್ಲ.
ಎರಡು ಮೂರು ದಿನಗಳಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಜೆ ಹೊತ್ತು ಮಳೆಯಾಗುತ್ತಿದ್ದರೂ, ಹಗಲಿನಲ್ಲಿ ಬಿಸಿಲು ತಲೆಯನ್ನು ಸುಡುತ್ತಿದೆ. ಒಂದು ವಾರದಿಂದೀಚೆಗೆ ಬಿಸಿಲಿನ ಝಳ ವಾಡಿಕೆಗಿಂತ ಹೆಚ್ಚಾಗಿದೆ. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಈ ಪ್ರಮಾಣದ ತಾಪಮಾನ ದಾಖಲಾಗುತ್ತದೆ.
ರಾಜ್ಯದಲ್ಲಿ ಬಿಸಿಲೇರುತ್ತಿದೆ, ಮಳೆ ಸಾಧ್ಯತೆಯೂ ಇದೆ!
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಇನ್ನೂ ಒಂದೆರಡು ದಿನಗಳಲ್ಲಿ ಗರಿಷ್ಠ ಉಷ್ಣತೆ 33 ಡಿಗ್ರಿ ಸೆಲ್ಸಿಯಸ್ಗೆ ತಲುಪಲಿದೆ. ಬೆಳಗ್ಗಿನ ಹೊತ್ತು ಮನೆಯಿಂದ ಹೊರಬರಲು ಜನ ಹಿಂದೆ ಮುಂದೆ ನೋಡುತ್ತಿದ್ದಾರೆ. ಅಗತ್ಯವಿದ್ದರೆ ಮಾತ್ರ ಪಟ್ಟಣಕ್ಕೆ ಬರುತ್ತಿದ್ದಾರೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಜನರು, ಛತ್ರಿ, ಕರವಸ್ತ್ರಗಳಿಗೆ ಮೊರೆ ಹೋಗುತ್ತಿದ್ದಾರೆ.
ಮಹಿಳೆಯರು ಸೀರೆಯ ಸೆರಗು, ಚೂಡಿದಾರ್ ಶಾಲುಗಳನ್ನು ತಲೆಗೆ ಸುತ್ತಿಕೊಂಡು ಓಡಾಡುತ್ತಿರುವ ದೃಶ್ಯ ಈಗ ಪಟ್ಟಣದಲ್ಲಿ ಸಾಮಾನ್ಯ.
ಎಳನೀರು, ತಂಪು ಪಾನೀಯಗಳಿಗೆ ಬೇಡಿಕೆ:
ಬಿಸಿಲಿಗೆ ಬಸವಳಿದ ಜನರು ಬಾಟಲಿ ನೀರು, ಎಳನೀರು, ಕಬ್ಬಿನ ರಸ ಮತ್ತು ಜ್ಯೂಸ್ ನಂತಹ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಐಸ್ ಕ್ರೀಂ ಪಾರ್ಲರ್, ಜ್ಯೂಸ್ ಅಂಗಡಿಗಳಲ್ಲಿ ಜನ ದಟ್ಟಣೆ ಕಂಡು ಬರುತ್ತಿದೆ. ರಸ್ತೆ ಬದಿಯಲ್ಲಿ ಎಳನೀರು, ಕಬ್ಬಿನ ಹಾಲು ಮಾರಾಟ ಮಾಡುವ ಸ್ಥಳಗಳಲ್ಲೂ ಜನರು ನೆರೆಯುತ್ತಿದ್ದಾರೆ.
ಗೌರಿ-ಗಣೇಶ ಹಬ್ಬ ಮುಗಿದ ನಂತರ ಚಳಿ ಆರಂಭವಾಗುತ್ತದೆ. ಈಗ ಏಪ್ರಿಲ್-ಮೇ ತಿಂಗಳಿನ ರೀತಿಯ ಬಿಸಿಲು ಇದೆ. ಚಳಿಗಾಲ ಮುಂದೆ ಹೋದಂತೆ ಕಾಣುತ್ತಿದೆ.