ಕಾವೇರಿ ನದಿಯೊಳಗೆ 15 ಕೊಪ್ಪರಿಕೆ ಪ್ರತ್ಯಕ್ಷ!
ಮೈಸೂರು, ಡಿಸೆಂಬರ್, 01 : ಕಾವೇರಿ ನದಿಯೊಳಗೆ ಕೊಪ್ಪರಿಕೆ ಪ್ರತ್ಯಕ್ಷವಾಗಿದೆ. ಇದನ್ನು ಓದಿ ಅಚ್ಚರಿಪಡಬೇಡಿ. ಇವು ಚಿನ್ನಾಭರಣ ತುಂಬಿದ ಕೊಪ್ಪರಿಕೆಗಳಲ್ಲ. ಮರಳು ದಂಧೆಕೋರರು ಮರಳು ತೆಗೆಯಲು ಬಳಸುತ್ತಿದ್ದ ಕೊಪ್ಪರಿಕೆಗಳು.
ಪೊಲೀಸರು ಚಾಪೆ ಕೆಳಗೆ ನುಸುಳಿದರೆ ಅಕ್ರಮ ಮರಳು ದಂಧೆಕೋರರು ರಂಗೋಲಿ ಕೆಳಗೆ ನುಸುಳುವ ಚಾಣಾಕ್ಷ್ಯತನ ತೋರುತ್ತಿದ್ದಾರೆ ಎಂಬುವುದಕ್ಕೆ ಮೈಸೂರು ಜಿಲ್ಲೆಯ ಬನ್ನೂರು ಬಳಿಯ ರಂಗಸಮುದ್ರ ಕಾವೇರಿ ನದಿಯಲ್ಲಿ ಅಡಗಿಸಿಟ್ಟ 15 ಕೊಪ್ಪರಿಕೆಗಳು ಸಾಕ್ಷಿಯಾಗಿವೆ.[ಮೈಸೂರಿನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡ ಮರಳು ಏನಾಯ್ತು?]
ಹಣವಿದ್ದರೆ ಚಿನ್ನವನ್ನು ಸುಲಭವಾಗಿ ತರಬಹುದು. ಆದರೆ ಮರಳು ತರುವುದು ಈಗ ಅಸಾಧ್ಯದ ಕೆಲಸವಾಗುತ್ತಿದೆ. ಹಣವಿದ್ದರೂ ಮರಳು ತಕ್ಷಣಕ್ಕೆ ಸಿಗುತ್ತಿಲ್ಲ. ಮತ್ತೊಂದೆಡೆ ಕಾಳಸಂತೆಯಲ್ಲಿ ಮರಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತದೆ. ಮರಳಿನ ಮಾರಾಟದಿಂದ ಕೈತುಂಬಾ ಹಣ ಸಿಗುವುದರಿಂದ ಪೊಲೀಸರ ಕಣ್ಣು ತಪ್ಪಿಸಿ ಮರಳಿನ ಮಾರಾಟ ನಡೆಯುತ್ತಿದೆ.
ಹಗಲಿನಲ್ಲಿ ನದಿಯಿಂದ ಮರಳು ತೆಗೆದರೆ ಪೊಲೀಸರು ದಾಳಿ ನಡೆಸಬಹುದೆಂಬ ಭಯದಿಂದ ರಾತ್ರಿಯೇ ಮರಳು ಕದ್ದು ಬೆಳಿಗ್ಗೆ ಆಗುವುದರೊಳಗೆ ಸುರಕ್ಷಿತ ಜಾಗಕ್ಕೆ ಒಯ್ಯಲಾಗುತ್ತಿದೆ. ಮರಳು ತೆಗೆಯುವಲ್ಲಿ ಬ್ರಹತ್ ಗಾತ್ರದ ಕೊಪ್ಪರಿಕೆಗಳನ್ನು ಬಳಸಲಾಗುತ್ತಿದ್ದು, ಅವುಗಳನ್ನು ಜನರಿಗೆ ಕಾಣದಂತೆ ನದಿಯೊಳಗೆ ಬಚ್ಚಿಡುವ ಕೆಲಸವೂ ನಡೆಯುತ್ತಿದೆ.[ಅಕ್ರಮ ಮರಳು ಗಣಿಗಾರಿಕೆ ಮಾಡಿದರೆ ಜೈಲು!]
ಮರಳು ದಂಧೆಯ ಮಾಹಿತಿ ಪಡೆದ ಬನ್ನೂರು ಎಸ್ಐ ರಾಘವೇಂದ್ರ ಗೌಡ ಮತ್ತು ನಾರಾಯಣ್ ಅವರ ತಂಡ ದಾಳಿ ನಡೆಸಿದ್ದಾರೆ. ಆದರೆ ರಂಗಸಮುದ್ರ ಹಾಗೂ ಹಿಟ್ವಳ್ಳಿ ಮರಳು ಮಾತ್ರ ಸಿಕ್ಕಿಲ್ಲ. ಪರಿಶೀಲನೆ ನಡೆಸಿದಾಗ ಮರಳು ತೆಗೆಯಲು ಬಳಸುತ್ತಿದ್ದ ಕೊಪ್ಪರಿಕೆಗಳು ನದಿ ಮಧ್ಯೆ ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿದ್ದು, ನುರಿತ ಈಜುಗಾರರ ಮೂಲಕ ನದಿಯಿಂದ ಹೊರತೆಗೆಯಲಾಗಿದೆ. ಒಟ್ಟಾರೆ 15 ಕೊಪ್ಪರಿಗೆಗಳು ದೊರೆತಿದ್ದು ಎಲ್ಲವನ್ನು ವಶಕ್ಕೆ ಪಡೆಯಲಾಗಿದೆ.