ಹದಿನೈದು ದಿನದಲ್ಲಿ ಕಾಂಗ್ರೆಸ್ ಸೇರುವೆ : ವಿಜಯ ಶಂಕರ್ ಘೋಷಣೆ
ಮೈಸೂರು, ನವೆಂಬರ್ 07 : 'ಬಿಜೆಪಿಯಲ್ಲಿ ನನಗ ಅತೀವ ಅನ್ಯಾಯವಾಗಿದೆ. ನನ್ನ ಮಾತೃಪಕ್ಷ ಕಾಂಗ್ರೆಸ್ ಸೇರುವೆ. 15 ದಿನದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ' ಎಂದು ಮಾಜಿ ಸಚಿವ, ಕುರುಬ ಸಮುದಾಯದ ಪ್ರಭಾವಿ ಮುಖಂಡ ಸಿ.ಎಚ್.ವಿಜಯ ಶಂಕರ್ ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಬಿಜೆಪಿಯ ಚಟುವಟಿಕೆಗಳಿಂದ ಸಿ.ಎಚ್.ವಿಜಯ ಶಂಕರ್ ದೂರ ಉಳಿದಿದ್ದರು. ಮೈಸೂರಿನಲ್ಲಿ ನಡೆದ ಬಿಜೆಪಿಯ ರೈತ ಸಮಾವೇಶಕ್ಕೂ ಗೈರು ಹಾಜರಾಗಿದ್ದರು. ಆಗಲೇ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಅಕ್ಟೋಬರ್ 28ರಂದು ವಿಜಯ ಶಂಕರ್ ಬಿಜೆಪಿ ತೊರೆದಿದ್ದರು.
ಮೈಸೂರು ಬಿಜೆಪಿ ಸಮಾವೇಶಕ್ಕೆ ವಿಜಯ್ ಶಂಕರ್ ಗೈರು, ಪಕ್ಷಕ್ಕೆ ಹಿನ್ನಡೆ!
ವಿಜಯ ಶಂಕರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಅವರು, '15 ದಿನದಲ್ಲಿ ಕಾಂಗ್ರೆಸ್ ಸೇರಲಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೂ ಮಾತುಕತೆ ನಡೆಸಿದ್ದೇನೆ' ಎಂದು ತಿಳಿಸಿದ್ದಾರೆ.
ಸಿ.ಎಚ್.ವಿಜಯಶಂಕರ್ ಮನವೊಲಿಸಿದ ಬಿಜೆಪಿ ನಾಯಕರು
ಕುರುಬ ಸಮುದಾಯಕ್ಕೆ ಸೇರಿದ ಸಿ.ಎಚ್.ವಿಜಯ ಶಂಕರ್ ಮೈಸೂರು ಭಾಗದ ಪ್ರಭಾವಿ ಮುಖಂಡರು. ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದರೆ ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಲಿದೆ.
ಬಿಜೆಪಿಯಲ್ಲಿ ಅತೀವ ಅನ್ಯಾಯವಾಗಿದೆ
'ಬಿಜೆಪಿಯಲ್ಲಿ ನನಗೆ ಅತೀವ ಅನ್ಯಾಯವಾಗಿದೆ. ಇದೇ ಕಾರಣಕ್ಕೆ ಪಕ್ಷ ತೊರೆದಿದ್ದೇನೆ. ಹಿತೈಷಿಗಳ ಜೊತೆ ಚರ್ಚಿಸಿದ್ದು ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ. 15 ದಿನದಲ್ಲಿ ಕಾಂಗ್ರೆಸ್ ಸೇರುತ್ತೇನೆ' ಎಂದು ಸಿ.ಎಚ್.ವಿಜಯ ಶಂಕರ್ ಹೇಳಿದ್ದಾರೆ.
ಬಿಜೆಪಿ ಟಿಕೆಟ್ ಸಿಕ್ಕಿರಲಿಲ್ಲ
2014ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿ.ಎಚ್.ವಿಜಯ ಶಂಕರ್ ಬಯಸಿದ್ದರು. ಆದರೆ, ಪತ್ರಕರ್ತ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ನೀಡಿತು. ಹಾಸನ ಕ್ಷೇತ್ರದಲ್ಲಿ ವಿಜಯ ಶಂಕರ್ ಅವರಿಗೆ ಟಿಕೆಟ್ ನೀಡಲಾಯಿತು. ದೇವೇಗೌಡರ ವಿರುದ್ಧ ಅವರು ಸೋಲು ಅನುಭವಿಸಿದರು.
ಬಿಜೆಪಿ ನಾಯಕರು ಮನವೊಲಿಸಿದ್ದರು
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮೈಸೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕೋಟೆ ಶಿವಣ್ಣ ಸೇರಿದಂತೆ ಹಲವು ನಾಯಕರು ವಿಜಯ ಶಂಕರ್ ಮನವೊಲಿಸಿದ್ದರು. ಪಕ್ಷ ಬಿಡದಂತೆ ಮನವಿ ಮಾಡಿದ್ದರು.
ಮಾತೃಪಕ್ಷಕ್ಕೆ ವಾಪಸ್
'ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದೇನೆ. ನನ್ನ ಮಾತೃಪಕ್ಷ ಕಾಂಗ್ರೆಸ್ ಸೇರುವೆ' ಎಂದು ವಿಜಯ ಶಂಕರ್ ಹೇಳಿದ್ದಾರೆ. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಸೋಲಿಸಿದ್ದರು.
ಜಗದೀಶ್ ಶೆಟ್ಟರ್ ಸಂಪುಟದಲ್ಲಿದ್ದರು
2009ರ ಲೋಕಸಭೆ ಚುನಾವಣೆಯಲ್ಲಿ ಎಚ್.ವಿಶ್ವನಾಥ್ ವಿರುದ್ಧ ವಿಜಯ ಶಂಕರ್ ಸೋತಿದ್ದರು. 2010 ರಿಂದ 2016ರ ತನಕ ಪರಿಷತ್ ಸದಸ್ಯರಾಗಿದ್ದರು. ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಅರಣ್ಯ ಇಲಾಖೆ ಸಚಿವರಾಗಿದ್ದರು.