ನಾಡಹಬ್ಬ ದಸರಾದಲ್ಲಿ ಪರಿಸರ ಸ್ನೇಹಿ ದೀಪಾಲಂಕಾರಕ್ಕೆ ವ್ಯವಸ್ಥೆ
ಮೈಸೂರು, ಜುಲೈ 23 : ಕಾಮನ್ವೆಲ್ತ್ ಸೇರಿದಂತೆ ಮತ್ತಿತರ ಕ್ರೀಡಾಕೂಟಗಳ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವನ್ನು ವರ್ಣರಂಜಿತಗೊಳಿಸಲು ಫೈರೋ ಟೆಕ್ನಿಷಿಯನ್ ಗಳು ಹೊಗೆ ರಹಿತ ಹಾಗೂ ಪರಿಸರ ಸ್ನೇಹಿ ವಿದ್ಯುನ್ಮಾನ ಹೂಕುಂಡ-ಪಟಾಕಿಗಳನ್ನು ಬಳಸುತ್ತಾರೆ. ಅವನ್ನು ಈ ಬಾರಿ ದಸಾರದ ಪಂಜಿನ ಕವಾಯತುವಿನಲ್ಲಿ ಬಳಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಭಿಪ್ರಾಯಪಟ್ಟರು.
ದಸರಾ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯುನ್ಮಾನ ಬಾಣಬಿರುಸುಗಳ ತಜ್ಞರಿಂದ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ದಸರಾ ಮೆರವಣಿಗೆ ವಿಶ್ವವಿಖ್ಯಾತ ಜಂಬೂಸವಾರಿಯನ್ನು ಈ ಬಾರಿ ಇನ್ನೂ ಹೆಚ್ಚು ಆಕರ್ಷಕವಾಗಿ ನಡೆಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಮೈಸೂರು: ಈ ಬಾರಿ ದಸರಾ ಪ್ರಮುಖ ಆಕರ್ಷಣೆ ಟೆಂಟ್ ಟೂರಿಸಂ
ಹೀಗಾಗಿ ಹೊಸ, ಭಿನ್ನ ಆಲೋಚನೆಗಳೊಂದಿಗೆ ದಸರಾ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ಬಾರಿಯ ನಾಡಹಬ್ಬ ಆಚರಣೆಗೆ ಬೇಕಿರುವ ಯೋಜನೆಗಳನ್ನು ಸಾಧ್ಯವಾದಷ್ಟೂ ಮಿತವ್ಯಯದಲ್ಲಿ ಸಿದ್ಧಪಡಿಸಿಕೊಳ್ಳಿ ಎಂದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯ ದಸರಾ-2018ರ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ದಸರಾ ಉಪಸಮಿತಿಗಳನ್ನು ರಚಿಸಲಾಗುವುದು ಎಂದರು.
ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಬಳಿಕದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶಿಷ್ಟ ಹಾಗೂ ವಿಭಿನ್ನವಾಗಿರಲಿ. ನೃತ್ಯದೊಂದಿಗೆ ಜೂಡೋ, ಮಾರ್ಷಲ್ ಆರ್ಟ್ಸ್ ಪದರ್ಶನವನ್ನೂ ವ್ಯವಸ್ಥೆ ಮಾಡಬಹುದು ಎಂದರು.
ದೇಶ-ವಿದೇಶದ ಹೆಚ್ಚಿನ ಪವಾಸಿಗರು ಆಗಮಿಸಿ ಭಾಗವಹಿಸಲು ಅವಕಾಶವಾಗುವಂತಹ ಕಾರ್ಯಕ್ರಮಗಳನ್ನೂ ರೂಪಿಸಬೇಕಿದೆ. ದಸರಾದ 15 ದಿನ ಮೊದಲು ಆಹ್ವಾನ ಪತ್ರಿಕೆಗಳು ಸಿದ್ಧಗೊಂಡು ವಿತರಣೆಯಾಗಬೇಕು. ಅದಕ್ಕಾಗಿ ರೂಪುರೇಷೆ ಸಿದ್ಧಪಡಿಸಿಕೊಳ್ಳಿ ಎಂದು ಸೂಚಿಸಿದರು.
ದಸರಾ ದೀಪಾಲಂಕಾರ ವೇಳೆ ಮರಗಳಿಗೆ, ಪಕ್ಷಿಗಳಿಗೆ ಧಕ್ಕೆ ಉಂಟಾಗುತ್ತದೆಂಬ ದೂರು ಕೇಳಿಬಂದಿವೆ. ಪಕ್ಷಿ ಸಂಕುಲಕ್ಕೆ ತೊಂದರೆಯಾಗದಂತೆ ಪರಿಸರ ಸ್ನೇಹಿ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಿರಿ ಎಂದು ಕಿವಿಮಾತು ಹೇಳಿದರು. ಕಳೆದ ಬಾರಿ ದಸರಾ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನವಷ್ಟೇ ಇತ್ತು.
ಈ ಬಾರಿ ಚಲನಚಿತ್ರ ನಿರ್ಮಾಣ, ನಿರ್ದೇಶನ, ಸಂಕಲನ, ಛಾಯಾಗ್ರಹಣ ಮುಂತಾದ ವಿಷಯಗಳ ಬಗ್ಗೆ ಪರಿಣಿತರಿಂದ ಕಾರ್ಯಾಗಾರಗಳನ್ನು ಆಯೋಜಿಸಿ ಎಂದು ಸೂಚಿಸಿದರು.