ಕಸಾಯಿಖಾನೆಗೆ ರೈತರ ಜಾನುವಾರುಗಳ ಅಕ್ರಮ ಸಾಗಾಟ
ಮೈಸೂರು, ಮೇ 11 : ಮಳೆಬಾರದೆ ಬರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಸಾಕಲಾಗದ ಬಡಪಾಯಿ ರೈತರು ತಮ್ಮ ಬಳಿಯಿರುವ ಜಾನುವಾರುಗಳನ್ನು ಮಾರಿ ಬದುಕುವ ಸ್ಥಿತಿಗೆ ತಲುಪಿದ್ದಾರೆ. ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವರು, ಕಡಿಮೆ ಬೆಲೆಗೆ ಖರೀದಿಸಿ ಕಸಾಯಿಖಾನೆಗೆ ಸಾಗಿಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.
ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವ ಜಾಲ ಕಾರ್ಯಾಚರಿಸುತ್ತಿದ್ದು, ಬಡವರ ಜಾನುವಾರುಗಳನ್ನು ಕಟುಕರಿಗೆ ಕಳಿಸಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಇದೊಂದು ರೀತಿಯಲ್ಲಿ ಉರಿಯುವ ಮನೆಯಲ್ಲಿ ಚಳಿ ಕಾಯಿಸಿಕೊಂಡರು ಎಂಬಂತಾಗಿದೆ. [ಬಸವ ಜಯಂತಿಯಂದೇ ಬೆಟ್ಟದಪುರದಲ್ಲಿ ಗೋಹತ್ಯೆ!]
ಇನ್ನು ಪಿರಿಯಾಪಟ್ಟಣ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಜಾನುವಾರು, ಮೇಕೆ, ಕುರಿಗಳನ್ನು ಕದಿಯುವ ದುಷ್ಕೃತ್ಯಗಳು ಕೂಡ ನಡೆಯುತ್ತಿದ್ದು, ಜನ ಭಯಭೀತರಾಗಿದ್ದಾರೆ. ಈಗಾಗಲೇ ಪಿರಿಯಾಪಟ್ಟಣ ತಾಲೂಕಿನ ರಾಜನಬಿಲಗೂಲಿ, ಸೂಳೆಕೋಟೆ, ಕಣಗಾಲು ಗ್ರಾಮಗಳಲ್ಲಿ ಕಳ್ಳತನದ ಪ್ರಕರಣಗಳು ನಡೆದಿವೆ. ಪೊಲೀಸರಿಗೂ ಈ ಸಂಬಂಧ ಗ್ರಾಮಸ್ಥರು ದೂರು ನೀಡಿದ್ದಾರೆ.
ಜಾನುವಾರುಗಳನ್ನು ಕಡಿಮೆ ಬೆಲೆಗೆ ಖರೀದಿಸುವ ಖದೀಮರು, ಬಳಿಕ ಅವುಗಳನ್ನು ಮುಚ್ಚಿದ ವಾಹನಗಳಲ್ಲಿ ವಸ್ತುಗಳನ್ನು ಸಾಗಾಟ ಮಾಡುವಂತೆ ತುಂಬಿ ಸಾರ್ವಜನಿಕರು ಹಾಗೂ ಪೊಲೀಸರಿಗೆ ಸಂಶಯ ಬಾರದಂತೆ ಸಾಗಿಸುತ್ತಿದ್ದಾರೆ. [ಪತ್ರ : ಗಟ್ಟಿಮುಟ್ಟಾದ ತರ್ಕವಿಲ್ಲದ ಬಾಲಿಶ ವಿಚಾರಧಾರೆ]
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಎಮ್ಮೆಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಪ್ರಕರಣವನ್ನು ಭೇದಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಚಿಕ್ಕನೇರಳೆ ಗ್ರಾಮದ ನಜೀಬ್(22) ಮತ್ತು ಕೂರಗಲ್ಲು ಗ್ರಾಮದ ಮಂಜು(20) ಎಂಬುವರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇದರಿಂದ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೆಳಕಿಗೆ ಬಂದಿದ್ದು, ಈಗಾಗಲೇ ಅದೆಷ್ಟು ಜಾನುವಾರುಗಳು ಕಟುಕರ ಪಾಲಾಗಿವೆಯೋ ದೇವರಿಗೇ ಗೊತ್ತು. ಸದ್ಯ ಖಚಿತ ಮಾಹಿತಿ ಮೆರೆಗೆ ಪಿರಿಯಾಪಟ್ಟಣ ಸಿಪಿಐ ಪ್ರಸನ್ನಕುಮಾರ್ ಅವರ ಮಾರ್ಗದರ್ಶನದಲ್ಲಿ ಎಎಸ್ಐ ಜಯಸ್ವಾಮಿ ಮತ್ತು ತಂಡ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿ ಪ್ರಕರಣ ಪತ್ತೆ ಹಚ್ಚಿದ್ದು, ಕೃತ್ಯಕ್ಕೆ ಬಳಸಿದ ಮಿನಿ ವ್ಯಾನ್ (ಕೆಎ 45 8819) ಮತ್ತು ನಾಲ್ಕು ಎಮ್ಮೆ ಕರುಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.