ಮೈಸೂರು ಚಾಮುಂಡಿ ಬೆಟ್ಟದಲ್ಲಿ 'ಆಪರೇಷನ್ ಚಾಮುಂಡಿ' ಯಾಕೆ?
ಮೈಸೂರು, ಜುಲೈ, 02: ಮೈಸೂರಿನ ಚಾಮುಂಡಿ ಬೆಟ್ಟ ಮೋಜು ಮಸ್ತಿ ಮಾಡುವವರಿಗೆ, ಹುಚ್ಚು ಸೆಲ್ಫಿ ತೆಗೆದುಕೊಳ್ಳುವವರಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿರುವುದು ದುರ್ದೈವ. ಇಲ್ಲಿ ಯಾವುದೇ ರೀತಿಯ ಕಟ್ಟು ನಿಟ್ಟಿನ ಕ್ರಮ ಕೈಗೊಂಡರೂ ಅದನ್ನು ಗಾಳಿಗೆ ತೂರುವವರ ಸಂಖ್ಯೆ ಜಾಸ್ತಿಯಾಗಿದೆ. ಹಾಗಾಗಿ ಮೈಸೂರು ಪೊಲೀಸರು ಆಪರೇಶನ್ ಚಾಮುಂಡಿ ಆರಂಭ ಮಾಡಿದ್ದಾರೆ.
ಇದೀಗ ಕೆಲವರು ಸೆಲ್ಫಿ ತೆಗೆದುಕೊಳ್ಳುವ ಗೀಳನ್ನು ಮೈಗೆ ಹತ್ತಿಸಿಕೊಂಡಿರುವುದರಿಂದ ಯಾವುದಾದರೂ ರೀತಿಯ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಇದಕ್ಕೆ ಚಾಮುಂಡಿಬೆಟ್ಟವೂ ಹೊರತಾಗಿಲ್ಲ.[ಚಾಮುಂಡಿ ಬೆಟ್ಟದಲ್ಲಿ ಸಂತೆ ಮಾಡಬೇಕಾ? ಭೈರಪ್ಪ ಪ್ರಶ್ನೆ]
ಚಾಮುಂಡಿಬೆಟ್ಟದ ಸುತ್ತಮುತ್ತ ಹಾಗೂ ದೇವಸ್ಥಾನ ಬಳಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತೊಂದರೆಯೇನಿಲ್ಲ ಬಿಡಿ. ಆದರೆ ಕೆಲವರು ಶೂ, ಚಪ್ಪಲಿ ಹಾಕಿಕೊಂಡೇ ಗೋಪುರ ಏರಿ ಸೆಲ್ಫಿ ತೆಗೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಗೋಪುರದ ಮೇಲೆ ಸಿಸಿಟಿವಿ ಕ್ಯಾಮರಾ ಅಳವಡಿಸಲು ತೆರಳಿದ ಕೆಲವು ಇಂಜಿನಿಯರ್ ಮರಳುವಾಗ ಬಾಗಿಲು ಹಾಕದೆ ಬಂದ ಪರಿಣಾಮ ಮೇಲೆರಿದ ಕಿಡಿಗೇಡಿಗಲು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯವೂ ಸೆರೆಯಾಗಿದೆ. ತೆರೆದ ಬಾಗಿಲು ಮೂಲಕ ಗೋಪುರವನ್ನೇರಿದ ಕಿಡಿಗೇಡಿಗಳು ಸೆಲ್ಫಿ ತೆಗೆದುಕೊಂಡಿದ್ದಾರೆ. ಇದನ್ನು ನೋಡಿದ ಭಕ್ತರು ಅವರನ್ನು ಕೆಳಗಿಸಿ ತೆಗೆದಿದ್ದ ಬಾಗಿಲನ್ನು ಹಾಕಿಸಿದ್ದಾರೆ.[ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಿ ಚಾಮುಂಡಿ ಬೆಟ್ಟ ಉಳಿಸಿ]
ಇನ್ನು ಚಾಮುಂಡಿಬೆಟ್ಟದ ಸುತ್ತಮುತ್ತ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದ್ದು, ಪುಂಡಪೋಕರಿಗಳ ಹಾವಳಿಯೂ ಹೆಚ್ಚಾಗಿದೆ. ಇದರಿಂದ ಪ್ರವಾಸಿಗರು ಮುಜುಗರಕ್ಕೀಡಾಗುತ್ತಿದ್ದಾರೆ.['ತಿರುಪತಿ ಮಾದರಿಯಲ್ಲಿ ಚಾಮುಂಡಿ ಬೆಟ್ಟ ಅಭಿವೃದ್ಧಿ']
ಈ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದ ಹಿನ್ನಲೆಯಲ್ಲಿ ಎಚ್ಚೆತ್ತ ಪೊಲೀಸರು ಆಪರೇಷನ್ ಚಾಮುಂಡಿಯನ್ನು ಆರಂಭಿಸಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಗಸ್ತು ತಿರುಗುವ ಈ ತಂಡ ಅನೈತಿಕ ಚಟುವಟಿಕೆಯಲ್ಲಿ ತೊಡಗಿದವರು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ.
ಇದಕ್ಕಾಗಿ ಕೆ.ಆರ್. ಠಾಣೆ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ವಿದ್ಯಾರಣ್ಯಪುರಂ ಇನ್ಸ್ ಪೆಕ್ಟರ್ ರಘು ಹಾಗೂ ಸಿಬ್ಬಂದಿ ಸಜ್ಜಾಗಿದ್ದು ಗಸ್ತು ಆರಂಭಿಸಿದ್ದಾರೆ. ಇನ್ನಾದರೂ ಚಾಮುಂಡಿಬೆಟ್ಟದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.