ಕಂಬಳಕ್ಕೆ ಅನುಮತಿ ನೀಡದಿದ್ದರೆ ರಾಜಭವನಕ್ಕೆ ಮುತ್ತಿಗೆ : ವಾಟಾಳ್ ಕಿಡಿ
ಮೈಸೂರು, ಜನವರಿ 24 : ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಿರುವಂತೆ ರಾಜ್ಯದಲ್ಲೂ ಕಂಬಳ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿ ಕನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ತಮಟೆ ಬಾರಿಸುವ ಪ್ರತಿಭಟನೆ ನಡೆಸಿದರು.
ಮೈಸೂರಿನ ರೈಲ್ವೆ ನಿಲ್ದಾಣದ ಬಳಿಯಿರುವ ಬಾಬು ಜಗಜೀವನ್ ರಾಮ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಾಟಾಳ್ ನಾಗರಾಜ್ ಮಾತನಾಡಿ, ರಾಜ್ಯದ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿವೆ. ಕಂಬಳಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ಇದೇ ಜನವರಿ 25 ರಂದು ರಾಜಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.[ಕಾವೇರಿ ವಿವಾದ : ಸೆ.19ರಂದು ಹೊಸೂರು-ಕರ್ನಾಟಕ ಗಡಿ ಬಂದ್]
ಇನ್ನು ಕಂಬಳಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸದಿದ್ದರೇ ಬರುವ ಫೆಬ್ರುವರಿ 18 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ನೂರಾರು ಕನ್ನಡಪರ ಹೋರಾಟಗಾರರು ಪಾಲ್ಗೊಂಡಿದ್ದರು.
ಕಂಬಳಕ್ಕಾಗಿ ಹೋರಾಟ ಮಾಡುವುದನ್ನು ತಮಿಳುನಾಡಿನ ಜನರು ಜಲ್ಲಿಕಟ್ಟಿನ ಮೂಲಕ ರಾಜ್ಯಕ್ಕೆ ತಿಳಿಸಿಕೊಟ್ಟಿದ್ದಾರೆ. ಕನ್ನಡಪರ ಸಂಘಟನೆಗಳು, ಕಂಬಳ ಸಮಿತಿ ಕಂಬಳಕ್ಕಾಗಿ ಜಾಗೃತರಾಗಿದ್ದಾರೆ. ಇನ್ನು ಹೈಕೋರ್ಟಿನಲ್ಲಿ ಜನವರಿ 28ರಂದು ಕಂಬಳ ನಿಷೇಧ ಕುರಿತು ವಿಚಾರಣೆ ನಡೆಯಲಿದೆ.
ಕಂಬಳ, ಕಾವೇರಿ, ಮಹದಾಯಿ ಸುಗ್ರಿವಾಜ್ಞೆಗೆ ಒತ್ತಾಯ: ಧರಣಿ
ಮೈಸೂರು : ಕರ್ನಾಟಕದಲ್ಲಿ ಕಂಬಳ ನಡೆಸುವಂತೆ ಹಾಗೂ ಕಾವೇರಿ, ಮಹದಾಯಿ ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸಿ ಕರ್ನಾಟಕ ಕಾವಲು ಪಡೆ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ನ್ಯಾಯಾಲಯದ ಬಳಿಯಿರುವ ಮಹಾತ್ಮಾ ಗಾಂಧೀ ಪ್ರತಿಮೆ ಎದುರು ಕರ್ನಾಟಕ ಕಾವಲು ಪಡೆ ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳನ್ನು ಸಾಂಕೇತಿಕವಾಗಿ ತಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಮಾತನಾಡಿ ಮಹದಾಯಿ ಕಾವೇರಿ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಪರವಾಗಿ ಕಾಳಜಿ ತೋರಿಸಿಲ್ಲ. ರಾಜ್ಯದ ಹಿತಕ್ಕಾಗಿ ಹಲವಾರು ಬಾರಿ ಮುಖ್ಯಮಂತ್ರಿಗಳು ಸಮಯ ಕೋರಿದರೂ ಸಮಯ ನೀಡಿಲ್ಲ. ಇದೀಗ ರಾಜ್ಯ ರಾಜ್ಯಗಳ ನಡುವೆ ಮಲತಾಯಿ ಧೋರಣೆ ತಾಳಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರಕ್ಕೆ ಒಬ್ಬ ಸಂಸದನನ್ನು ನೀಡದ ತಮಿಳುನಾಡು ಸರ್ಕಾರದ ಮುಂದೆ ಮಂಡಿಊರಿದೆ. ತಮಿಳುನಾಡಿನ ಜಲ್ಲಿಕಟ್ಟಿಗೆ ಸುಗ್ರೀವಾಜ್ಞೆ ಹೊರಡಿಸಿರುವುದು ಅನುಮಾನಕ್ಕೆ ಎಡೆಮಾಡಿದೆ. ಕೇಂದ್ರ ಸರ್ಕಾರ ಕರಾವಳಿಯ ಕಂಬಳ ಕ್ರೀಡೆಗೂ ಹಾಗೂ ಕಾವೇರಿ ಮತ್ತು ಮಹದಾಯಿ ವಿಚಾರದಲ್ಲೂ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ರಾಜ್ಯಗಳ ನಡುವೆ ತಾರತಮ್ಯ ತೋರಿಸಬಾರದು ಎಂದರು.