ಮೇ ತಿಂಗಳಲ್ಲಿ ಅಂಬೇಡ್ಕರ್ ಬೃಹತ್ ಜಯಂತ್ಯುತ್ಸವ: ಎಚ್.ಸಿ. ಮಹದೇವಪ್ಪ
ಮೈಸೂರು, ಫೆಬ್ರವರಿ 13 : ಅಂಬೇಡ್ಕರ್ ದೇಶಕಂಡ ಅತ್ಯಂತ ಬುದ್ದಿಜೀವಿ ಹಾಗೂ ಸಮಾಜ ಸುಧಾರಣೆಗೆ ಹೋರಾಡಿದ ಮಹಾನ್ ಹೋರಾಟಗಾರರಾಗಿದ್ದು, ಮೇ ತಿಂಗಳಲ್ಲಿ ದೊಡ್ಡಮಟ್ಟದ ಅಂಬೇಡ್ಕರ್ ಜಯಂತ್ಯುತ್ಸವವನ್ನು ಆಯೋಜಿಸಲು ಚಿಂತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಮೈಸೂರಿನ ಮಾನಗಂಗೋತ್ರಿಯಲ್ಲಿ ಆಯೋಜಿಸಲಾಗಿದ್ದ ಸಮಾಜ ಕಲ್ಯಾಣ ಇಲಾಖೆ ಸಮ್ಮೇಳನ ಆಯೋಜನಾ ಸಮಿತಿ ಮತ್ತು ಮೈಸೂರು ವಿವಿಯ ಸಂಯುಕ್ತಾಶ್ರಯದ ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಅಂತಾರಾಷ್ಟ್ರೀಯ ಸಮ್ಮೇಳನದ ವಿಭಾಗೀಯ ಮಟ್ಟದ ಎರಡು ದಿನಗಳ ಕಾರ್ಯಾಗಾರವನ್ನು ಸಚಿವ ಮಹದೇವಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮೇ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಅಂಬೇಡ್ಕರ್ ಜಯಂತ್ಯುತ್ಸವಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರಗತಿಪರ ಚಿಂತಕರು, ವಿದ್ವಾಂಸರು, ತಜ್ಞರು, ಹೋರಾಟಗಾರರು ಸಂಪನ್ಮೂಲ ವ್ಯಕ್ತಿಗಳಾಗಲಿದ್ದಾರೆ ಎಂದರು.[ಅಂಬೇಡ್ಕರ್ ಅವರ ಹೆಸರಿನಲ್ಲಿ ವಿಶ್ವದರ್ಜೆಯ ಬಿಸಿನೆಸ್ ಸ್ಕೂಲ್ : ರಾಯರೆಡ್ಡಿ]
ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಸಂಸ್ಥೆ ವಿಶ್ವ ಜ್ಞಾನದಿನವನ್ನಾಗಿ ಅಚರಿಸುತ್ತಿದೆ. ವಿಶ್ವದೆಲ್ಲೆಡೆ ಅಂಬೇಡ್ಕರ್ ಜನ್ಮದಿನವನ್ನು ಆಚರಿಸುತ್ತಾರೆ. ಅವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ, ಯುವಕರು ಅವುಗಳನ್ನು ಪಾಲಿಸಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಯಶವಂತ್ ಡೋಂಗ್ರೆ, ಕುಲಸಚಿವ ಪ್ರೊ.ಆರ್.ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಿ.ಎಸ್.ಪ್ರಭಾ ಸೇರಿದಂತೆ ಹಲವರು ಭಾಗವಹಿಸಿದ್ದರು.