ರಾಜ ಕಾಲುವೆ ಒತ್ತುವರಿಯಾಗಿದ್ದರೆ ನಾನೇ ಅಗೆದುಕೊಡ್ತೀನಿ: ನಟ ದರ್ಶನ್
ಮೈಸೂರು, ಸೆಪ್ಟೆಂಬರ್ 3: ನನ್ನ ಮನೆಯಿಂದ ರಾಜಕಾಲುವೆ ಒತ್ತುವರಿಯಾಗಿದ್ದರೆ ನಾನೇ ಸ್ವತಃ ಅಗೆದುಕೊಡುತ್ತೇನೆ. ಕಾನೂನು ಎಲ್ಲರಿಗೂ ಒಂದೇ ಎಂದು ನಟ ದರ್ಶನ್ ಹೇಳಿದ್ದಾರೆ. ಶುಕ್ರವಾರ ನಾಗರಹಾವು ಸಿನಿಮಾ ಡ್ಯಾನ್ಸ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಕಾಲುವೆ ಒತ್ತುವರಿಯಾಗಿ ನನ್ನ ಮನೆಯಿದ್ದರೆ ನಾನೇ ಬರೆದುಕೊಟ್ಟು ಬಿಡ್ತೀನಿ. ಎಲ್ಲರಿಗೂ ಒಂದೇ ನ್ಯಾಯ ಸ್ವಾಮಿ. ಎಲ್ಲರಿಗೂ ಏನಾಗುತ್ತದೆಯೋ ನನಗೂ ಅದೇ ಆಗುತ್ತದೆ. ಆದರೆ ಈ ಬಗ್ಗೆ ನನಗೆ ಸರಿಯಾಗಿ ಮಾಹಿತಿಯಿಲ್ಲ. ನನ್ನದು 100x200 ನಿವೇಶನ ಅಲ್ಲ 40 x50 ನಿವೇಶನ. ಅಧಿಕಾರಿಗಳು ನಿವೇಶನದ ಸರ್ವೇ ಮಾಡಿದ್ದಾರೆ ಈ ಬಗ್ಗೆ ಇನ್ನೂ ವರದಿ ಕೊಟ್ಟಿಲ್ಲ ಎಂದರು.[ರಾಜಕಾಲುವೆ ಒತ್ತುವರಿ ತೆರವು ಎಂಬ ನಿಗೂಢ ರಹಸ್ಯ!]
ಕಾನೂನು ಪ್ರಕಾರ ಉಳಿದವರಿಗೆ ಏನಾಗುತ್ತದೆಯೋ ನನಗೂ ಆಗಲಿ. ಇದು ನಮ್ಮನೆ ಆರ್ಡರ್ ಅಲ್ಲ. ಸುಪ್ರೀಂಕೋರ್ಟ್ ಆದೇಶ ಎಂದು ಅವರು ಹೇಳಿದರು. ಆ ನಂತರ ಹಾಡಿನ ಚಿತ್ರೀಕರಣದ ಬಗ್ಗೆ ಹೇಳಿದ ಅವರು, ನಾಗರಹಾವು ಚಿತ್ರದ ಹಾಡೊಂದರಲ್ಲಿ ನಟಿಸಿ ಮೇರುನಟನಿಗೆ ಈ ಮೂಲಕ ನಾನು ಗೌರವ ಸಲ್ಲಿಸುತ್ತಿದ್ದೇನೆ. ನಾನು ಮತ್ತು ಅವರು ಮೈಸೂರಿನಿಂದ ಚಿತ್ರರಂಗಕ್ಕೆ ಬಂದವರು ಎಂದರು.['ನಾಗರಹಾವು' ಸೆಟ್ ನಲ್ಲಿ 'ರಾಜಕಾಲುವೆ' ಬಗ್ಗೆ ಗುಡುಗಿದ ದರ್ಶನ್]
ನಾಗರಹಾವು ಚಿತ್ರದ ಟೈಟಲ್ ಸಾಂಗ್ ನಲ್ಲಿ ನಟ ದರ್ಶನ್ ಕಾಣಿಸಿಕೊಳ್ಳುತ್ತಿದ್ದು, ಚಿತ್ರೀಕರಣ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭರದಿಂದ ಸಾಗುತ್ತಿದೆ. ಚಿತ್ರೀಕರಣ ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದು, ಸೆಲ್ಫಿ ತೆಗೆಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಅದರೆ ನಿರಾಸೆಯಿಂದ ಹಿಂತಿರುಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.[ಒತ್ತುವರಿ ತೆರವಿಗೆ ತೊಂದರೆ ಇಲ್ಲ ಎಂದ ದರ್ಶನ್]
ಚಿತ್ರೀಕರಣ ಶನಿವಾರವೂ ನಡೆಯುತ್ತಿದ್ದು, ನಟ ದರ್ಶನ್ ಅವರೊಂದಿಗೆ ಸಹಕಲಾವಿದರು ಹೆಜ್ಜೆ ಹಾಕುತ್ತಿದ್ದಾರೆ. ನಾಗರಹಾವು ಚಿತ್ರದ ಟ್ರೇಲರ್ ಈಗಾಗಲೇ ಹೊಸ ಅಲೆ ಸೃಷ್ಟಿಸಿದ್ದು, ಹಾಡುಗಳು ಬಿಡುಗಡೆಯಾದ ನಂತರ ಮತ್ತಷ್ಟು ಜನಪ್ರಿಯವಾಗುತ್ತದೆ ಎಂದು ನಟ ದರ್ಶನ್ ಭವಿಷ್ಯ ನುಡಿದರು.