ನಂಜನಗೂಡು ಕಪಿಲಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ
ನಂಜನಗೂಡು, ನವೆಂಬರ್ 11: ನಂಜನಗೂಡು ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ಮತ್ತೆ ತಲೆ ಎತ್ತಿದ್ದು, ಕಪಿಲಾ ನದಿಯಿಂದ ಮರಳು ತೆಗೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ತಹಸೀಲ್ದಾರ್ ನೇತೃತ್ವದ ತಂಡ ಎರಡು ಟ್ರ್ಯಾಕ್ಟರ್ ನಷ್ಟು ಮರಳು ಹಾಗೂ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಹರಿಗೋಲು ಗಳನ್ನು ವಶಕ್ಕೆ ಪಡೆದು, ನಾಶಪಡಿಸಿದೆ.
ತಾಲೂಕಿನ ಆಲಂಬೂರು ಗ್ರಾಮದಿಂದ ಹರಿಗೋಲುಗಳನ್ನು ಬಳಸಿಕೊಂಡು ನದಿಯನ್ನು ದಾಟಿ, ಬೊಕ್ಕಹಳ್ಳಿಯ ಬಳಿ ಮರಳನ್ನು ತುಂಬಿಕೊಂಡು ಬಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಇದಕ್ಕೆ ಗ್ರಾಮದ ಕೆಲವರ ಬೆಂಬಲವಿತ್ತು ಎಂದು ಸಹ ಆರೋಪಿಸಲಾಗಿದೆ.[ದಕ್ಷಿಣ ಕನ್ನಡದಲ್ಲಿ ಮರಳು ಗಣಿಗಾರಿಕೆಗೆ ಹೊಸ ನಿಯಮ]
ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ದಯಾನಂದ್ ದಾಳಿಗೆ ಮುಂದಾದರು. ಬಿಳಿಕೆರೆ ಪೊಲೀಸ್ ಠಾಣೆ ಎಎಸೈ ಲೋಕೇಶ್, ಗ್ರಾಮಲೆಕ್ಕಾಧಿಕಾರಿ ಹರೀಶ್, ಕಂದಾಯಾಧಿಕಾರಿ ಮಹದೇವಪ್ರಸಾದ್ ಅವರ ಸಹಕಾರದೊಂದಿಗೆ ದಾಳಿ ನಡೆಸಿದ್ದಾರೆ.[ಮಂಗಳೂರು: ಪೊಲೀಸರನ್ನು ಕಂಡು ಫಲ್ಗುಣಿ ನದಿಗೆ ಹಾರಿ ಪ್ರಾಣ ತೆತ್ತ]
ಈ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿಗಳು ಪರಾರಿಯಾಗಿದ್ದು, ಸುಮಾರು ಎರಡು ಟ್ರ್ಯಾಕ್ಟರ್ ನಷ್ಟು ಮರಳು ಹಾಗೂ ನದಿಯಿಂದ ಮರಳು ತೆಗೆಯಲು ಉಪಯೋಗಿಸುತ್ತಿದ್ದ ಹರಿಗೋಲುಗಳನ್ನು ವಶಪಡಿಸಿಕೊಂಡು ನಾಶ ಮಾಡಲಾಗಿದೆ.